ಉಡುಪಿ: ವಿಮಾ ಕಂಪೆನಿಯ ಗ್ರಾಹಕರ ಡಾಟಾ ಕಳವು; 9 ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2020-07-18 16:53 GMT

ಉಡುಪಿ, ಜು.18: ಉದ್ದಿಮೆ, ಕೈಗಾರಿಕೆ, ವಾಣಿಜ್ಯ ಸಂಸ್ಥೆಗಳಿಗೆ ಸಂಬಂಧಿಸಿದ ವಿಮಾ ಸೌಲಭ್ಯವನ್ನು ಒದಗಿಸಿಕೊಡುವ ಟಾರ್ಜನಿ ಇನ್ಸೂರೆನ್ಸ್ ಬ್ರೋಕಿಂಗ್ ಪ್ರೈ.ಲಿಮಿಟೆಡ್ ಉಡುಪಿ ಶಾಖೆಯ ಗ್ರಾಹಕರ ಡಾಟಾವನ್ನು ಕಳವು ಮಾಡಿರುವ ಒಂಭತ್ತು ಮಂದಿ ವಿರುದ್ದ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹೇಶ್ ಠಾಕೂರು ನಿರ್ದೇಶಕರಾಗಿರುವ ಈ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಮಣಿಪಾಲದ ಈಶ್ವರ ಕುರುಡೇಕರ್(65), ಮಂಗಳೂರಿನ ಮಿಹಿರ್ ಆರ್.ರಾವಲ್(44), ಪ್ರವೀಣ್ ಕುಮಾರ್(48), ವರುಣ್ ಬೋಳಾರ್ (37), ವಿಕ್ರಂ ಸಿಂಗ್(29), ಹರ್ಷಿತ್(31), ಸಂದೇಶ ಆಚಾರ್(26), ಶೋಬಿತ್ ನಾಯಕ್(34), ಬ್ರಹ್ಮಾವರದ ಹರೀಶ್ ಆಚಾರ್(33) ಎಂಬವರು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಗ್ರಾಹಕರ ಆಸ್ತಿಯ, ವಿಮಾಪಾಲಿಸಿಗಳ ವಿವರಗಳನ್ನು ಅಂದರೆ ಗ್ರಾಹಕರ ಡಾಟಾವನ್ನು ಕಳವು ಮಾಡಿದ್ದರು.
ಈ ಡಾಟಾವನ್ನು ಬಳಸಿಕೊಂಡ ಆರೋಪಿಗಳು ಸಂಸ್ಥೆಯ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ ವಾಹನದ ವಿಮಾ ನವೀಕರಣ ಪ್ರಕ್ರಿಯೆಯನ್ನು ನಡೆಸಿದ್ದರು. ಅದೇ ರೀತಿ ಒಟ್ಟು 7 ವಿಮಾ ಪಾಲಿಸಿಗಳನ್ನು ನವೀಕರಣಗೊಳಿಸುವ ಬಗ್ಗೆ ಗ್ರಾಹಕರಿಗೆ ಈ-ಮೇಲ್ ಮುಖಾಂತರ ಮಾಹಿತಿಯನ್ನು ಹಂಚಿಕೊಂಡಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News