×
Ad

ತುಂಬೆ ಗ್ರೂಪ್ ಮತ್ತು ಬಿಸಿಎಫ್ ಸಹಯೋಗ: ಯುಎಇಯಿಂದ ಮಂಗಳೂರಿಗೆ ಚಾರ್ಟರ್ಡ್ ವಿಮಾನ

Update: 2020-07-21 22:16 IST

ಯುಎಇ, ಜು.21: ಕೋವಿಡ್-19 ಲಾಕ್ ಡೌನ್ ನಿಂದಾಗಿ ತಾಯ್ನಾಡಿಗೆ ಹಿಂದಿರುಗಲಾಗದೆ ಯುಎಇಯಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗುವ ಉದ್ದೇಶದಿಂದ ತುಂಬೆ ಸಮೂಹ ಸಂಸ್ಥೆ ಮತ್ತು ಬ್ಯಾರೀಸ್ ಕಲ್ಚರಲ್ ಫೋರಂ(ಬಿಸಿಎಫ್) ಜಂಟಿಯಾಗಿ ಯುಎಇಯಿಂದ ಮಂಗಳೂರಿಗೆ ಚಾರ್ಟರ್ಡ್ ವಿಮಾನಯಾನ ಯೋಜನೆ ಹಮ್ಮಿಕೊಂಡಿದೆ. ಅದರಂತೆ ಮೊದಲ ತುಂಬೆ-ಬಿಸಿಎಫ್ ಚಾರ್ಟರ್ಡ್ ವಿಮಾನವು ಜು.21ರಂದು ಯುಎಇ- ರಾಸ್ ಅಲ್ ಖೈಮಾದಿಂದ ಮಂಗಳೂರಿಗೆ ತೆರಳಿತು.

ಈ ವಿಮಾನದಲ್ಲಿ ನೌಕರಿ ಕಳೆದುಕೊಂಡಿದ್ದ ಕೂಲಿ ಕಾರ್ಮಿಕರು, ವೀಸಾ ಅವಧಿ ಮುಗಿದವರು, ತೀವ್ರ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದವರು, ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳ ಸಹಿತ 185 ಪ್ರಯಾಣಿಕರು ತವರು ತಲುಪಿದರು.

ಸಂಪೂರ್ಣ ಚಾರಿಟೇಬಲ್ ನೆಲೆಯಲ್ಲಿ ಈ ವಿಮಾನಯಾನ ವ್ಯವಸ್ಥೆ ಕಲ್ಪಿಸಲಾಗಿತ್ತು. ದುಬೈ, ಶಾರ್ಜಾ, ಅಜ್ಮಾನ್ ಮೊದಲಾದೆಡೆಗಳಿಂದ ಪ್ರಯಾಣಿಕರು ರಾಸ್ ಅಲ್ ಖೈಮಾ ವಿಮಾನ ನಿಲ್ದಾಣಕ್ಕೆ ಆಗಮಿಸಲು ತುಂಬೆ ಸಂಸ್ಥೆಯ ಬಸ್ಗಳನ್ನು ಉಚಿತವಾಗಿ ನಿಯೋಜಿಸಲಾಗಿತ್ತು. ಎಲ್ಲ ಪ್ರಯಾಣಿಕರಿಗೆ ಉಚಿತವಾಗಿ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಿಪಿಇ ಕಿಟ್ ಮತ್ತು ಪಾರದರ್ಶಕ ಮುಖ ಕವಚವನ್ನು ಎಲ್ಲ ಪ್ರಯಾಣಿಕರಿಗೆ ವಿತರಿಸಲಾಯಿತು. ಮಿಲಾನೊ ಆಪ್ಟಿಕಲ್ ಮತ್ತು ಮ್ಯಾಕ್ಸ್ ಕೇರ್ ವತಿಯಿಂದ ಆಯ್ದ ಪ್ರಯಾಣಿಕರಿಗೆ ಗಿಫ್ಟ್ ಗಳನ್ನು ವಿತರಿಸಲಾಯಿತು.

ತುಂಬೆ ಗ್ರೂಪ್ ಅಧ್ಯಕ್ಷ ಹಾಗೂ ಬಿಸಿಎಫ್ ಸ್ಥಾಪಕ ಪೋಷಕರೂ ಆಗಿರುವ ಡಾ.ತುಂಬೆ ಮೊಯ್ದಿನ್ ಹಾಗೂ ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ನೇತೃತ್ವದಲ್ಲಿ, ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮದ್ ಹಾಗೂ ತುಂಬೆ ಗ್ರೂಪ್ನ ಫರ್ಹಾದ್ ಉಸ್ತುವಾರಿಯಲ್ಲಿ ನಡೆದ ಈ ಕಾರ್ಯದಲ್ಲಿ ಬಿಸಿಎಫ್ ಪದಾಧಿಕಾರಿಗಳು ಭಾಗವಹಿಸಿದ್ದರು.

ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದಲ್ಲಿ ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್, ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮದ್, ಉಪಾಧ್ಯಕ್ಷರಾದ ಎಂ.ಇ.ಮೂಳೂರು, ಅಬ್ದುಲ್ಲತೀಫ್ ಮುಲ್ಕಿ. ಅಫೀಕ್ ಹುಸೈನ್, ಅಮೀರುದ್ದೀನ್ ಎಸ್.ಐ., ಸಲೀಂ ಅಲ್ತಾಫ್, ಸುಲೈಮಾನ್ ಮೂಳೂರು, ಯಾಕೂಬ್ ಡಿಇಡಬ್ಲ್ಯುಎ, ರಿಯಾಝ್ ಸುರತ್ಕಲ್, ತುಂಬ ಗ್ರೂಪ್ನ ಫರ್ಹಾದ್ ಮತ್ತಿತರರು ಉಪಸ್ಥಿತರಿದ್ದರು.

ಕೆಸಿಎಫ್, ಭಟ್ಕಳ್ ಜಮಾಅತ್, ಭಟ್ಕಳ್ ಅಸೋಸಿಯೇಶನ್, ಬಿಸಿಸಿಐ, ಬಿಡಬ್ಲುಎಫ್, ಡಿಕೆಎಸ್ಸಿ, ಕೆಎನ್ಆರ್ಐ, ಕನ್ನಡಿಗ ಹೆಲ್ಪ್ಲೈನ್, ಯುಎಇಯ ಕೆಡಿಕೆಜಿಎಸ್, ಕರ್ನಾಟಕ ಸಂಘ ಶಾರ್ಜಾ, ದುಬೈ ಕನ್ನಡಿಗಾಸ್ ಮತ್ತಿತರರು ಸಂಸ್ಥೆಗಳು ಸಹಕರಿಸಿದವು.

ಭಟ್ಕಳ್ ಜಮಾಅತ್ ಅಧ್ಯಕ್ಷ ಯೂಸುಫ್ ಬರ್ಮಾವರ್, ಬಿಡಬ್ಲ್ಯುಎಫ್ ಅಧ್ಯಕ್ಷ ಮುಹಮದ್ ಅಲಿ ಉಚ್ಚಿಲ್, ಬಿಸಿಸಿಐ ಅಧ್ಯಕ್ಷ ಬಿ.ಎಂ.ಬಶೀರ್, ಕೆಸಿಎಫ್ ನಾಯಕರು, ಡಿಕೆಎಸ್ಸಿ ಅಧ್ಯಕ್ಷ ಇಕ್ಬಾಲ್ ಹಾಜಿ ಹೆಜಮಾಡಿ, ದುಬೈ ಕೊಂಕಣೀಸ್ ಮತ್ತು ಕೆಎಸ್ಎಸ್ ಮುಖಂಡ ಜೋಸೆಫ್ ಮಥಾಯಿಸ್, ಯುಎಇಯ ಕೆಡಿಕೆಜಿಎಸ್ ಮಾಜಿ ಅಧ್ಯಕ್ಷ ಹರೀಶ್ ಕೋಡಿ, ಕನ್ನಡ ಹೆಲ್ಪ್ಲೈನ್ ನಾಯಕರ ಉಪಸ್ಥಿತಿಯಲ್ಲಿ ಪ್ರಯಾಣಿಕರನ್ನು ಬೀಳ್ಕೊಡಲಾಯಿತು.

ಅಧಿಕೃತ ಟ್ರಾವೆಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಿದ ಅರಿಸ್ಟೋ ಟ್ರಾವೆಲ್ಸ್ ನ ಮಾಲಕ ಸೈಯದ್ ಹಸನ್ ರಝಿನ್ ಸಹಕರಿಸಿದರು.

ಮಂಗಳೂರು ವಿಮಾನ ತಲುಪಿದ ಪ್ರಯಾಣಿಕರನ್ನು ಬಿಸಿಎಫ್ ಪೋಷಕ ಮುಮ್ತಾಜ್ ಅಲಿ ನೇತೃತ್ವದಲ್ಲಿ ಮಾಜಿ ಶಾಸಕ ಮೊಯ್ದಿನ್ ಬಾವ, ಯು.ಟಿ ಇಫ್ತಿಕಾರ್, ಬಿಸಿಸಿಐ ಕೇಂದ್ರ ಸಮಿತಿಯ ಅಧ್ಯಕ್ಷ ಎಸ್ ಎಂ.ರಶೀದ್ ಹಾಜಿ ಮೊದಲಾದ ಗಣ್ಯರು ಸ್ವಾಗತಿಸಿದರು.

ಎಲ್ಲ ಪ್ರಯಾಣಿಕರಿಗೆ ಲಘು ಉಪಹಾರ, ಪೇಯ ವಿತರಿಸಲಾಯಿತು. ಬಳಿಕ ಅವರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಕಳುಹಿಸಲಾಯಿತು.

ಜು.24ರಂದು ಮತ್ತೊಂದು ಚಾರ್ಟರ್ಡ್ ವಿಮಾನ

ತುಂಬೆ ಮತ್ತು ಬಿಸಿಎಫ್ ಸಹಭಾಗಿತ್ವದಲ್ಲಿ ಜು.24ರಂದು ಇನ್ನೊಂದು ಚಾರ್ಟರ್ಡ್ ವಿಮಾನ ಯುಎಇಯಿಂದ ಮಂಗಳೂರಿಗೆ ತೆರಳಲಿದೆ. ಇದಲ್ಲದೆ ಇದೇ ರೀತಿ ಇನ್ನಷ್ಟು ವಿಮಾನಗಳನ್ನು ಆಯೋಜಿಸಲಾಗುವುದು ಎಂದು ತುಂಬೆ-ಬಿಸಿಎಫ್ ವಕ್ತಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News