ಮಲ್ಪೆ: ಸಮುದ್ರಕ್ಕೆ ಬಿದ್ದು ನಾಡದೋಣಿ ಮೀನುಗಾರ ಸಾವು
Update: 2020-07-16 16:42 GMT
ಮಲ್ಪೆ, ಜು.15: ಮಲ್ಪೆ ಬಂದರಿನಿಂದ ನಾಡದೋಣಿ ಮೀನುಗಾರಿಕೆಗೆ ತೆರಳಿದ ಮೀನುಗಾರೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ತೊಟ್ಟಂ ಬಡಾನಿಡಿಯೂರು ನಿವಾಸಿ ಅಚ್ಯುತ್ತ ಸುವರ್ಣ(54) ಎಂದು ಗುರುತಿಸಲಾಗಿದೆ. ಇವರು ಶ್ರೀಗುರುರಾಘವೇಂದ್ರ ನಾಡದೋಣಿ ಯಲ್ಲಿ ಇತರ ಮೀನುಗಾರ ಜತೆಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಹೂಡೆ ಸಮೀಪದ ಸಮುದ್ರ ಮಧ್ಯೆ ಸುಮಾರು 5ಮಾರು ಆಳದೂರದಲ್ಲಿ ಮೀನಿಗೆ ಬಲೆ ಹಾಕುತ್ತಿರುವಾಗ ಅಬ್ಬರದ ಅಲೆ ಬಂದು ಇವರಿದ್ದ ದೋಣಿಗೆ ಬಡಿದ ಪರಿಣಾಮ ಅಚ್ಯುತ್ತ ಸುವರ್ಣ ಆಯತಪ್ಪಿ ನೀರಿಗೆ ಬಿದ್ದರೆನ್ನಲಾಗಿದೆ.
ಈ ವೇಳೆ ಜತೆಯಲ್ಲಿದ್ದವರು ತಕ್ಷಣ ನೀರಿಗಿಳಿದು ಅವರನ್ನು ಮೇಲಕ್ಕೆತ್ತಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.