ಕ್ವಾರಂಟೈನ್ ಆದೇಶ ಉಲ್ಲಂಘನೆ: ಸುಳ್ಯದಲ್ಲಿ ಐವರ ವಿರುದ್ಧ ಪ್ರಕರಣ ದಾಖಲು
ಸುಳ್ಯ, ಜು.19: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರ ಎಂಆರ್ಐ ಸ್ಕಾನಿಂಗ್ ಯಂತ್ರ ದುರಸ್ತಿಗೆ ತಮಿಳುನಾಡಿನಿಂದ ಆಗಮಿಸಿದ್ದ ಮೂವರ ಸಹಿತ ಐವರ ವಿರುದ್ಧ ಕ್ವಾರಂಟೈನ್ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
ಸುಳ್ಯದ ಖಾಸಗಿ ಆಸ್ಪತ್ರೆಯೊಂದರ ಎಂಆರ್ಐ ಸ್ಕಾನಿಂಗ್ ಯಂತ್ರ ಕೆಟ್ಟು ಹೋಗಿದ್ದು, ಇದರ ದುರಸ್ತಿಗಾಗಿ ಸು.15ರಂದು ತಮಿಳುನಾಡಿನಿಂದ ವಾನನ್ಸ್, ದೇವರಾಮನ, ಪ್ರೇಮಕುಮಾರ್ ಜಿ. ಹಾಗೂ ಗಾಂಧಿ ನಗರ ನಿವಾಸಿ ಪ್ರವೀಣ್ ಜಾರ್ಜ್ ಮತ್ತು ಬೆಳ್ಳಾರೆ ನಿವಾಸಿ ಶ್ರುತಿ ಸಿಎಸ್ ಎಂಬವರು ಆಗಮಿಸಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಇವರಿಗೆ ಕ್ವಾರಂಟೈನ್ಗೆ ಒಳಗಾಗಲು ತಾಲೂಕು ಆಡಳಿತ ಸೂಚಿಸಿತ್ತು. ಆದರೆ ಈ ಐವರು ಕೋವಿಡ್-19 ನಿಯಮವನ್ನು ಉಲ್ಲಂಘಿಸಿರುವುದಾಗಿ ಇವರ ವಿರುದ್ಧ ಸುಳ್ಯ ತಹಶೀಲ್ದಾರ್ ಅವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅದರಂತೆ ಐವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗ ಕಾಯ್ದೆ-2020ರಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.