ಟಿಪ್ಪು ಪಠ್ಯ ಕೈಬಿಡುವ ನಿರ್ಧಾರ ಹಿಂಪಡೆಯದಿದ್ದರೆ ಹೋರಾಟ: ಎಂಎಸ್ಎಫ್

Update: 2020-07-30 09:42 GMT

ಮಂಗಳೂರು, ಜು.30: ಕೊರೋನ ಹಿನ್ನೆಲೆ ರಾಜ್ಯ ಸರಕಾರವು ಆರಂಭಿಸಿರುವ ಆನ್'ಲೈನ್ ಶಿಕ್ಷಣದಲ್ಲಿ ಸಿಲೆಬಸ್ ಕಡಿಮೆ ಮಾಡುವ ನೆಪ ಒಡ್ಡಿ ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ತೆಗೆದು ಹಾಕಲಾಗಿದೆ ಎಂದು ಮುಸ್ಲಿಂ ಸ್ಟೂಡೆಂಟ್ ಫೆಡರೇಶನ್ ಆರೋಪಿಸಿದೆ.

ಟಿಪ್ಪು ಸುಲ್ತಾನರ ಆಡಳಿತ ಸಮಯದಲ್ಲಿ ಹಿಂದುಳಿದ ವರ್ಗದವರು, ನ್ಯಾಯ ನಿರಾಕರಿಸಲ್ಪಟ್ಟವರು, ಶೋಷಿತರು, ಮೇಲ್ವರ್ಗ, ಕೆಳವರ್ಗ ಎಂಬ ವ್ಯತ್ಯಾಸವಿಲ್ಲ. ಎಲ್ಲರೂ ಸಂತೋಷದಿಂದ ಜೀವಿಸಿದರು ಎಂಬುವುದಕ್ಕೆ ಚರಿತ್ರೆಯೇ ಸಾಕ್ಷಿ ಇರುವಾಗ ಕೆಲವರ ಕೋಮು ದ್ರುವೀಕರಣ ರಾಜಕೀಯಕ್ಕಾಗಿ ಟಿಪ್ಪು ಸುಲ್ತಾನರ ಚರಿತ್ರೆಯನ್ನು ತಿರುಚಿ ಜನರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಪ್ಪು ಸಂದೇಶ ನೀಡುತ್ತಿರುವುದು ಖಂಡನೀಯ.

ಟಿಪ್ಪು ಸುಲ್ತಾನರ ದೇಶಪ್ರೇಮದ ಬಗ್ಗೆ ಬೆಳೆದು ಬರುವ ಮಕ್ಕಳಿಗೆ ತಿಳಿಸಿಕೊಡುವುದು ಬಹಳ ಅವಶ್ಯಕ. ಶಿಕ್ಷಣವನ್ನು ಕೇಸರೀಕರಣ ಮಾಡಲು ಚರಿತ್ರೆಯನ್ನು ತಿರುಚುವ ಕೆಲವೊಂದು ದುಷ್ಟ ಶಕ್ತಿಗಳಿಗೆ ಸರಕಾರ ಬಲಿಯಾಗಿರುವುದು ದುರದೃಷ್ಟಕರ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಟಿಪ್ಪು ಸುಲ್ತಾನರ ಚರಿತ್ರೆಯನ್ನು ಪಠ್ಯಪುಸ್ತಕದಿಂದ ಕೈಬಿಡುವ ಕ್ರಮ ಹಿಂಪಡೆಯಬೇಕೆಂದು ಹಾಗೂ ಹಿಂಪಡೆಯದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮುಸ್ಲಿಂ ಸ್ಟೂಡೆಂಟ್ ಫೆಡರೇಶನ್ ರಾಜ್ಯ ಅಧ್ಯಕ್ಷ ಅಡ್ವಕೇಟ್ ಜಲೀಲ್ ನಂದಾವರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News