ಅಯೋಧ್ಯೆಯ ಕಲಾಕೃತಿಗಳ ಸಂರಕ್ಷಣೆ ಕೋರಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಪಿಐಎಲ್ ತಿರಸ್ಕೃತ
ಹೊಸದಿಲ್ಲಿ, ಜು. 20: ಅಯೋಧ್ಯೆಯ ರಾಮಜನ್ಮಭೂಮಿ ನಿವೇಶನದಲ್ಲಿ ಪತ್ತೆಯಾಗಿರುವ ಕಲಾಕೃತಿಗಳ ಸಂರಕ್ಷಣೆ ಕೋರಿ ಸಲ್ಲಿಸಲಾದ ಎರಡು ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಸುಪ್ರೀಂ ಕೋರ್ಟ್ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ ಇಬ್ಬರು ದೂರುದಾರರಿಗೆ ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿದೆ ಹಾಗೂ ತಿಂಗಳ ಒಳಗೆ ದಂಡ ಪಾವತಿಸುವಂತೆ ಸೂಚಿಸಿದೆ.
ಇದರ ಬಗ್ಗೆ ಐವರು ಸದಸ್ಯರ ನ್ಯಾಯಪೀಠ ಈಗಾಗಲೇ ತೀರ್ಪು ನೀಡಿದೆ. ಆದರೂ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸುವ ಮೂಲಕ ವಂಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ, ಬಿ.ಆರ್. ಗವಾಯಿ ಹಾಗೂ ಕೃಷ್ಣ ಮುರಳಿ ಅವರನ್ನು ಒಳಗೊಂಡ ನ್ಯಾಯ ಪೀಠ ಹೇಳಿದೆ.
ರಾಮಜನ್ಮ ಭೂಮಿ ನಿವಶೇದಲ್ಲಿರುವ ಹಲವು ಕಲಾಕೃತಿಗಳನ್ನು ಸಂರಕ್ಷಿಸಬೇಕಾಗಿದೆ ಎಂಬುದನ್ನು ರಾಮ ಜನ್ಮ ಭೂಮಿ ಟ್ರಸ್ಟ್ ಒಪ್ಪಿಕೊಂಡಿದೆ ಎಂದು ದೂರುದಾರರ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದ ನ್ಯಾಯವಾದಿ ತಿಳಿಸಿದ್ದಾರೆ. ಸಂವಿಧಾನದ 32ನೇ ವಿಧಿ ಅಡಿಯಲ್ಲಿ ದೂರುದಾರರು ಯಾಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ತಿಳಿಯಲು ಬಯಸಿತು. ನೀವು ಇಂತರ ಕ್ಷುಲ್ಲಕ ದೂರುಗಳನ್ನು ದಾಖಲಿಸುವುದನ್ನು ನಿಲ್ಲಿಸಬೇಕು. ಈ ದೂರಿನ ಅರ್ಥವೇನು ? ಕಾನೂನು ನಿಯಮ ಇಲ್ಲವೆಂದು ನೀವು ಹೇಳುತ್ತೀರಾ ? ನ್ಯಾಯಾಲಯದ ಐವರು ಸದಸ್ಯರ ಪೀಠ ನೀಡಿದ ತೀರ್ಪನ್ನು ಯಾರೂ ಅನುಸರಿಸುವುದಿಲ್ಲ ಎಂದು ಹೇಳಿದ ಪೀಠ ಎರಡೂ ಮನವಿಗಳನ್ನು ತಿರಸ್ಕರಿಸಿತು.