ಬೆಳಕು ಕಳೆದುಕೊಳ್ಳುತ್ತಿರುವ ಬೆಳ್ಳಿ ತೆರೆಯ ತಾರೆಯರು

Update: 2020-08-08 05:43 GMT

ಕೊರೋನ ಮತ್ತು ಲಾಕ್‌ಡೌನ್ ಕಾರಣಗಳಿಂದಾಗಿ ದೇಶದ ಬಹುತೇಕ ಉದ್ಯಮಗಳು ಆತ್ಮಹತ್ಯೆಯ ದಾರಿಯಲ್ಲಿವೆ. ಆರ್ಥಿಕ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಲಾಕ್‌ಡೌನ್ ಎನ್ನುವುದು ಉದ್ಯಮಗಳ ಪಾಲಿಗೆ ಆತ್ಮಹತ್ಯೆಯೇ ಹೌದು. ಇದನ್ನು ಸುಲಭ ಭಾಷೆಯಲ್ಲಿ ‘ಸ್ವಯಂ ಇರಿದು ನಿಧನ’ ಎಂದು ಕರೆಯಬಹುದು. ಈವರೆಗೆ ರೈತರಷ್ಟೇ ಆತ್ಮಹತ್ಯೆಯ ಮೂಲಕ ಸುದ್ದಿಯಲ್ಲಿದ್ದರು. ನಿಧಾನಕ್ಕೆ ಅವರ ಜಾಗವನ್ನು ಸಣ್ಣ ಉದ್ದಿಮೆದಾರರು ತುಂಬ ತೊಡಗಿದ್ದಾರೆ. ಕಾಫಿ ಡೇ ಉದ್ಯಮಿ ಸಿದ್ಧಾರ್ಥ ಅವರ ಆತ್ಮಹತ್ಯೆ ದೇಶದ ಸಣ್ಣ ಉದ್ದಿಮೆದಾರರ ಸ್ಥಿತಿಗತಿಗಳನ್ನು ಮುನ್ನೆಲೆಗೆ ತಂದಿತು. ಹೇಗೆ ಅವರು ರಾಜಕೀಯ ಬಲಿಪಶುಗಳಾಗುತ್ತಿದ್ದಾರೆ ಎನ್ನುವುದೂ ಈ ಸಂದರ್ಭದಲ್ಲಿ ಬೆಳಕಿಗೆ ಬಂತು. ಲಾಕ್‌ಡೌನ್ ಬಳಿಕ ಎಲ್ಲ ಕ್ಷೇತ್ರಗಳೂ ಬಿಕ್ಕಟ್ಟಿನಲ್ಲಿವೆ ಮತ್ತು ಅವನ್ನು ಅವಲಂಬಿಸಿರುವ ದೊಡ್ಡ ಪ್ರಮಾಣದ ಜನರು ನಿರುದ್ಯೋಗಿಗಳಾಗುತ್ತಿದ್ದಾರೆ. ಈ ಆಘಾತವನ್ನು ತಳಸ್ತರದ ಜನರು ಅದು ಹೇಗೋ ತಾಳಿಕೊಂಡಿದ್ದಾರೆ. ಆದರೆ ನಾವು ಯಾವ ಲೋಕವನ್ನು ‘ಬೆಳ್ಳಿ ತೆರೆ’ ಎಂದು ಕರೆಯುತ್ತಾ ಬಂದಿದ್ದೇವೆಯೋ ಆ ರಂಗು ರಂಗಿನ ಲೋಕ ಲಾಕ್‌ಡೌನ್‌ನ ದಾಳಿಗೆ ಬಣ್ಣ ಕಳಚಿ ಬಿದ್ದಿದೆ.

ಆಕಾಶದಲ್ಲಿ ಮೆರೆದಾಡುತ್ತಿದ್ದ ತಾರೆಗಳೆಲ್ಲ ಏಕಾಏಕಿ ಭೂಮಿಗಿಳಿದಿವೆ. ಹಲವು ಲಕ್ಷ ಕೋಟಿ ರೂಪಾಯಿಗಳ ಬಂಡವಾಳದ ಮೇಲೆ ನಿಂತಿರುವ ಈ ಉದ್ಯಮ ಮುಂದೆ ಸಾಗುವುದಕ್ಕೆ ದಿಕ್ಕೇ ಇಲ್ಲವೋ ಎಂಬಂತೆ ನಿಂತು ಬಿಟ್ಟಿದೆೆ. ಒಂದೆಡೆ ಹೊಸ ಚಿತ್ರಗಳ ಶೂಟಿಂಗ್‌ಗಳು ನಡೆಯುವುದಕ್ಕೆ ಸರಕಾರ ಅವಕಾಶ ನೀಡುತ್ತಿಲ್ಲ. ಅವಕಾಶ ನೀಡಿದರೂ, ಅದಕ್ಕೆ ಹಲವು ನಿಯಮಗಳು ಅನ್ವಯವಾಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಯಾವುದೇ ನಿರ್ಮಾಪಕರು ಹೊಸದಾಗಿ ಈ ಕ್ಷೇತ್ರಕ್ಕೆ ಹಣ ಹೂಡುವುದಕ್ಕೆ ಮುಂದೆ ಬರುತ್ತಿಲ್ಲ. ಯಾಕೆಂದರೆ, ಈ ಲಾಕ್‌ಡೌನ್ ಭವಿಷ್ಯದಲ್ಲಿ ಚಿತ್ರಮಂದಿರಗಳ ಮೇಲೆ, ಸಿನೆಮಾ ವೀಕ್ಷಕರ ಮೇಲೆ ಯಾವ ರೀತಿಯಲ್ಲೆಲ್ಲ ಪರಿಣಾಮಗಳು ಬೀರಬಹುದು ಎನ್ನುವ ಕುರಿತಂತೆ ಅವರಿಗೆ ಆತಂಕಗಳಿವೆ.

ಈಗಾಗಲೇ ಅರ್ಧದಲ್ಲಿ ನಿಂತಿರುವ ಸಿನೆಮಾಗಳು ನೂರಾರಿವೆ. ಅವುಗಳಿಗೆ ಹಣ ಹೂಡಿರುವ ನಿರ್ಮಾಪಕರೆಲ್ಲ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಫೈನಾನ್ಸ್‌ಗಳು ಸೇರಿದಂತೆ ವಿವಿಧ ಮೂಲಗಳಿಂದ ಸಾಲ ಎತ್ತಿ ಸಿನೆಮಾ ಮಾಡಿದವರ ತಲೆಯ ಮೇಲೆ ಬಡ್ಡಿ ಮೇಲೆ ಬಡ್ಡಿ ಬೀಳುತ್ತಿವೆ. ಹಲವರು ತಾವು ಜೀವಮಾನವಿಡೀ ಗಳಿಸಿದ ಹಣವನ್ನು ಈ ಕಾರಣದಿಂದ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹಣದ ವ್ಯವಹಾರದಲ್ಲಿ ಸಿನಿಮೋದ್ಯಮದೊಳಗೆ ನಡೆದ, ನಡೆಯುತ್ತಿರುವ ಸಂಘರ್ಷಗಳು ಹಲವರನ್ನು ಬೀದಿಗೆ ತಳ್ಳಿವೆ. ಲಾಕ್‌ಡೌನ್ ಬಳಿಕ ಈ ಸಿನಿಮೋದ್ಯಮ ಮತ್ತೆ ಚೇತರಿಸಿಕೊಳ್ಳುತ್ತದೆಯೋ ಇಲ್ಲವೋ ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ. ಹೀಗೆ ಮುಂದುವರಿದರೆ, ಜನರು ಟಿವಿಯ ಮೂಲಕವೇ ಸಿನೆಮಾ ನೋಡುವುದನ್ನು ಅಭ್ಯಾಸ ಮಾಡಬಹುದು. ನೆಟ್‌ಫ್ಲಿಕ್ಸ್, ಅಮೆಝಾನ್, ಹಾಟ್‌ಸ್ಟಾರ್‌ನ ಮೂಲಕವೇ ಟಿವಿಗಳಲ್ಲಿ ಸಿನೆಮಾಗಳನ್ನು ಬಿಡುಗಡೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಬಹುದು. ಭವಿಷ್ಯದಲ್ಲಿ ಸಿನೆಮಾ ನೋಡುವ ಮತ್ತು ನಿರ್ಮಿಸುವ ಪ್ರಕ್ರಿಯೆಯಲ್ಲೇ ಭಾರೀ ಬದಲಾವಣೆಗಳು ಕಾಣಲಿವೆ. ಆ ಬದಲಾವಣೆಗಳ ಬಿರುಗಾಳಿಗೆ ಈಗಾಗಲೇ ಕೆಲವು ನಿರ್ಮಾಪಕರು, ನಿರ್ದೇಶಕರು, ಸಿನೆಮಾ ಕಾರ್ಮಿಕರು, ನಟರು ಸಿಕ್ಕು ತತ್ತರಗೊಂಡಿದ್ದಾರೆ. ಲಾಕ್‌ಡೌನ್ ಬಳಿಕ ಕನ್ನಡ ಟಿವಿ ನಟರು ಸೇರಿದಂತೆ ದೇಶದ ಬೇರೆ ಬೇರೆ ಪ್ರಾದೇಶಿಕ ಭಾಷೆಗಳಿಗೆ ಸಂಬಂಧಪಟ್ಟ ಸಣ್ಣಪುಟ್ಟ ತಾರೆಯರು ಆತ್ಮಹತ್ಯೆ ಮಾಡಿಕೊಳ್ಳತೊಡಗಿದರು.

ಇವರು ಪ್ರಾದೇಶಿಕ ಭಾಷೆಗಳಿಗೆ ಸೇರಿದವರಾಗಿರುವುದರಿಂದ ಮತ್ತು ಟಿವಿಯಂತಹ ಕಿರುಪರದೆಗೆ ಸಂಬಂಧಿಸಿದವರಾದುದರಿಂದ ಮುಖಪುಟದ ಸುದ್ದಿಯಾಗಲಿಲ್ಲ. ಆದರೆ ಯಾವಾಗ ಬಾಲಿವುಡ್‌ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಆತ್ಮಹತ್ಯೆ ಮಾಡಿಕೊಂಡರೋ, ಅಲ್ಲಿಂದ ಬಾಲಿವುಡ್‌ನೊಳಗಿನ ಆರ್ಥಿಕ ಅರಾಜಕತೆ ಬಟಾಬಯಲಾಯಿತು. ಕೆಲವೇ ಕೆಲವು ಸೂಪರ್ ಸ್ಟಾರ್‌ಗಳನ್ನು ಹೊರತು ಪಡಿಸಿ, ಅಭದ್ರತೆಯನ್ನು ಎದುರಿಸುತ್ತಿರುವ ಇತರ ಸಿನೆಮಾ ನಟರ ಅತಂತ್ರ ಸ್ಥಿತಿಯನ್ನು ಈ ಆತ್ಮಹತ್ಯೆ ತೆರೆದಿಟ್ಟಿತು. ಸುಶಾಂತ್ ಸಿಂಗ್‌ನ ಆತ್ಮಹತ್ಯೆಯನ್ನು, ಬಾಲಿವುಡ್‌ನೊಳಗಿನ ‘ಗುಂಪುಗಾರಿಕೆ’ಗೆ ತಳಕು ಹಾಕುವ ಪ್ರಯತ್ನ ನಡೆಯಿತಾದರೂ, ಇದೀಗ ಪ್ರಾಥಮಿಕ ತನಿಖೆ ಬೇರೆಯೇ ವಿವರಗಳನ್ನು ಹೇಳುತ್ತಿದೆ. ಸುಶಾಂತ್ ಸಿಂಗ್ ಅವರ ಆತ್ಮೀಯ ಸ್ನೇಹಿತನ ಪ್ರಕಾರ, ‘ಸುಶಾಂತ್ ಅವರು ಆರ್ಥಿಕ ಅಭದ್ರತೆಯಿಂದ ನರಳುತ್ತಿದ್ದರು’. ಮುಖ್ಯವಾಗಿ ಭವಿಷ್ಯದ ಕುರಿತಂತೆ ತೀವ್ರ ಚಿಂತಿತರಾಗಿದ್ದರು. ಹಾಗೆ ನೋಡಿದರೆ, ಟಿವಿಯಿಂದ ಬಾಲಿವುಡ್‌ಗೆ ಆಗಮಿಸಿದ ಯಾವುದೇ ನಟರಿಗೆ ಹೋಲಿಸಿದರೆ, ಸುಶಾಂತ್ ಸಿಂಗ್ ಹೆಚ್ಚು ಸಕ್ರಿಯರಾಗಿದ್ದರು.

ಇತ್ತೀಚೆಗಷ್ಟೇ ಅವರ ಎರಡು ಚಿತ್ರಗಳು ಬಿಡುಗಡೆಯಾಗಿದ್ದವು. ಒಂದು ಚಿತ್ರ ಗಳಿಕೆಯಲ್ಲಿ ಯಶಸ್ಸನ್ನು ಸಾಧಿಸಿತ್ತು. ಅದಾಗಲೇ ಹಲವು ಮಹತ್ವದ ಅವಕಾಶಗಳನ್ನು ತನ್ನದಾಗಿಸಿಕೊಂಡು, ದೊಡ್ಡ ಪ್ರಮಾಣದ ಅಭಿಮಾನಿಗಳನ್ನು ಸುಶಾಂತ್ ತನ್ನದಾಗಿಸಿಕೊಂಡಿದ್ದರು. ಗುಂಪುಗಾರಿಕೆಯ ಕಾರಣದಿಂದ ಮೂಲೆಗುಂಪಾಗಿದ್ದಾರೆ ಎನ್ನುವುದಕ್ಕೆ ಯಾವ ಕಾರಣವೂ ಇರಲಿಲ್ಲ. ಉಳಿದ ನಟರಿಗೆ ಹೋಲಿಸಿದರೆ, ಸುಶಾಂತ್ ಅವರಿಗೆ ಸಿಕ್ಕಿದ ಅವಕಾಶಗಳು ಗಮನಾರ್ಹವಾದವುಗಳು. ತನ್ನ ಭವಿಷ್ಯದ ಕುರಿತಂತೆ, ಆರ್ಥಿಕತೆಯ ಕುರಿತಂತೆ ಅವರು ಅಭದ್ರತೆಯನ್ನು ಹೊಂದಿದ್ದರೆ ಅದಕ್ಕೆ ನೇರ ಕಾರಣ, ಲಾಕ್‌ಡೌನ್‌ನಿಂದಾಗಿ ಚಿತ್ರೋದ್ಯಮ ಅನುಭವಿಸುತ್ತಿರುವ ಅತಂತ್ರ ಸ್ಥಿತಿ ಎನ್ನುವುದನ್ನು ಊಹಿಸಲು ಹೆಚ್ಚು ಶ್ರಮದ ಅಗತ್ಯವಿಲ್ಲ. ಕರ್ನಾಟಕದಲ್ಲಿ ಇಬ್ಬರು ಟಿವಿ ತಾರೆಯರು ಆತ್ಮಹತ್ಯೆ ಮಾಡಿಕೊಂಡ ಬೆನ್ನಿಗೇ, ಮರಾಠಿಯ ಜನಪ್ರಿಯ ಟಿವಿ ತಾರೆಯೊಬ್ಬ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ಕಿರು ತೆರೆಯ ನಟ ಸಮೀರ್ ಶರ್ಮಾ ಮಲಾಡ್‌ನಲ್ಲಿರುವ ತಮ್ಮ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಶುಕ್ರವಾರ ಭೋಜಪುರಿಯ ಕಿರುತೆರೆಯ ನಟಿ ಅನುಪಮಾ ಪಾಠಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಖಿನ್ನತೆ, ನಿರಾಶೆಗೊಳಗಾಗಿ ಸಾಲಸೋಲಗಳಿಂದ ಒದ್ದಾಡುತ್ತಿರುವ ಹತ್ತು ಹಲವು ನಟರ ಕುರಿತ ವಿವರಗಳು ಹೊರ ಬೀಳುತ್ತಿವೆ. ಲಾಕ್‌ಡೌನ್ ಪರಿಣಾಮದಿಂದ ಚಿತ್ರೋದ್ಯಮವೇನಾದರೂ ಶಾಶ್ವತವಾಗಿ ಮುಚ್ಚುವ ಸ್ಥಿತಿ ನಿರ್ಮಾಣವಾದರೆ, ಬಣ್ಣದ ಬದುಕಿನ ಇನ್ನಷ್ಟು ಕಟು ವಾಸ್ತವಗಳು ಹೊರಬೀಳಲಿವೆ. ಮುಖ್ಯವಾಗಿ, ಈ ಸಂದರ್ಭದಲ್ಲಿ ದಾರಿ ಕಾಣದೆ ಆಘಾತಗೊಳ್ಳಲಿರುವವರು ಉದ್ಯಮದಲ್ಲಿ ಇನ್ನೂ ಸರಿಯಾಗಿ ಬೇರೂರದ ಎಳೆ ಸ್ಟಾರ್‌ಗಳು. ಒಂದು ಚಿತ್ರ ಯಶಸ್ವಿಯಾದಾಕ್ಷಣ, ತನ್ನ ಸ್ಟಾರ್ ವರ್ಚಸ್ಸನ್ನು ಉಳಿಸಿಕೊಳ್ಳಲು ಅವರು ಜೀವನ ಶೈಲಿಯನ್ನೇ ಬದಲಾಯಿಸಬೇಕಾಗುತ್ತದೆ. ಭವಿಷ್ಯದ ದೃಷ್ಟಿಯಿಂದ ಇದು ಅವರಿಗೆ ಅತ್ಯಗತ್ಯ. ಒಮ್ಮೆ ಯಶಸ್ವಿಯಾದ ಬಳಿಕ, ಯಾವ ಕಾರಣಕ್ಕೂ ರಸ್ತೆಯಲ್ಲಿ ಬರಿಗಾಲಿನಲ್ಲಿ ನಡೆಯುವಂತಿಲ್ಲ. ಹಾಗೆಯೇ ಜನಸಾಮಾನ್ಯರಿಗೆ ಎಟಕುವಂತಹ ಪ್ರದೇಶದಲ್ಲಿ ವಾಸ ಮಾಡುವಂತಿಲ್ಲ. ಅನಿರೀಕ್ಷಿತ ಲಾಕ್‌ಡೌನ್ ಇವರ ಈ ಜೀವನ ಶೈಲಿಯನ್ನು ಅನಾಮತ್ತಾಗಿ ಎತ್ತಿ ಎಸೆದಿದೆ. ಕೆಳಗೂ ಇಲ್ಲ, ಮೇಲೂ ಇಲ್ಲ ಎನ್ನುವ ತ್ರಿಶಂಕು ಸ್ಥಿತಿಯಲ್ಲಿ ಇವರು ಸಿಲುಕಿಕೊಂಡಿದ್ದಾರೆ.

ಟಿವಿ ತಾರೆಯರದೋ ಇನ್ನೊಂದು ದುರಂತ. ಅವರಿಗೆ ಸಿಗುವ ಸಂಭಾವನೆ ತೀರಾ ಅಲ್ಪ. ಅದು ಒಮ್ಮೆಲೆ ಸಿಗುವುದಿಲ್ಲ. ನಿರ್ಮಾಪಕರು, ಕೊಟ್ಟರೆ ಕೊಟ್ಟರು, ಇಲ್ಲವಾದರೆ ಇಲ್ಲ. ಕೊಡಲಿಲ್ಲವೆಂದು ಅವರ ಮೇಲೆ ತೀರಾ ಒತ್ತಡ ಹಾಕುವಂತಿಲ್ಲ. ಟಿವಿ ಧಾರಾವಾಹಿಗಳು ನಿರಂತರವಾಗಿರುವುದರಿಂದ ಒಂದು ಸಣ್ಣ ಭದ್ರತೆ ಅವರ ಪಾಲಿಗಿರುತ್ತದೆ. ಆದರೆ ಲಾಕ್‌ಡೌನ್, ಎಲ್ಲ ಟಿವಿ ಧಾರಾವಾಹಿಗಳ ಶೂಟಿಂಗ್‌ಗಳನ್ನೂ ತಡೆದು ನಿಲ್ಲಿಸಿದೆ. ತಾರೆಯರು ತಮ್ಮ ಜೀವನ ಶೈಲಿಗೆ ಪೂರಕವಾಗಿ ಬದುಕುವುದಕ್ಕೆ ಸಾಧ್ಯವಿಲ್ಲದ ಆರ್ಥಿಕ ಸ್ಥಿತಿಯಲ್ಲಿ ನಿಂತಿದ್ದಾರೆ. ಭವಿಷ್ಯದ ಬಗ್ಗೆಯೂ ಯಾರೂ ಅವರಿಗೆ ಭರವಸೆಗಳನ್ನು ನೀಡುವವರಿಲ್ಲ.

ಆದುದರಿಂದಲೇ ಹಲವು ತಾರೆಯರು ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಿನೆಮೋದ್ಯಮಗಳನ್ನು ಅವಲಂಬಿಸಿದ ಲಕ್ಷಾಂತರ ಕೂಲಿ ಕಾರ್ಮಿಕರಿದ್ದಾರೆ. ಇವರ ಸ್ಥಿತಿಯಂತೂ ದಯನೀಯವಾಗಿದೆ. ಈ ಉದ್ಯಮವನ್ನು ಅನಿವಾರ್ಯವಾಗಿ ತೊರೆದು ಬೇರೆ ಬೇರೆ ಕೆಲಸಗಳನ್ನು ಇವರು ಆರಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಸಿನೆಮೋದ್ಯಮದಲ್ಲಿ ಮೇಕಪ್‌ಮ್ಯಾನ್, ಛಾಯಾಗ್ರಾಹಕರು, ಸಂಕಲನಕಾರರು, ಚಿತ್ರಕತೆ ಬರಹಗಾರರು, ಡಬ್ಬಿಂಗ್ ಕಲಾವಿದರಿಗೆ ಈ ಥರದ ಆಯ್ಕೆ ಸಾಧ್ಯವಿಲ್ಲ. ಭವಿಷ್ಯದಲ್ಲಿ ಇವರೆಲ್ಲರಿಗೂ ಯಾವ ರೀತಿಯಲ್ಲಿ ಪುನರ್ವಸತಿಯನ್ನು ಒದಗಿಸಬೇಕು ಎನ್ನುವುದನ್ನು, ಸಿನೆಮೋದ್ಯಮದಲ್ಲಿ ಈಗಾಗಲೇ ಗಟ್ಟಿಯಾಗಿ ಬೇರೂರಿರುವ ನಿರ್ಮಾಪಕರು, ನಿರ್ದೇಶಕರು, ಸೂಪರ್ ಸ್ಟಾರ್‌ಗಳು ಒಂದಾಗಿ ಯೋಚಿಸಬೇಕು. ಇಲ್ಲವಾದರೆ ಜನಮಾನಸದ ಆದರ್ಶಗಳಾಗಿ ಮೆರೆಯುತ್ತಿರುವ ತಾರೆಗಳೆಲ್ಲ ಉಲ್ಕೆಗಳಾಗಿ ಭೂಮಿಗೆ ಉದುರಿ ಬೂದಿಯಾಗುವ ದಿನಗಳು ದೂರವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News