×
Ad

ಬೆಳಗ್ಗೆ ಮಂಗಳೂರಿನಲ್ಲಿ ಕಳವುಗೈದು ಮಧ್ಯಾಹ್ನ ಉಡುಪಿಯಲ್ಲಿ ಸೆರೆಯಾದ ಆರೋಪಿ!

Update: 2020-07-30 20:30 IST

ಉಡುಪಿ, ಜು.30: ಮಂಗಳೂರಿನಲ್ಲಿ ಜು.29ರಂದು ಬೆಳಗಿನ ಜಾವ ಕಾರಿನಲ್ಲಿದ್ದ ನಗದು ಕಳವು ಮಾಡಿದ ಆರೋಪಿಯೊಬ್ಬನನ್ನು ಮಧ್ಯಾಹ್ನ ವೇಳೆ ಉಡುಪಿಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೂಡಬಿದ್ರೆಯ ಕಾಪಿಕಾಡು ಬಾಡೊಟ್ಟು ನಿವಾಸಿ ಗುರುಪ್ರಸಾದ್(32) ಬಂಧಿತ ಆರೋಪಿ. ಮಂಗಳೂರು ಕ್ಲಾಕ್ ಟವರ್ ಬಳಿ ನಿಲ್ಲಿಸಿದ್ದ ಕ್ರೇಟಾ ಕಾರಿನಿಂದ ಹಣವನ್ನು ಕಳವು ಮಾಡಿ ಉಡುಪಿಗೆ ಪರಾರಿಯಾಗಿದ್ದ ಗುರುಪ್ರಸಾದ್‌ನನ್ನು ಉಡುಪಿ ಡಿಸಿಐಬಿ ಪೊಲೀಸರು ಖಚಿತ ಮಾಹಿತಿಯಂತೆ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ.

ಈತನಿಂದ ಕಾರಿನಿಂದ ಕಳವು ಮಾಡಿರುವ 2,03,700ರೂ. ನಗದು ಹಾಗೂ 8,000ರೂ. ಮೌಲ್ಯದ ಮೊಬೈಲನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಹಾಗೂ ಸೊತ್ತುಗಳನ್ನು ಉಡುಪಿ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಕಳವು ಪ್ರಕರಣದ ಬಗ್ಗೆ ಈಗಾಗಲೇ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ 2015ರಲ್ಲಿ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಗೆ ನುಗ್ಗಿ ಕಳವು ಮಾಡಿದ್ದು, ಈ ಪ್ರಕರಣದಲ್ಲಿ ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.

ಎಸ್ಪಿ ವಿಷ್ಣುವರ್ಧನ್ ನಿರ್ದೆಶನದಲ್ಲಿ ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಹಾಗೂ ಡಿವೈಎಸ್ಪಿ ಟಿ.ಆರ್.ಜೈಶಂಕರ್ ಮಾರ್ಗದರ್ಶನದಲ್ಲಿ ಡಿಸಿಐಬಿ ನಿರೀಕ್ಷಕ ಮಂಜಪ್ಪ ಡಿ.ಆರ್. ನೇತೃತ್ವದಲ್ಲಿ ಡಿ.ಸಿ.ಐ.ಬಿ ಎಎಸ್ಸೈ ರವಿಚಂದ್ರ, ಸಿಬ್ಬಂದಿಗಳಾದ ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸುರೇಶ, ಸಂತೋಷ ಕುಂದರ್, ರಾಘವೇಂದ್ರ ಉಪ್ಪುಂದ, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ, ಚಾಲಕ ರಾಘವೇಂದ್ರ ಈ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News