×
Ad

ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ: ಹಾಲೆ ಕಷಾಯಕ್ಕೆ ಭಾರೀ ಬೇಡಿಕೆ

Update: 2020-07-20 11:52 IST
ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಆಟಿ ಕಷಾಯ ವಿತರಿಸಲಾಯಿತು

ಮಂಗಳೂರು, ಜು.20: ಆಷಾಡ ಮಾಸದ ಅಮಾವಾಸ್ಯೆಯನ್ನು ತುಳುನಾಡಿನಲ್ಲಿ ಆಟಿ ಅಮಾವಾಸ್ಯೆಯಾಗಿ ಆಚರಿಸುವ ಜತೆಗೆ ಈ ದಿನ ಹಾಲೆ ಮರದ ತೊಗಟೆ ಕಷಾಯವನ್ನು ಬೆಳಗ್ಗಿನ ಹೊತ್ತು ಸೇವಿಸಲಾಗುತ್ತದೆ. ಔಷಧೀಯವಾಗಿ ಈ ಕಷಾಯಕ್ಕೆ ಬಹಳಷ್ಟು ಮಹತ್ವವಿರುವುದರಿಂದ ಈ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಕಷಾಯಕ್ಕೂ ಈ ಬಾರಿ ಭಾರೀ ಬೇಡಿಕೆ ವ್ಯಕ್ತವಾಗಿದೆ.

ಹಿಂದಿನ ಕಾಲದಿಂದಲೂ ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ದಿನ ಹಾಲೆ ಮರದ ತೊಗಟೆ ಕಷಾಯ ಕುಡಿಯುವುದು ಸಂಪ್ರದಾಯವಾಗಿ ಬೆಳೆದು ಬಂದಿದೆ. ಕಳೆದ ಕೆಲ ವರ್ಷಗಳಿಂದ ನಗರದಲ್ಲಿಯೂ ಈ ಕಷಾಯವನ್ನು ಸಾಮೂಹಿಕವಾಗಿ ಸೇವಿಸಲಾಗುತ್ತಿತ್ತು. ಈ ಬಾರಿ ಕೊರೋನ ಹಿನ್ನೆಲೆಯಲ್ಲಿ ಸಾಮೂಹಿಕ ಸೇವನೆ ಸಾಧ್ಯವಾಗದಿದ್ದರೂ, ಮನೆಗಳಲ್ಲಿಯೇ ತಯಾರಿಸಿದ ಕಷಾಯಕ್ಕೆ ಅಕ್ಕಪಕ್ಕದವರಿಂದಲೂ ಬೇಡಿಕೆ ವ್ಯಕ್ತವಾಗಿದೆ. ಕಹಿಯಾಗಿರುವ ಈ ಮದ್ದು ರೋಗ ನಿರೋಧಕ ಶಕ್ತಿಯನ್ನೂ ಹೊಂದಿದೆ ಎಂಬ ಕಾರಣಕ್ಕೆ ಈ ಬಾರಿ ಕಾಯಕ್ಕೂ ಹೆಚ್ಚಿನ ಬೇಡಿಕೆ ದೊರಕಿದೆ.

ಆಟಿ ಅಮಾವಾಸ್ಯೆಯ ದಿನದಂದು ದ.ಕ. ಜಿಲ್ಲೆಯಾದ್ಯಂತ ಪ್ರಮುಖ ದೇವಸ್ಥಾನಗಳಲ್ಲಿ ಮುಖ್ಯಾಗಿ ಕಾರಿಂಜ, ಪಾಣೆಮಂಗಳೂರು ಸಮೀಪದ ನರಹರಿ ಪರ್ವತ, ಉಪ್ಪಿನಂಗಡಿಯ ಸಹಸ್ರ ಲಿಂಗೇಶ್ವರ ಕ್ಷೇತ್ರದಲ್ಲಿ ತೀರ್ಥಸ್ನಾನ ಮಾಡುವ ಸಂಪ್ರದಾಯವಿದ್ದರೂ ಕೊರೋನ ಹಿನ್ನೆಲೆಯಲ್ಲಿ ಇಂದು ತೀರ್ಥಸ್ನಾನ ನಡೆಯಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News