ಮಂಗಳೂರು: ಆರೋಗ್ಯ ವ್ಯವಸ್ಥೆ ಬಲಪಡಿಸಲು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆಯಿಂದ ಧರಣಿ

Update: 2020-07-28 09:36 GMT

ಮಂಗಳೂರು, ಜು.28: ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಮಂಗಳವಾರ ಮಂಗಳೂರು ಮಿನಿ ವಿಧಾನಸೌಧದ ಮುಂದೆ ಧರಣಿ ನಡೆಯಿತು.

ಜೆಎಂಎಸ್ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಜಯಂತಿ ಬಿ.ಶೆಟ್ಟಿ ಮಾತನಾಡಿ, ಕೋವಿಡ್-19 ಭಾರತಾದ್ಯಂತ ವ್ಯಾಪಕವಾಗಿ ಹೆಚ್ಚುತ್ತಿದೆ. ಈ ಸಾಂಕ್ರಾಮಿಕ ರೋಗವನ್ನು ಎದುರಿಸಿ ಜನತೆಗೆ ಧೈರ್ಯ ಮತ್ತು ಶಕ್ತಿಯನ್ನು ಕೊಡಬೇಕಾದ ಕೇಂದ್ರ-ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಇದರಿಂದ ಕುಟುಂಬದ ಹೊಣೆ ಹೊತ್ತಿರುವ ಮಹಿಳೆಯರು ಅತೀವ ಕಷ್ಟಕ್ಕೊಳಗಾಗಿದ್ದಾರೆ. ಹಲವಾರು ಖಾಸಗಿ ಆಸ್ಪತ್ರೆಗಳು ಜನರನ್ನು ಸುಲಿಗೆ ಮಾಡುತ್ತಿದೆ. ಕೋವಿಡೇತರ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಇಲ್ಲದೆ ಜನರು ಪರದಾಡುತ್ತಿದ್ದಾರೆ ಎಂದರು.

ವೈದ್ಯಕೀಯ ಸಿಬ್ಬಂದಿ, ಆಶಾ ಅಂಗನವಾಡಿ ಮತ್ತಿತರ ಮುಂಚೂಣಿ ಕೊರೋನ ಯೋಧರುಗಳಿಗೆ ಸೂಕ್ತ ಸೌಲಭ್ಯ ಮತ್ತು ಸರಿಯಾದ ವೇತನ ನೀಡುತ್ತಿಲ್ಲ. ಮಹಿಳೆಯರು ಹೆರಿಗೆ ಸಂಬಂಧಿತ ಸಮಸ್ಯೆಗಳಿಂದ ಯಾತನೆ ಅನುಭವಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಲಕ್ಷಾಂತರ ಕೋ.ರೂ. ಪ್ಯಾಕೇಜನ್ನು ಘೋಷಣೆ ಮಾಡಿದರೂ ಜನಸಾಮಾನ್ಯರಿಗೆ ಪ್ರಯೋಜನವಾಗುತ್ತಿಲ್ಲ. ಇದರ ಲಾಭವನ್ನು ಕಾರ್ಪೊರೇಟ್ ಬಂಡವಾಳಶಾಹಿಗಳು ಪಡೆದುಕೊಂಡಿದ್ದಾರೆ. ಸರಕಾರ ಕೂಡಲೇ ದೇಶದ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಚಳವಳಿ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಧರಣಿಯಲ್ಲಿ ಎಸ್‌ಎಫ್‌ಐ ನಾಯಕಿ ಮಾಧುರಿ ಬೋಳಾರ್, ಜೆಎಂಎಸ್ ನಾಯಕಿಯರಾದ ಭಾರತಿ ಬೋಳಾರ್, ವಿಲಾಸಿನಿ ತೊಕ್ಕೊಟ್ಟು, ಲೋಲಾಕ್ಷಿ ಬಂಟ್ವಾಳ, ಪ್ರಮೀಳಾ ದೇವಾಡಿಗ, ಭವ್ಯಾ ಮುಚ್ಚೂರು, ರೋಹಿಣಿ ಜಲ್ಲಿಗುಡ್ಡೆ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News