ಕಾರ್ಕಳ ಮುಖ್ಯಾಧಿಕಾರಿ ಬಂಧನಕ್ಕೆ ದಸಂಸ ಆಗ್ರಹ
ಉಡುಪಿ, ಆ.2: ಕಾರ್ಕಳದ ದಲಿತ ಉಪನ್ಯಾಸಕಿ ಸವಿತಾಕುಮಾರಿ ಮಾನ ಸಿಕವಾಗಿ ಹಿಂಸೆ ನೀಡಿರುವ ಕಾರ್ಕಳ ಮುಖ್ಯಾಧಿಕಾರಿ ರೇಖಾ ಶೆಟ್ಟಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ರೇಖಾ ಶೆಟ್ಟಿಯನ್ನು ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ಆಗ್ರಹಿಸಿದೆ.
ರೇಖಾ ಶೆಟ್ಟಿಯನ್ನು ಸರಕಾರ ಕಾರ್ಕಳ ಪುರಸಭೆಯಿಂದ ಸಾಲಿಗ್ರಾಮ ಪಟ್ಟಣ ಪಂಚಾಯತ್ ವರ್ಗಾವಣೆ ಮಾಡಿದರೂ ಕಾನೂನು ಬಾಹಿರವಾಗಿ ಕಾರ್ಕಳ ಪುರಸಭೆಯಲ್ಲಿಯೇ ಇನ್ನು ಕೂಡ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕೂಡಲೇ ಇವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ದಸಂಸ ಒತ್ತಾಯಿಸಿದೆ.
ತಪ್ಪಿದಲ್ಲಿ ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರ್, ಉಡುಪಿ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್, ಮಂಗಳೂರು ಜಿಲ್ಲಾ ಸಂಚಾಲಕ ಪ್ರಭಾಕರ್ ಮೂಡುಬಿದ್ರೆ, ಕಾರ್ಕಳ ತಾಲೂಕು ಸಮಿತಿಯ ಸುರೇಂದ್ರ ಬಜಗೋಳಿ, ಸುರೇಶ್ ಮಾಳ, ಗಣೇಶ್ ಬಜಗೋಳಿ, ಉದಯ್ ಮಾರ್ನಾಡ್, ಸದಾನಂದ ನೆಟ್ಟೊಡೀ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.