ದರೋಡೆ ಪ್ರಕರಣ: ಆರೋಪಿ ಬಂಧನ
Update: 2020-07-16 16:11 GMT
ಮಂಗಳೂರು, ಜು.16: ದರೋಡೆ, ಹಲ್ಲೆ, ಅಪಘಾತ ಸಹಿತ ಹತ್ತಕ್ಕೂ ಅಧಿಕ ಪ್ರಕರಣದಲ್ಲಿದ್ದು ತಲೆಮರೆಸಿಕೊಂಡು ತಿರುಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ಸಮೀಪದ ಕಾಟಿಪಳ್ಳದ ಶಮ್ಮಿ ಯಾನೆ ಶಮೀರ್(30) ಬಂಧಿತ ಆರೋಪಿ. ಈತನನ್ನು ಎಸಿಪಿ ಬೆಳ್ಳಿಯಪ್ಪ ನೇತೃತ್ವದ ಪಣಂಬೂರು ರೌಡಿ ನಿಗ್ರಹದಳ ಹಾಗೂ ಪಣಂಬೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಈತ ಪಣಂಬೂರು, ಬಂದರು ವ್ಯಾಪ್ತಿಯಲ್ಲಿ ಬರುವ ಲಾರಿ ಚಾಲಕರಿಗೆ ಹಲ್ಲೆಗೈದು ದರೋಡೆ ಮಾಡಿ ಪರಾರಿಯಾಗುತ್ತಿದ್ದ ಎನ್ನಲಾಗಿದ್ದು, ಈ ಹಿಂದೆ ಎಎಸ್ಐ ಒಬ್ಬರಿಗೆ ರಾಡ್ನಿಂದ ಮಾರಣಾಂತಿಕ ಹಲ್ಲೆಗೈದ ಆರೋಪವೂ ಈತನ ಮೇಲಿದೆ. ಬೆಂಜನಪದವಿನಲ್ಲಿ ದ್ವಿಚಕ್ರ ವಾಹನಕ್ಕೆ ತನ್ನ ವಾಹನ ಢಿಕ್ಕಿ ಹೊಡೆಸಿ ಪರಾರಿಯಾಗಿದ್ದ. ಈತನ ವಿರುದ್ಧ ಹಲವು ವಾರೆಂಟ್ ಜಾರಿಯಾಗಿದ್ದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.