ಗಾಂಧಿ ಕುಟುಂಬವಿಲ್ಲದೆ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿರಲು ಸಾಧ್ಯವಿಲ್ಲ: ಡಿ.ಕೆ ಶಿವಕುಮಾರ್

Update: 2020-07-31 17:38 GMT

ಮಂಗಳೂರು, ಜು.31: ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಕೊರೋನಗಿಂತ ಭಯಂಕರ ರೋಗ. ಈ ಬಿಜೆಪಿ ಸರ್ಕಾರವೇ ಜನರಿಗೆ ಶಾಪ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಕೊರೋನ ವಿಚಾರದಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿ ರಾಜ್ಯದ 30 ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಸ್ಪೀಕ್ ಅಪ್ ಕರ್ನಾಟಕದ ಭಾಗವಾಗಿ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ ಶಿವಕುಮಾರ್ ಮಾತನಾಡಿದರು.

ಕೋರೋನ ಸಮಯದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಸರ್ಕಾರಕ್ಕೆ ತೊಂದರೆ ಆಗಬಾರದು ಎಂದು ಹೇಳಿ ಅಧಿವೇಶನದಲ್ಲಿ ಕೆಲವು ಸಲಹೆ ನೀಡಿ ಬಜೆಟ್ ಅನುಮತಿಗೆ ಸಹಕರಿಸಿದೆವು. ನಾವೆಲ್ಲರೂ ಇಂದು ಕೊರೋನ ಸವಾಲಿನಲ್ಲಿ ಸಿಲುಕಿದ್ದೇವೆ. ಜೀವ ಇದ್ದರೆ ಜೀವನ. ಇಂದು ಅನೇಕರು ಗಾಬರಿ, ಆತಂಕದಲ್ಲಿ ಬದುಕುತ್ತಿದ್ದಾರೆ. ಕೊರೋನ ಆರಂಭದ ದಿನಗಳಲ್ಲಿ ನಾವು ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರವನ್ನು ಕೊಟ್ಟೆವು. ಕೇವಲ ನಾಲ್ಕು ಗಂಟೆ ಅವಕಾಶ ನೀಡಿ ಲಾಕ್ ಡೌನ್ ಹೇರಿದರೂ ಕೂಡ 124 ದಿನವಾದರೂ ನಾವು ಸಹಕಾರ ನೀಡುತ್ತಲೇ ಇದ್ದೇವೆ. ಜನರ ಜೀವನ ಉಳಿಸಲು, ಎಲ್ಲ ರೀತಿಯ ಸಹಕಾರ ನೀಡಿ ಸರ್ಕಾರದ ಜತೆ ಕೈಜೋಡಿಸಲು ನಾವು ಬದ್ಧರಾಗಿದ್ದೇವೆ. ಆದರೆ ಕೊರೋನ ವಿಚಾರದಲ್ಲಿ ಸರ್ಕಾರ ನಡೆಸುತ್ತಿರುವ ಭ್ರಷ್ಟಾಚಾರಕ್ಕೆ ನಾವು ಬೆಂಬಲ ನೀಡಲು ಸಾಧ್ಯವಿಲ್ಲ. ದೇಶದಲ್ಲಿ ಹಾಗೂ ಬೇರೆ ಬೇರೆ ರಾಜ್ಯಗಳಲ್ಲಿ ಏನಾಗಿದೆ ಕರ್ನಾಟಕದಲ್ಲಿ ಏನಾಗಿದೆ ಎಂದು ನಾನು ಹಾಗೂ ನಮ್ಮ ವಿರೋಧ ಪಕ್ದ ನಾಯಕರಾದ ಸಿದ್ದರಾಮಯ್ಯನವರು ಜನರ ಮುಂದೆ ಇಟ್ಟಿದ್ದೇವೆ ಎಂದು ತಿಳಿಸಿದರು

ರಾಜ್ಯ ಸರ್ಕಾರ ಕೊರೋನ ವಿಚಾರವಾಗಿ 4 ಸಾವಿರ ಕೋಟಿ ಖರ್ಚು ಮಾಡಿದ್ದು ಅದರಲ್ಲಿ 2 ಸಾವಿರ ಕೋಟಿ ಲೂಟಿ ಮಾಡಿದೆ. ಇದನ್ನು ನಾನು ಹೇಳುತ್ತಿಲ್ಲ, ನಿಮ್ಮ ಮಾಧ್ಯಮ ಸ್ನೇಹಿತರುಗಳು ಪ್ರಕಟಿಸಿರುವ ದಾಖಲೆಗಳನ್ನೇ ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ. ಮಾಧ್ಯಮಗಳಲ್ಲಿ ಬಂದ ವರದಿ, ಕೋರ್ಟ್ ನಲ್ಲಿ ಸಲ್ಲಿಸಿರುವ ಅಫಿಡೆವಿಟ್, ಸರ್ಕಾರದ ಆದೇಶಗಳ ತುಣುಕು ನಿಮ್ಮ ಮುಂದೆ ಇಡುತ್ತೇನೆ. ಕೊರೋನದಲ್ಲಿ ಭ್ರಷ್ಟಾಚಾರ ಬಿಜೆಪಿ ಸರ್ಕಾರದ ಸಂಸ್ಕಾರ. ಇದನ್ನು ನಿಮ್ಮ ಮುಂದೆ ತಿಳಿಸಲು ಬಂದಿದ್ದೇನೆ. ಇವತ್ತು ಸಿಎಂ ಅವರು ಸಹಕಾರ ಕೊಡಿ, ಬೆಂಬಲ ಕೊಡಿ ಎಂದು ಕೇಳುತ್ತಿದ್ದಾರೆ. ಕೊರೋನ ಭ್ರಷ್ಟಾಚಾರ ವಿಚಾರವಾಗಿ ಸಿದ್ದರಾಮಯ್ಯನವರು ಲೆಕ್ಕ ಕೊಡಿ ಎಂದು ಕೇಳಿದರು. ನಾನು ಉತ್ತರ ಕೊಡಿ ಎಂದು ಕೇಳಿದೆ. ಆದರೆ ಮುಖ್ಯಮಂತ್ರಿಗಳು ನೀವು ಯಾವುದೇ ದಾಖಲೆ ಬೇಕಿದ್ದರೂ ಬಂದು ನೋಡಿ ಎಂದು ಹೇಳಿದರು.  ರಾಜ್ಯದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಇದೆ. ಈ ಸಮಿತಿಯಲ್ಲಿ ನಿಮ್ಮ ಪಕ್ಷದವರೂ ಇದ್ದಾರೆ, ದಳದವರೂ ಇದ್ದಾರೆ ಈ ಸಮಿತಿಗೆ ನೀವು ಸಭೆ ನಡೆಸಲು, ಸ್ಥಳಗಳ ಪರಿಶೀಲನೆಗೆ ಏಕೆ ಅವಕಾಶ ನೀಡುತ್ತಿಲ್ಲ? ನಾವು ಪಾರದರ್ಶಕವಾಗಿದ್ದೇವೆ ಎಂದು ಹೇಳುತ್ತೀರಾ, ಆದರೆ ಅದನ್ನು ಪಾಲಿಸುತ್ತಿಲ್ಲ ಎಂದು ಕಿಡಿಕಾರಿದರು.

ಆರ್ ಟಿಐ ಮೂಲಕ ಮಾಹಿತಿ ಕೇಳಿದರೆ ಅಲ್ಲಿ ಪ್ರಧಾನಿಗಳೂ ನೀಡುತ್ತಿಲ್ಲ, ನೀವು ನೀಡುತ್ತಿಲ್ಲ. ಇದು ಯಾರ ದುಡ್ಡು? ಜನ ಕೊಟ್ಟ ಹಣವನ್ನು ನಿಮಗೆ ಬೇಕಾದ ಕೆಲಸ ಮಾಡಿಕೊಳ್ಳುತ್ತಿದ್ದೀರಿ, ಅಭಿವೃದ್ಧಿ ನಿಲ್ಲಿಸಿದ್ದೀರಿ.ನಾವು ಬೇರೆ ವಿಚಾರದ ಬಗ್ಗೆ ನಾವು ಪ್ರಶ್ನಿಸುತ್ತಿಲ್ಲ. ಕೊರೋನ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವ ದರ ನಿಗದಿ ಪಡಿಸಿದ್ದಾರೆ, ರಾಜ್ಯ ಸರ್ಕಾರ ಯಾವ ದರ ನಿಗದಿ ಮಾಡಿದೆ, ನೆರೆ ರಾಜ್ಯದವರು ಯಾರ ದರ ನಿಗದಿ ಮಾಡಿದ್ದಾರೆ ಎಂದು ಕೇಳುತ್ತಿದ್ದೇವೆ. ಹತ್ತೋ, ಹದಿನೈದು ಪರ್ಸೆಂಟ್ ವ್ಯತ್ಯಾಸ ಬಂದರೆ ಏನೋ ಇರಬಹುದು ಎಂದು ಸುಮ್ಮನಾಗಬಹುದು. ಆದರೆ ನಿಮ್ಮ ಪಕ್ಷ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ 4 ಲಕ್ಷಕ್ಕೆ ಖರೀದಿಸಿದ ವೆಂಟಿಲೇಟರ್ ಅನ್ನು ನೀವು 6ರಿಂದ 18 ಲಕ್ಷದವರೆಗೂ ಖರೀದಿಸಿದ್ದೀರಿ. ಅಲ್ಲಿಗೆ ಎಷ್ಟು ಪರ್ಸೆಂಟ್ ಹೆಚ್ಚಾಯಿತು? ತಮಿಳುನಾಡು, ಮಹಾರಾಷ್ಟ್ರದವರಿಗೆ ಸಿಕ್ಕ ದರದಲ್ಲಿ ನಿಮಗೆ ಯಾಕೆ ಸಿಗಲಿಲ್ಲ? ಇದನ್ನು ಕೇಳುವುದು ತಪ್ಪಾ? ಎಂದು ಪ್ರಶ್ನಿಸಿದರು.

ಡಿಸಿಎಂ ಅಶ್ವಥ ನಾರಾಯಣ್ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಪತ್ರಿಕಾಗೋಷ್ಠಿ ಕರೆದು ಮಾಧ್ಯಮದ ಪ್ರಶ್ನೆಗೆ ಉತ್ತರಿಸಲು ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚಿಸುತ್ತಾರೆ. ಇದು ತಾಂತ್ರಿಕ ವಿಚಾರ ಎಂದು ನೆಪ ಕೊಡುತ್ತಾರೆ. ಹಾಗಿದ್ದರೆ ಉಪಮುಖ್ಯಮಂತ್ರಿಯಾಗಿ ನಿವ್ಯಾಕೆ ಇದ್ದೀರಿ? ಅಧಿಕಾರಿಗಳೇ ನಡೆಸುತ್ತಾರೆ, ನಿಮ್ಮ ಅಗತ್ಯವೇನಿದೆ? ಸರ್ಕಾರ ಬೇರೆ ಆಡಳಿತ ಬೇರೆ. ಜನರ ಭಾವನೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಸರ್ಕಾರಕ್ಕೆ ಕಣ್ಣು ಇಲ್ಲ, ಹೃದಯವೂ ಇಲ್ಲ, ಕಿವಿಯೂ ಇಲ್ಲ. ಈ ಸರ್ಕಾರ ಕೊರೋನ ಹೆಣದ ಮೇಲೆ ಹಣ ಮಾಡಲು ಹೊರಟಿದೆ. ಸತ್ತವರಿಗೆ ಒಳ್ಳೆಯ ಸಂಸ್ಕಾರ ನೀಡಲು ನಿಮ್ಮಿಂದ ಸಾಧ್ಯವಾಗಲಿಲ್ಲವಲ್ಲ. ಇದು ಸಂಸ್ಕೃತಿಯ ಭೂಮಿ. ನಮ್ಮ ನಾಯಕರು ಸತ್ತವರ ಅಂತ್ಯ ಸಂಸ್ಕಾರಕ್ಕೆ ತಾವೇ ಮುಂದೆ ನಿಂತು ಮಾಡಿಸಿದ್ದಾರೆ. ಅವರ ಧೈರ್ಯಕ್ಕೆ ನಾನು ಸೆಲ್ಯೂಟ್ ಮಾಡುತ್ತೇನೆ. ಆಸ್ಪತ್ರೆಯಲ್ಲಿ ರೋಗಿಗೆ ಧೈರ್ಯ ತುಂಬಲು ಒಬ್ಬ ಬಿಜೆಪಿ ನಾಯಕ ಹೋಗಲಿಲ್ಲ ಎಂದು ಟೀಕಿಸಿದರು.

ಜೀವನಕ್ಕಾಗಿ ಹೊರರಾಜ್ಯಗಳಲ್ಲಿರುವ ಕನ್ನಡಿಗರಿಗೆ ರಕ್ಷಣೆ ನೀಡಬೇಕು ಎಂದು ನಮ್ಮ ರಮಾನಾಥ ರೈ ಅಗ್ರಹಸಿದರು. ಇದು ಕಾಂಗ್ರೆಸ್ ಸಂಸ್ಕೃತಿ. ಹೊರ ರಾಜ್ಯದಿಂದ ಬಂದವರನ್ನು ನೀವು ಯಾವ ರೀತಿ ನಡೆಸಿಕೊಂಡಿರಿ? ಅವರಿಗೆ ನೀವು ಧೈರ್ಯ ನೀಡಲು ಸಾಧ್ಯವಾಗಲಿಲ್ಲ. ಇದೇನಾ ಬಿಜೆಪಿ ಸಂಸ್ಕೃತಿ, ಆರ್ ಎಸ್ಎಸ್ ಸಂಸ್ಕೃತಿ? ನೀವು ಅವರಿಗೆ ಸಹಾಯ ಮಾಡದಿದ್ದರೂ ಅವರ ಸ್ವಾಭಿಮಾನಕ್ಕೆ ಧಕ್ಕೆ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ನಿಮ್ಮನ್ನು ಅದೇ ಪೊರಕೆಯಲ್ಲಿ ಕ್ಲೀನ್ ಮಾಡಿ ಕಳುಹಿಸುತ್ತಾರೆ.ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.  

ಇಡೀ ಸರ್ಕಾರದ ನೀತಿಗೆ ಗರ ಬಡಿದಿದೆ. ಮಕ್ಕಳು, ಪೊಷಕರಿಗೆ ಸರಿಯಾದ ಮಾರ್ಗದರ್ಶನ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೊಟೇಲ್ ನಡೆಸುವವರು 20 ಜನಕ್ಕೆ ಕೆಲಸ ಕೊಟ್ಟಿರುತ್ತಾರೆ. ಅವರ ಬಗ್ಗೆ ಯೋಚಿಸಿದ್ದೀರಾ, ಶಾಲೆ ಕಾಲೇಜು ಬಂದ್ ಆಗಿದೆ, ಶಿಕ್ಷಕರ ಸಂಬಳದ ಬಗ್ಗೆ ಯೋಚಿಸಿದ್ದೀರಾ? ಪ್ರಧಾನಿಗಳು ಉದ್ಯೋಗಿಗಳ ಬಗ್ಗೆ ಮಾತನಾಡಿದರು. ಆದರೆ ಇದ್ಯೋಗ ನೀಡುವವನ ಬಗ್ಗೆ ಮಾತನಾಡಲಿಲ್ಲ. ಕೇವಲ ಉದ್ಯೋಗಿ ಮಾತ್ರವಲ್ಲ ಉದ್ಯೋಗ ಸೃಷ್ಟಿಸುವವನೂ ಕೂಡ ಮುಖ್ಯ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್, ರಾಜ್ಯ ಸರ್ಕಾರ ಸಾವಿರಾರು ಕೋಟಿ ಪ್ಯಾಕೇಜ್ ಘೋಷಿಸಿತಲ್ಲಾ ಯಾರಿಗೆ ತಲುಪಿದೆ ಎಂದು ಪಟ್ಟಿ ಕೊಡಿ. ಈ ಪರಿಸ್ಥಿತಿಯಲ್ಲಿ ಜನರ ಕೈಗೆ ಹಮ ಕೊಡುವ ಬದಲು ಮೂರು ತಿಂಗಳು ಡಫರ್ ಪೇಮೆಂಟ್ ಎಂದು ಮುಂದಕ್ಕೆ ಹಾಕಿ ಆಮೇಲೆ ಅವರಿಂದ ವಸೂಲಿ ಹೆಸರಲ್ಲಿ ಸುಲಿಗೆ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

ಇದನ್ನು ಕೇಳಿದರೆ ಸಹಕಾರ ಕೊಡುತ್ತಿಲ್ಲಾ ಅಂತೀರಾ. ನೀವು ಲಂಚ ಹೊಡೆಯುವುದಕ್ಕೆ ನಾವು ಸಹಕಾರ ನೀಡಬೇಕಾ? ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿಚಾರವನ್ನು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು. ಬೇಕಾದರೆ ನಮ್ಮ ಕಾಲದಿಂದಲೂ ತನಿಖೆ ನಡೆಸಿ. ನಾವು ತಪ್ಪು ಮಾಡಿದ್ದರೆ ನಮಗೂ ಶಿಕ್ಷೆಗೆ ಒಳಪಡಿಸಿ. ನನ್ನ ಮೇಲೆ ಇಡಿ, ಸಿಬಿಐ ಎಂದು ಕೇಸ್ ಹಾಕಿದ್ದೀರಲ್ಲಾ, ಮಾಡಿ ತೊಂದರೆ ಇಲ್ಲ. ತಪ್ಪು ಮಾಡಿದ್ದರೆ ನಾನು ಶಿಕ್ಷೆಗೆ ಒಳಗಾಗಲೇ ಬೇಕು ಎಂದದು ತಿಳಿಸಿದರು.

ಯಾವ ನೋಟೀಸ್ ಗೂ ಹೆದರುವುದಿಲ್ಲ
ಅವರು ನೋಟೀಸ್ ಕೊಡಲಿ, ಕೇಸು ಹಾಕಲಿ. ನಾವು ಉತ್ತರಿಸಲು ಸಿದ್ಧ. ಈ ವಿಚಾರದಲ್ಲಿ ನಾನು ಮಾತನಾಡುತ್ತಿಲ್ಲ. ನೀವು ಈ ಬಗ್ಗೆ ಬರೆದಿದ್ದೀರಿ. ನಿಮ್ಮ ಮೇಲೂ ಹಾಕಬೇಕಲ್ಲಾ? ಎಲ್ಲ ತನಿಖೆಗೆ ನಾವಂತೂ ತಯಾರಿದ್ದೇವೆ. ಎಲ್ಲರ ವಿಚಾರದಲ್ಲೂ ತನಿಖೆಯಾಗಲಿ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಹೇಳಿದರು.

ಉಚಿತ ಚಿಕಿತ್ಸೆ ನೀಡಲಿ

ಖಾಸಗಿ ಆಸ್ಪತ್ರೆಯಲ್ಲಿ ಸುಲಿಗೆ ಮಾಡುತ್ತಿದ್ದು, ನಾವು ಉಚಿತವಾಗಿ ಚಿಕಿತ್ಸೆ ಕೊಡಿ ಎಂದು ಕೇಳುತ್ತಿದ್ದೇವೆ. ಖಾಸಗಿ ಆಸ್ಪತ್ರೆಗಳಾದರೂ ಕಾನೂನಿನಲ್ಲಿ ನೀವು ಅದರಲ್ಲಿ ಪಾಲುದಾರರು.ನೀವು ರೇಟ್ ಫಿಕ್ಸ್ ಮಾಡಿದ್ದೇ ತಪ್ಪು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಆಯುಷ್ಮಾನ್ ಭಾರತ ಯೋಜನೆ ಜಾರಿ ಮಾಡಿದ್ದು ಅದರ ಮೂಲಕ ಉಚಿತ ಚಿಕಿತ್ಸೆ ಕೊಡಿಸಿ. ಹಣ ಯಾಕೆ ಬೇಕು? ಈ ಕೊರೋನಾ ಹಂಚಿದ್ದು ನೀವು ಎಂದು ಆರೋಪಿಸಿದರು.

ಕಾಂಗ್ರೆಸ್ ಗೆ ಗಾಂಧಿ ಕುಟುಂಬ ಅಗತ್ಯ
ಗಾಂಧಿ ಕುಟುಂಬವಿಲ್ಲದೇ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿರಲು ಸಾಧ್ಯವಿಲ್ಲ. ಕಾಂಗ್ರೆಸ್ ಇಲ್ಲದೆ ದೇಶ ಒಂದಾಗಿರಲು ಸಾಧ್ಯವಿಲ್ಲ. ನಾನು ದೇಶದ ಎಲ್ಲ ಕಾಂಗ್ರೆಸಿಗರ ಅಭಿಪ್ರಾಯಕ್ಕೆ ಬೆಂಬಲ ನೀಡುತ್ತೇನೆ. ಪಕ್ಷದ ಅಧ್ಯಕ್ಷ ಹುದ್ದೆಯನ್ನು ರಾಹುಲ್ ಗಾಂಧಿ ಅವರಿಗೆ ನೀಡುವ ವಿಚಾರವಾಗಿ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಕೊರೋನ ವಿಚಾರದಲ್ಲಿ ಇದನ್ನು ಸೇರಿಸುವುದು ಬೇಡ. ನಾವೀಗ ಮೊದಲು ಜನರ ಜೀವ ಉಳಿಸಬೇಕು. ಸರ್ಕಾರದ ಭ್ರಷ್ಟಾಚಾರ ನಿಲ್ಲಿಸಬೇಕು ಎಂದರು.

ಕರಾವಳಿ ಭೂಮಿ ನನ್ನ ಹೃದಯಕ್ಕೆ ಹತ್ತಿರ

ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕೃತವಾಗಿ ಪದಗ್ರಹಣ ಮಾಡಲು ಪ್ರಕ್ರಿಯೆಗೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರ ರಾಜಕೀಯ ಸಭೆ ನಡೆಸುವಂತಿಲ್ಲ ಎಂದು ತಡೆ ಹಿಡಿದರು. ನಂತರ ಒತ್ತಡ ಬಂದ ಮೇಲೆ ಮಾಧ್ಯಮಗಳ ಮುಂದೆ ಒಪ್ಪಿಗೆ ಸೂಚಿಸಿದರು. ನಂತರ ನಾವು ನಮ್ಮದೇ ಶೈಲಿಯಲ್ಲಿ ಕಾರ್ಯಕರ್ತರ ಮಧ್ಯೆ ಪ್ರತಿಜ್ಞಾ ವಿಧ ಸ್ವೀಕರಿಸಿದೆ. ಇಂದು ಮೊದಲ ಬಾರಿಗೆ ನಾನು ಬೆಂಗಳೂರಿನಿಂದ ಹೊರಗಡೆ ಬರಲು ಸಾಧ್ಯವಾಗಿದೆ. ಇವತ್ತೂ ಕೂಡ ರಾಜಕೀಯ ಸಭೆ ನಡೆಸಲು ಅನುಮತಿ ಇಲ್ಲ. ಇದನ್ನು ಅರಿತು, ವಿವಿಧ ನಾಯಕರೆಲ್ಲರೂ ಸೇರಿ 30 ಜಿಲ್ಲೆಗಳಲ್ಲಿ ಮಾಧ್ಯಮಗಳ ಮುಂದೆ ಬಂದು ಕೊರೋನ ವಿಚಾರದಲ್ಲಿ ಬೆಳಕನ್ನು ಚೆಲ್ಲುವ ಕಾರ್ಯಕ್ರಮ ರೂಪಿಸಿದ್ದೇವೆ.

ಮೊದಲು ನಾನು ದಕ್ಷಿಣ ಕನ್ನಡ ಜಿಲ್ಲೆಯನ್ನು ಆರಿಸಿದ್ದೇನೆ. ಕರಾವಳಿ ಭಾಗದ ಪ್ರದೇಶ ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಪ್ರದೇಶ. ಈ ಭಾಗದಲ್ಲಿ ಬಹಳ ವಿದ್ಯಾವಂತರು, ಬುದ್ದಿವಂತರು, ಪ್ರಜ್ಞಾವಂತರು ಹೆಚ್ಚಾಗಿದ್ದಾರೆ. ಈ ಭೂಮಿಯಲ್ಲಿ ಹಿಂದೂ, ಕ್ರೈಸ್ತ, ಇಸ್ಲಾಂ ಧರ್ಮವಿರಬಹುದು ಎಲ್ಲರೂ ಪರಸ್ಪರ ಗೌರವದಿಂದ ಸೋದರತ್ವ ಭಾವನೆಯಲ್ಲಿ ಐಕ್ಯತೆಯಲ್ಲಿ ಬದುಕುತ್ತಿದ್ದಾರೆ.

ರಾಜಕೀಯವಾಗಿ ಏನೇ ಭಿನ್ನಾಭಿಪ್ರಾಯ ಇರಬಹುದು. ಸಾಮಾನ್ಯ ಜನ ಎಲ್ಲ ಧರ್ಮದವರು ಒಟ್ಟಿಗೆ ಬದುಕುತ್ತಿದ್ದಾರೆ. ಅತಿ ಹೆಚ್ಚು ಇಂಜಿನೀಯರಿಂಗ್, ಮೆಡಿಕಲ್, ಪದವಿ ಕಾಲೇಜುಗಳನ್ನು ಹೊಂದಿದ್ದು, ಶೈಕ್ಷಣಿಕವಾಗಿ ಮುಂದಿದೆ. ಸಹಕಾರ, ಬ್ಯಾಂಕಿಂಗ್ ಕ್ಷೇತ್ರಗಳ ಬುನಾದಿ ಬಲವಾಗಿದೆ. ಈ ಇತಿಹಾಸವನ್ನು ಯಾರೂ ತಿದ್ದಲು ಸಾಧ್ಯವಿಲ್ಲ. ಈ ಪುಣ್ಯ ಭೂಮಿಯಲ್ಲಿ ಕಾಂಗ್ರೆಸ್ ಪಕ್ಷದ ಆಚಾರ ವಿಚಾರವನ್ನು ಪ್ರಚಾರ ಮಾಡಲು ಬಂದಿದ್ದೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News