ದ.ಕ. ಜಿಲ್ಲೆಯಲ್ಲಿ ಕೋವಿಡ್‌-19ಗೆ ಮತ್ತೆ ಆರು ಮಂದಿ ಬಲಿ: ಮೃತರ ಸಂಖ್ಯೆ 63ಕ್ಕೆ ಏರಿಕೆ

Update: 2020-07-16 14:38 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜು.16: ದ.ಕ. ಜಿಲ್ಲೆಯಲ್ಲಿ ಕೋವಿಡ್‌-19ನಿಂದಾಗಿ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದ್ದು, ಒಂದೇ ದಿನ ಬರೋಬ್ಬರಿ ಆರು ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.

ಗುರುವಾರ ಮೃತಪಟ್ಟವರಲ್ಲಿ ಮಂಗಳೂರು ತಾಲೂಕಿನ ಮೂವರು, ಬಂಟ್ವಾಳ, ಮೂಲ್ಕಿ, ಬೆಳಗಾವಿ ಮೂಲದ ತಲಾ ಓರ್ವರು ಕೋವಿಡ್‌ಗೆ ಬಲಿಯಾಗಿದ್ದಾರೆ. ಮೃತಪಟ್ಟ ಎಲ್ಲರೂ 44ರಿಂದ 60 ವರ್ಷ ದಾಟಿದವರಾಗಿದ್ದಾರೆ. ಮೃತರು ವಿವಿಧ ರೋಗಳಿಂದ ಬಳಲುತ್ತಿದ್ದರು.

ಮಂಗಳೂರು ತಾಲೂಕಿನ 76 ವರ್ಷದ ವೃದ್ಧೆ ತೀವ್ರ ಉಸಿರಾಟ, ವಿವಿಧ ಅಂಗಾಂಗ ವೈಫಲ್ಯ, 66 ವರ್ಷದ ಪುರುಷ ಮೂತ್ರಪಿಂಡ ಸಮಸ್ಯೆ, ಮಧುಮೇಹ, ಹಿಮೊಗ್ಲೊಬಿನ್ ಸಮಸ್ಯೆ, 62 ವರ್ಷದ ಪುರುಷ ಯಕೃತ್, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು.

ಮೂಲ್ಕಿ ತಾಲೂಕಿನ 44 ವರ್ಷದ ವ್ಯಕ್ತಿಗೆ ಮೂತ್ರಪಿಂಡ ಸಮಸ್ಯೆ, ಬಂಟ್ವಾಳ ತಾಲೂಕಿನ 47 ವರ್ಷದ ಮಹಿಳೆಯು ಮಧುಮೇಹ, ದೀರ್ಘಕಾಲದ ಮೂತ್ರಪಿಂಡ ಸಮಸ್ಯೆ ಹಾಗೂ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ಮೂಲದ 68 ವರ್ಷದ ವೃದ್ಧ ಮಧುಮೇಹ, ಹೈಪರ್ಕಲೆಮಿಯಾ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News