ಕರ್ನಾಟಕ, ಕೇರಳದಲ್ಲಿ ಐಸಿಸ್ ಭೀತಿ: ವಿಶ್ವಸಂಸ್ಥೆ ವರದಿಯಲ್ಲಿ ಉಲ್ಲೇಖ
ತಿರುವನಂತಪುರ: ಐಸಿಸ್ ಉಗ್ರರು ಕರ್ನಾಟಕ ಮತ್ತು ಕೇರಳದಲ್ಲಿ ಇದ್ದಾರೆ ಎಂದು ಭಯೋತ್ಪಾದನೆ ಕುರಿತ ವಿಶ್ವಸಂಸ್ಥೆಯ ವರದಿ ಎಚ್ಚರಿಸಿದೆ. ಭಾರತೀಯ ಉಪಖಂಡದಲ್ಲಿ ಅಲ್ ಖೈದಾ ದಾಳಿ ನಡೆಸಲು ಉದ್ದೇಶಿಸಿದೆ ಎಂದೂ ವರದಿ ಉಲ್ಲೇಖಿಸಿದೆ ಎಂದು thehindu.com ವರದಿ ಮಾಡಿದೆ.
ಐಸಿಸ್, ಅಲ್ ಖೈದಾ ಮತ್ತು ಸಂಬಂಧಿತ ವ್ಯಕ್ತಿ- ಸಂಸ್ಥೆಗಳ ಕುರಿತ ವಿಶ್ಲೇಷಣಾತ್ಮಕ ಸಮಿತಿ ತನ್ನ 26ನೇ ವರದಿಯಲ್ಲಿ ಈ ಮಾಹಿತಿ ನೀಡಿದ್ದು, ತಾಲಿಬಾನ್ ಅಡಿಯಲ್ಲಿ ಅಫ್ಘಾನಿಸ್ತಾನದ ನಿಂಬರ್ಝ್, ಹೆಲ್ಮಂಡ್ ಮತ್ತು ಕಂದಹಾರ್ ಪ್ರಾಂತ್ಯಗಳಿಂದ ಅಲ್ ಖೈದಾ ಇಸ್ಲಾಮಿಕ್ ಸ್ಟೇಟ್ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಲಾಗಿದೆ.
ಈ ಗುಂಪಿನಲ್ಲಿ ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್ ಮತ್ತು ಪಾಕಿಸ್ತಾನದ ಸುಮಾರು 150 ರಿಂದ 200 ಮಂದಿ ಇದ್ದಾರೆ. ಒಸಾಮಾ ಮಹ್ಮೂದ್ ಇದೀಗ ಎಕ್ಯೂಐಎಸ್ನ ಮುಖ್ಯಸ್ಥ ಎಂದು ವರದಿ ಹೇಳಿದೆ.
ಐಸಿಸ್ ನ ಭಾರತೀಯ ಸಹಸಂಘಟನೆಯಾದ ಹಿಂದ್ ವಿಲಾಯಾದಲ್ಲಿ 180 ರಿಂದ 200 ಮಂದಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಐಸಿಸ್ ನ ಹಲವು ಮಂದಿ ಉಭಯ ರಾಜ್ಯಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದೆ.