ಬೆಳ್ತಂಗಡಿ ತಾಲೂಕಿನಾದ್ಯಂತ ಭಾರೀ ಮಳೆ: ಚಾರ್ಮಾಡಿ ಘಾಟಿಯಲ್ಲಿ ಭೂ ಕುಸಿತದ ಭೀತಿ
Update: 2020-08-04 04:23 GMT
ಬೆಳ್ತಂಗಡಿ, ಆ.4: ತಾಲೂಕಿನಾದ್ಯಂತ ಸೋಮವಾರ ರಾತ್ರಿ ಭಾರೀ ಮಳೆ ಸುರಿದಿದ್ದು, ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ಭೂ ಕುಸಿತಗಳಾಗಿರುವ ಬಗ್ಗೆ ವರದಿಯಾಗಿದೆ.
ರಾತ್ರಿ ವೇಳೆ ಕಳೆದ ಆಗಸ್ಟ್ನ ಪ್ರಳಯವನ್ನು ನೆನಪಿಸುವ ರೀತಿಯಲ್ಲಿ ಮಳೆ ಸುರಿದಿದ್ದು, ಜನರಲ್ಲಿ ಭಯ ಮೂಡಿಸಿತ್ತು.
ಚಾರ್ಮಾಡಿ ಘಾಟಿಯಲ್ಲಿ ಮೂಡಿಗೆರೆ ತಾಲೂಕಿಗೆ ಸೇರಿದ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು ಅದನ್ನು ಕೂಡಲೇ ತೆರವುಗೊಳಿಸಲಾಗಿದೆ. ರಾತ್ರಿ ವೇಳೆ ರಸ್ತೆಗೆ ಅಡ್ಡಲಾಗಿ ಮರವೊಂದು ಬಿದ್ದಿದ್ದು ಅದನ್ನು ತೆರವುಗೊಳಿಸಲಾಗಿದೆ.
ಸದ್ಯ ಘಾಟಿ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ನಿಷೇಧವಿರುವುದರಿಂದ ಯಾವುದೇ ಸಮಸ್ಯೆಗಳಾಗಿಲ್ಲ. ತಾಲೂಕಿನಾದ್ಯಂತ ರಾತ್ರಿ ಇಡೀ ಸುರಿದ ಮಳೆ ಇಂದು ಬೆಳಗ್ಗೆಯೂ ಮುಂದುವರಿದಿದೆ.