ಗ್ರಾಮಟ್ಟದಲ್ಲಿಯೇ ವಿಪತ್ತು ನಿರ್ವಹಣಾ ಯೋಜನೆ ರೂಪಿಸಿ: ಸಚಿವ ಬೊಮ್ಮಾಯಿ

Update: 2020-08-11 17:08 GMT

ಉಡುಪಿ, ಆ.11: ಉಡುಪಿ ಜಿಲ್ಲೆಯಲ್ಲಿ ನೆರೆ ಪರಿಹಾರ ಕೈಗೊಳ್ಳಲು ಗ್ರಾಪಂ ಮಟ್ಟದಲ್ಲಿಯೇ ಅಧಿಕಾರಿಗಳನ್ನು ಒಳಗೊಂಡಂತೆ ಸ್ಥಳೀಯ ಯುವ ಸ್ವಯಂ ಸೇವಕರನ್ನು ಸೇರಿಸಿಕೊಂಡು ತರಬೇತಿ ನೀಡಬೇಕು. ಈ ಮೂಲಕ ಗ್ರಾಮಮಟ್ಟ ದಲ್ಲಿಯೇ ವಿಪತ್ತು ನಿರ್ವಹಣಾ ಯೋಜನೆಯನ್ನು ರೂಪಿಸಿ, ಪರಿಹಾರ ಕಾರ್ಯ ಗಳನ್ನು ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಣಿಪಾಲ ರಜತಾದ್ರಿಯಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಮಳೆಹಾನಿ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಸಮಿತಿಯ ಮೇಲಸ್ತುವಾರಿಯನ್ನು ತಾಲೂಕು ಮಟ್ಟದಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾ ಮಟ್ಟ ದಲ್ಲಿ ಉಪ ಕಾರ್ಯದರ್ಶಿಗಳು ಮಾಡುವುದರೊಂದಿಗೆ ಪ್ರತಿದಿನದ ವರದಿಯನ್ನು ಸಿದ್ದ ಪಡಿಸಬೇಕು ಎಂದರು.

ಪ್ರತೀ ಗ್ರಾಪಂಗಳು ಭೌಗೋಳಿಕವಾಗಿ ವಿಭಿನ್ನವಾಗಿದ್ದು, ಅದರನ್ವಯ ಯೋಜನೆ ರೂಪಿಸಬೇಕು. ಇದರಿಂದ ಹೆಚ್ಚಿನ ಸಾವು ನೋವು ಜಾನು ವಾರು ಮರಣ ಹಾಗೂ ಆಸ್ತಿಹಾನಿಯಗದಂತೆ ತಡೆಯಲು ಹಾಗೂ ಶೀಘ್ರದಲ್ಲಿ ತುರ್ತು ಪರಿಹರ ಕಾರ್ಯ ಕೈಗೊಂಡು ಹೆಚ್ಚಿನ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಅತಿಯಾದ ಮಳೆಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ನಷ್ಟ ಉಂಟಾಗಿದ್ದು, ಮಣ್ಣಿನ ಸವಕಳಿ ಆಧರಿಸಿ, ಪ್ರಾಥಮಿಕ ಸರ್ವೇ ಮಾಡಿದಾಗ ಮಾತ್ರ ಅವರಿಗೆ ಸರಿಯಾದ ನಷ್ಠ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಈ ಕಾರ್ಯವನ್ನು ಗ್ರಾಮ ಲೆಕ್ಕಿಗರು, ಪಿಡಿಓಗಳು ಹಾಗೂ ಕೃಷಿ ಹಾಗೂ ತೋಟ ಗಾರಿಕಾ ಅಧಿಕಾರಿಗಳು ಜಂಟಿ ಸರ್ವೇ ಕಾರ್ಯವನ್ನು ಆಧುನಿಕ ತಂತ್ರಜ್ಞಾನ ಬಳಸಿಕೈಗೊಳ್ಳಬೇಕು. ಆಗ ಮಾತ್ರ ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ ಪರಿಹಾರ ನೀಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ರಘುಪತಿಭಟ್, ಸುನೀಲ್ ಕುಮಾರ್, ಸುಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಸಿಇಓ ಪ್ರೀತಿ ಗೆಹ್ಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

ಕಡಲ್ಕೊರೆತದಿಂದ 18.95 ಕೋಟಿ ರೂ. ನಷ್ಟ

ಉಡುಪಿ ಜಿಲ್ಲೆಯಲ್ಲಿ ಈವರೆಗೆ 2115 ಮೀಟರ್ ಕಡಲ್ಕೊರೆತ ಸಂಭವಿ ಸಿದ್ದು, ಇದರಿಂದ ಸುಮಾರು 18.95 ಕೋಟಿ ರೂ. ನಷ್ಟ ಉಂಟಾಗಿದೆ. ಈ ಬಗ್ಗೆ ಅಂದಾಜುಪಟ್ಟಿ ತಯಾರಿಸಿ, ಶೀಘ್ರದಲ್ಲಿ ಸಲ್ಲಿಸುವಂತೆ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಮಳೆಯಿಂದ ಹಾನಿಯದ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಲು ಅಂದಾಜು ಮೊತ್ತವನ್ನು ಲೋಕೋಪಯೋಗಿ, ಪಂಚಾಯತ್‌ರಾಜ್, ಇಂಜಿನಿಯರಿಂಗ್ ಹಾಗೂ ಸ್ಥಳೀಯ ಸಂಸ್ಥೆಗಳು ನೀಡಿದಲ್ಲಿ ಅನುದಾನ ಬಿಡುಗಡೆ ಮಾಡಲು ಪ್ರಯತ್ನಿಸಲಾಗುವುದು ಎಂದ ಅವರು, ತೋಟದಲ್ಲಿ ರುವ ವಾಸದ ಮನೆಗಳಿಗೆ ಹಾನಿಯಾದಾಗ ಅವುಗಳನ್ನು ಮನೆಹಾನಿ ಎಂದು ಪರಿಗಣಿಸಬೇಕು. ನಷ್ಟ ಪರಿಹಾರ ನೀಡುವಾಗ ಹಾನಿಯ ನಿಖರತೆ ಆಧರಿಸಿ ಮಾನವೀಯತೆಯಿಂದ ಪರಿಹಾರ ಮೊತ್ತವನ್ನು ನೀಡಲು ಮುಂದಾಗಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News