ಕಿನ್ನಿಗೋಳಿ: ಸೇಂದಿ ತೆಗೆಯಲು ತಾಳೆಮರವೇರಿದ ವೇಳೆ ಮೂರ್ಛೆ ಹೋದ ವ್ಯಕ್ತಿ!

Update: 2020-07-16 17:46 GMT

ಮುಲ್ಕಿ, ಜು.16: ಶೇಂದಿ ತೆಗೆಯಲೆಂದು ತಾಳೆಮರವೇರಿದ ವ್ಯಕ್ತಿಯೊಬ್ಬರು ಮೂರ್ಛೆ ತಪ್ಪಿ ಎರಡು ಗಂಟೆ ಕಾಲ ಮರದಲ್ಲೇ ಬಾಕಿಯಾದ ಘಟನೆ ಕಿನ್ನಿಗೋಳಿ ಸಮೀಪದ ಕಡಂದಲೆ ಎಂಬಲ್ಲಿ ನಡೆದಿದೆ. ಬಳಿಕ ಅವರನ್ನು ಐಕಳ ಗ್ರಾಪಂ ಮಾಜಿ ಸದಸ್ಯ ಸುಧಾಕರ ಸಾಲ್ಯಾನ್ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ಸುಮಾರು 20 ವರ್ಷಗಳಿಂದ ಶೇಂದಿ ವ್ಯಾಪಾರ ಮಾಡುತಿದ್ದ ಕಡಂದಲೆ ಕಲ್ಲೋಳಿಯ ಸಂತೋಷ್ ಎಂಬವರು ಎಂದಿನಂತೆ ಬೆಳಗ್ಗೆ 6:30ರ ಸುಮಾರಿಗೆ ತಾಳೆ ಮರವೇರಿದವರು ಆಕಸ್ಮಿಕವಾಗಿ ಅಲ್ಲೇ ಮೂರ್ಛೆ ತಪ್ಪಿದ್ದಾರೆ. ಪರಿಣಾಮ 8:30ರವರೆಗೆ ತಾಳೆಮರದ ದಂಡುಗಳ ನಡುವೆ ಸಿಲುಕಿಕೊಂಡಿದ್ದರೆನ್ನಲಾಗಿದೆ. ಮರದ ಪಕ್ಕದಲ್ಲೇ ದಾರಿಯಲ್ಲಿ ಹೋಗುವವರು ಇದನ್ನು ಗಮನಿಸಿದರೂ ರಕ್ಷಿಸುವ ಸಾಹಸಕ್ಕೆ ಮುಂದಾಗಿರಲಿಲ್ಲ. ಈ ವೇಳೆ ಆ ದಾರಿಯಾಗಿ ಬಂದ ಸುಧಾಕರ್ ಸಾಲ್ಯಾನ್ ಅಗ್ನಿಶಾಮಕದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಸಂತೋಷ್‌ರನ್ನು ರಕ್ಷಿಸಿ ಕೆಳಗಿಳಿಸಿದ್ದಾರೆ.

ಬಳಿಕ ಸಂತೋಷ್‌ರನ್ನು ಸುಧಾಕರ ಸಾಲ್ಯಾನ್ ತನ್ನ ಮಿತ್ರರಾದ ಅಶೋಕ, ನಾರಾಯಣ, ದಿನೇಶರ ನೆರವಿನಿಂದ ತನ್ನ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ದಾರಿಮಧ್ಯೆ ಸಂತೋಷ್‌ರಿಗೆ ಪ್ರಜ್ಞೆ ಬಂದಿದ್ದರಿಂದ ಉಪಚರಿಸಿ ಮನೆಗೆ ಕರೆದೊಯ್ದು ಬಿಟ್ಟಿದ್ದಾರೆ. ಸುಧಾಕರ್‌ರ ಸಕಾಲಿಕ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News