ಕೇರಳ ವಿಮಾನ ದುರಂತ: ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ 22 ಅಧಿಕಾರಿಗಳಿಗೆ ಕೊರೋನ ಸೋಂಕು ದೃಢ
Update: 2020-08-14 12:56 GMT
ತಿರುವನಂತಪುರ: ಕಳೆದ ಶುಕ್ರವಾರ ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ನಡೆದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಪತನದ ವೇಳೆ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ 22 ಅಧಿಕಾರಿಗಳಿಗೆ ಕೊರೋನ ಸೋಂಕು ದೃಢಪಟ್ಟಿದೆ.
ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡ ಕೂಡಲೇ ಸ್ಥಳೀಯರು ಸೇರಿದಂತೆ ಸುಮಾರು 600 ಮಂದಿಯನ್ನು ಕ್ವಾರಂಟೈನಿನಲ್ಲಿರುವಂತೆ ಸೂಚಿಸಲಾಗಿತ್ತು. ಇದೀಗ 22 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ವಿಮಾನ ಪತನಗೊಂಡ ನಂತರ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆರೋಗ್ಯ ಸಚಿವ ಕೆ ಎಸ್ ಶೈಲಜಾ ಸಹಿತ ಹಲವಾರು ಮಂದಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ವಿಮಾನ ಪತನಗೊಂಡ ಮರುದಿನ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ವಿದೇಶಾಂಗ ಸಹಾಯಕ ಸಚಿವ ವಿ ಮುರಳೀಧರನ್ ಕೂಡ ಸ್ಥಳಕ್ಕೆ ಭೇಟಿ ನೀಡಿ ನಂತರ ಉನ್ನತ ಮಟ್ಟದ ಸಭೆಗಳಲ್ಲಿ ಭಾಗವಹಿಸಿದ್ದರು.