ಡಿಕೆಶಿಗೆ ಬಿಜೆಪಿಗಿಂತ ಸಿದ್ಧರಾಮಯ್ಯ ಕಾಟ ಜಾಸ್ತಿಯಾಗಿದೆ : ಸಚಿವ ಆರ್.ಅಶೋಕ್ ವ್ಯಂಗ್ಯ

Update: 2020-08-07 15:14 GMT

ಉಡುಪಿ, ಆ.7: ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಗಿಂತಲೂ ಅವರದೇ ಪಕ್ಷದ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಟವೇ ಜಾಸ್ತಿಯಾಗಿದೆ. ಡಿಕೆಶಿ, ಸಿದ್ದರಾಮಯ್ಯರ ಕಾಟ ದಿಂದ ಮೊದಲು ತಪ್ಪಿಸಿಕೊಂಡು ಹೊರಬರಲಿ. ಆಮೇಲೆ ಸರಕಾರದ ವಿರುದ್ಧ ಟೀಕೆ ಮಾಡಲಿ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅಶೋಕ್, ರಾಜ್ಯದಲ್ಲಿ ಸರಕಾರ ಇದೆಯೋ, ಇಲ್ಲವೊ ಎಂಬ ವಿಪಕ್ಷ ನಾಯಕರ ಪ್ರಶ್ನೆಗೆ ಈ ರೀತಿಯಲ್ಲಿ ಉತ್ತರಿಸಿದರು.

ರಾಜ್ಯದಲ್ಲಿ ವಿರೋಧ ಪಕ್ಷ ಇದೆಯೋ ಇಲ್ಲವೋ ಗೊತ್ತಿಲ್ಲ. ಸಿದ್ಧರಾಮಯ್ಯ ಕೊರೋನದಿಂದ ಆಸ್ಪತ್ರೆಯಲ್ಲಿದ್ದಾರೆ. ಡಿ.ಕೆ.ಶಿವಕುಮಾರ್ ಇನ್ನೂ ಕೂಡಾ ಪದಗ್ರಹಣ, ಸನ್ಮಾನದ ಗುಂಗಿನಲ್ಲೇ ಇದ್ದಾರೆ. ಕಾಂಗ್ರೆಸ್ ಅಧ್ಯಕ್ಷರಿನ್ನೂ ಫೀಲ್ಡ್‌ಗೆ ಇಳಿದಿಲ್ಲ ಎಂದರು.

ಸಿಎಂ ಅಷ್ಟು ವಯಸ್ಸಾದ್ರೂ ಕ್ರಿಯಾಶೀಲರಾಗಿದ್ದಾರೆ. ವಿಪಕ್ಷದವರು ಕಾಮಾಲೆ ಕಣ್ಣಿಂದ ನೋಡಿದರೆ ನಮ್ಮ ಕೆಲಸ ಕಾಣಲ್ಲ. ಸರಕಾರ ಎಲ್ಲದಕ್ಕೂ ಉತ್ತರ ನೀಡಲು ಸಿದ್ಧವಿದೆ ಎಂದು ಖಾರವಾಗಿ ನುಡಿದರು.

ಸಿಎಂ ಶೀಘ್ರ ನಿಮ್ಮ ಮುಂದೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದಷ್ಟು ಬೇಗ ಗುಣಮುಖರಾಗಿ ನಿಮ್ಮ ಮುಂದೆ ಬರುತ್ತಾರೆ. ಅವರು ಪ್ರತಿದಿನ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತಿದ್ದಾರೆ. ಅವರು ಆರೋಗ್ಯದಿಂದ, ಲವಲವಿಕೆಯಿಂದಿದ್ದಾರೆ. ಕೋವಿಡ್, ಪ್ರವಾಹ ಸಂದರ್ಭದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಆಸ್ಪತ್ರೆಯಲ್ಲಿದ್ದರೂ ಸರಕಾರದ ಎಲ್ಲಾ ಕೆಲಸಗಳನ್ನು ನಿರ್ವಹಿಸುತಿದ್ದಾರೆ ಎಂದು ಅಶೋಕ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News