ಕೋವಿಡ್-19 ಮಧ್ಯೆ ಭಾರತದಲ್ಲಿ ಹೊಸ ಜಿಗಿಯುವ ಜೇಡ ಪತ್ತೆ

Update: 2020-07-20 12:57 GMT

ಮಂಗಳೂರು, ಜು.20: ಕೋವಿಡ್-19 ವೈರಸ್ ರೋಗದ ಮಧ್ಯೆ ಮುಂಬೈ, ಈಶಾನ್ಯ ಭಾರತ ಮತ್ತು ಯುಎಸ್‌ಎ ಮೂಲದ ಸಂಶೋಧಕರು ಭಾರತದ ಹೊಸ ಜಿಗಿಯುವ ಜೇಡ (ಜಂಪ್ಪಿಂಗ್ ಸ್ಪೈಡರ್) ಪತ್ತೆ ಆಗಿರುವುದನ್ನು ವರದಿ ಮಾಡಿದ್ದಾರೆ. ಥಿಯಾನಿಯಾ ಸಿಎಫ್. ಸಬೊಪ್ರೆಸಾ ಜಾತಿಯ ಜೇಡರ ಪತ್ತೆ ಬಗ್ಗೆ ಖ್ಯಾತ ಅಂತರ್‌ರಾಷ್ಟ್ರೀಯ ವಿಜ್ಞಾನ ಜರ್ನಲ್ ’ಪೆಕ್ಹಾಮಿಯಾ’ದಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ.

'ಪೆಕ್ಹಾಮಿಯಾ' ಜಂಪಿಂಗ್ ಜೇಡಗಳ ಅಧ್ಯಯನಕ್ಕೆ ಮಾತ್ರ ಮೀಸಲಾಗಿರುವ ವಿಶ್ವದ ಏಕೈಕ ವಿಜ್ಞಾನ ಜರ್ನಲ್ ಮತ್ತು ಈ ವಿಜ್ಞಾನ ಪ್ರಕಾಶನದಲ್ಲಿ ಅದ್ಭುತ ಜೇಡ ಪ್ರಭೇದಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ಸಂಶೋಧನೆಗಳನ್ನು ಪ್ರಕಟಿಸುತ್ತದೆ. ಈ ಪ್ರಭೇದವನ್ನು ಮೊದಲು ತ್ರಿಪುರ ಸರಕಾರದ ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಅಟನು ಚಕ್ರವರ್ತಿ ಅವರು ನಗರ ವನ್ಯಜೀವಿ ತೋಟದಲ್ಲಿ ಗಮನಿಸಿ ಛಾಯಾಚಿತ್ರಗಳನ್ನು ತೆಗೆದಿದ್ದರು. ಅನಂತರ ಮುಂಬೈ ಮೂಲದ ನೈಸರ್ಗಿಕವಾದಿ ಮತ್ತು ಅರಾಕ್ನಾಲಜಿಸ್ಟ್ ಜಾವೇದ್ ಅಹ್ಮದ್ ಮತ್ತು ಜಂಪಿಂಗ್ ಜೇಡಗಳ ಅಧ್ಯಯನದಲ್ಲಿ ಪರಿಣತಿ ಹೊಂದಿರುವ ಯುಎಸ್ ಮೂಲದ ಅರಾಕ್ನಾಲಜಿಸ್ಟ್ ಡಾ. ಡೇವಿಡ್ ಇ.ಹಿಲ್ ಅವರೊಂದಿಗೆ ಸಂಶೋಧನಾ ವರದಿ ತಯಾರಿಸಲು ಅರಣ್ಯಾಧಿಕಾರಿ ಕೈಜೋಡಿಸಿದರು.

ಆವಿಷ್ಕಾರವು ಮಹತ್ವದ್ದಾಗಿದೆ. ಏಕೆಂದರೆ ಇದು ಕಾಡಿನ ಒಳಭಾಗದಲ್ಲಿ ಪತ್ತೆಯಾಗದೆ ನಗರ ವನ್ಯಜೀವಿ ಉದ್ಯಾನದಲ್ಲಿ ಕಂಡುಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ನಿರಂತರವಾಗಿ ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಕ್ಷಿಪ್ರ ನಗರೀಕರಣದ ನೇರ ಪರಿಣಾಮವಾಗಿ ನಗರ ವನ್ಯಜೀವಿಗಳ ವಿದ್ಯಮಾನವು ಜಾಗತಿಕವಾಗಿ ಉಷ್ಣವಲಯದ ದೈತ್ಯ ಚಿಟ್ಟೆಗಳು ಮತ್ತು ಅಳಿವಿನಂಚಿನಲ್ಲಿರುವ ಗಿಡುಗಗಳಿಂದ ಹಿಡಿದು ಚಿರತೆಗಳು ಮತ್ತು ಪರ್ವತ ಸಿಂಹಗಳು (ಪೂಮಾ) ವರೆಗಿನ ಹಲವಾರು ಪ್ರಭೇದಗಳ ಜೀವಿಗಳ ಮೇಲೆ ನೇರ ದುಷ್ಪರಿಣಾವಾಗುತ್ತಿದೆ.‘ಜಾಗತಿಕ ಹವಾಮಾನ ಬದಲಾವಣೆ’ ಮತ್ತು ‘ಜೀವ ಸಂಕುಲ ನಾಶ’ ಎಂಬ ಚರ್ಚೆಯ ನಡುವೆಯು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನು ಕೂಡ ಇರುವ ನಗರ ಜೀವ ವೈವಿಧ್ಯಮಯ ಪ್ರದೇಶಗಳು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಹೆಚ್ಚು ಮಹತ್ವದ ಪಾತ್ರ ವಹಿಸಿದ್ದರೂ ಅವುಗಳ ಸಂರಕ್ಷಣೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಇಂತಹ ಜೀವವೈವಿಧ್ಯ ಪ್ರದೇಶಗಳಲ್ಲಿರುವ ಜಾಗತಿಕವಾಗಿ ಅಳಿವಿನ ಅಂಚಿಗೆ ಒಳಗಾಗಿರುವ ಭೂಮಂಡಲದ ಮಹತ್ವದ ಅಕಶೇರುಕಗಳು ಕಂಡುಬರುತ್ತಿದ್ದರೂ ಸಂರಕ್ಷಣೆ ಮತ್ತು ಸಂಶೋಧನಾ ಕಾರ್ಯಗಳು ಆಗುತ್ತಿಲ್ಲ.*ಮಂಗಳೂರು ಮೂಲದ ಶಸ್ತ್ರಚಿಕಿತ್ಸಕ ಡಾ.ಕೃಷ್ಣ ಮೋಹನ್ ಅವರು ಪರಿಣಿತ ನೈಸರ್ಗಿಕ ಕಾರ್ಯಕರ್ತ ಮತ್ತು ವನ್ಯಜೀವಿ ಸಂಶೋಧಕರಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಜತೆಗೆ ನುರಿತ ವನ್ಯಜೀವಿ ಛಾಯಾಗ್ರಾಹಕರಾಗಿಯು ಗುರುತಿಸಿಕೊಂಡಿದ್ದಾರೆ.

ಈ ಹಿಂದೆ ಅರಾಕ್ನಾಲಜಿಸ್ಟ್ ಜಾವೇದ್ ಅಹ್ಮದ್ ಅವರೊಂದಿಗೆ ದೇಶದ ಕೆಲವು ಮಹತ್ವದ ವನ್ಯಜೀವಿ ಆವಿಷ್ಕಾರಗಳ ಬಗ್ಗೆ ಸಹಕರಿಸಿದ್ದಾರೆ. ಅಪರೂಪದ ಜಿಗಿತದ ಜೇಡಗಳಾದ ಪೊರ್ಟಿಯಾ ಅಲ್ಬಿಮಾನಾ, ಬ್ರೆಟ್ಟಸ್ ಸಿಂಗ್ಯುಲಟಸ್ ಮತ್ತು ನಿಯೋಬ್ರೆಟಸ್ ಇತ್ಯಾದಿ ಅವುಗಳಲ್ಲಿ ಸೇರಿದೆ.

ಅತ್ಯಂತ ಅಪಾಯಕಾರಿ ವೇಗದಲ್ಲಿ ಹಸಿರು ವಲಯಗಳನ್ನು ಕಳೆದುಕೊಳ್ಳುತ್ತಿದ್ದೇವೆ ಮತ್ತು ಇಂತಹ ಜೀವಗಳ ಆವಾಸಸ್ಥಾನಗಳು ಶಾಶ್ವತವಾಗಿ ನಾಶವಾಗಿ ಹೋಗುವ ಮೊದಲು, ಜೀವವೈವಿಧ್ಯತೆಯನ್ನು ಸಾಧ್ಯವಾದಷ್ಟು ದಾಖಲಿಸಲು ಮತ್ತು ವರದಿ ಮಾಡಲು ಪ್ರಯತ್ನಿಸುವುದು ಅನಿವಾರ್ಯವಾಗಿದೆ.

ಪ್ರಪಂಚದಾದ್ಯಂತದ ಜನಸಂಖ್ಯೆ ಪ್ರಮಾಣ ಹೆಚ್ಚಳ ಮತ್ತು ಅತಿಯಾದ ನಗರೀಕರಣದ ವೇಗ ಇಂತಹ ಜೀವವೈವಿಧ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಕಾಡು ಮತ್ತಿತರ ಸಂರಕ್ಷಿತ ಪ್ರದೇಶಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಾಗಿದ್ದು, ನಗರ ಪ್ರದೇಶಗಳಲ್ಲಿರುವ ಹಸಿರು ಪ್ರದೇಶಗಳಾದ ಉದ್ಯಾನವನಗಳು,ನಗರ ವನ್ಯಜೀವಿ ಪಾರ್ಕುಗಳು ಮಾತ್ರವಲ್ಲದೆ ಕೃ ಷಿ ಭೂಮಿಯ ರೂಪದಲ್ಲಿರುವ ಹಸಿರುವ ಪ್ರದೇಶಗಳಲ್ಲಿ ಕೂಡ ಜೀವವೈವಿಧ್ಯ ಸಂರಕ್ಷಣೆಗೆ ಒತ್ತು ನೀಡಬೇಕಾಗಿದೆ ಎಂದು ಡಾ.ಕೃಷ್ಣ ಮೋಹನ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News