ಬಂಟ್ವಾಳ : ವಿವಿಧೆಡೆ ಸ್ವಾತಂತ್ರ್ಯೋತ್ಸವ ಆಚರಣೆ

Update: 2020-08-16 04:23 GMT

ಬಂಟ್ವಾಳ, ಆ.15: ತಾಲೂಕು ಆಡಳಿತದಿಂದ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಧ್ವಜಾರೋಹಣದೊಂದಿಗೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಕೋವಿಡ್ ವಾರಿಯರ್ ಗಳಾದ ಅಂಬುಲೆನ್ಸ್ ಡ್ರೈವರ್ ಗಳನ್ನು ಹಾಗೂ ಎಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದವರನ್ನು ಗೌರವಿಸಿದರು.

ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ರಶ್ಮಿ ಎಸ್.ಆರ್. ಸಂದೇಶ ನೀಡಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತ ನಾಡಿ, ಈ ಬಾರಿ ಅನಿವಾರ್ಯ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ದಿನವನ್ನು ಸರಳ ರೀತಿಯಲ್ಲಿ ಆಚರಿಸಬೇಕಾಗಿ ಬಂದಿದ್ದು, ಕೊರೊನಾ ವಾರಿಯರ್ಸ್ ಗಳು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದೇವೆ ಎಂದರು. 

ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಎಪಿಎಂಸಿ ಅಧ್ಯಕ್ಷ ನೇಮಿರಾಜ ರೈ, ತಾ.ಪಂ. ಇಒ ರಾಜಣ್ಣ, ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಗಾಯತ್ರಿ ಕಂಬಳಿ, ನ್ಯಾಯವಾದಿ ಚಂದ್ರಶೇಖರ ಪೂಜಾರಿ ಸಹಿತ ನಾನಾ ಇಲಾಖೆಗಳ ಅಧಿಕಾರಿಗಳು ಇದ್ದರು.

ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಕೊರೊನಾ ವಾರಿಯರ್ಸ್ ಗಳ ವಿವರ ನೀಡಿದರು. ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಬಂಟ್ವಾಳ ಪೊಲೀಸ್ ಇಲಾಖೆಯಿಂದ ಪಥಸಂಚಲನ ನಡೆಯಿತು. ಎಸ್ಸೈಗಳಾದ ಪ್ರಸನ್ನ ಮತ್ತು ಅವಿನಾಶ್ ನಿರ್ವಹಿಸಿದರು. ಬೆಸ್ಟ್ ಶಾಲಾ ಶಿಕ್ಷಕಿಯರು ರಾಷ್ಟ್ರಗೀತೆ, ನಾಡಗೀತೆ ಹಾಡಿದರು.

ಪುದು ಗ್ರಾಮ: ಸರಕಾರಿ ಪ್ರೌಢಶಾಲೆಯಲ್ಲಿ  ಸ್ವಾತಂತ್ರೋತ್ಸವ

 ಪುದು ಗ್ರಾಮದ ಸುಜೀರ್ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ 74ನೇ  ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಜಿಲ್ಲಾ ಪಂಚಾಯಿತ್ ಸದಸ್ಯ ಹಾಗೂ ಶಾಲಾಭಿವೃದ್ಧಿ ಅಧ್ಯಕ್ಷ ಉಮರ್ ಫಾರೂಕ್ ಫರಂಗಿಪೇಟೆ ನೆರವೇರಿಸಿದರು. 

ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯದ ಅನೇಕ ವಿಚಾರಗಳನ್ನು, ಹೋರಾಟದ ಮಹನೀಯರ ಬಗ್ಗೆ ಶಾಲಾ ಮಕ್ಕಳಿಗೆ ಸ್ವಾತಂತ್ರ್ಯದ ದಿನಾಚರಣೆಯ ಸಂದರ್ಭದಲ್ಲಿ ತಿಳಿಸುವ ಜವಬ್ದಾರಿ ನಮ್ಮದಾಗಿತ್ತು. ಆದರೆ ಕೊರೋನ ಹಿನ್ನೆಲೆಯಲ್ಲಿ ಶಾಲೆಯಲ್ಲಿ ನಡೆಯುವ ಸ್ವಾತಂತ್ರೋತ್ಸ ವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಪಾಲ್ಗೊಳ್ಳಲು ಸಾಧ್ಯವಾಗದಿರುವುದು ಬೇಸರದ ಸಂಗತಿಯಾಗಿದೆ ಎಂದರು. 

ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಹೋರಾಟಗಾರರ ನೆನಪು ಕೇವಲ ಒಂದು ದಿನಕ್ಕೆ ಸೀಮಿತಗೊಳ್ಳದೆ ಅವರ ನೆನಪು ಸದಾ ನಾವು ಮಾಡಿಕೊಳ್ಳಬೇಕಾಗಿದೆ. ಅವರ ಆದರ್ಶಗಳು, ವಿಚಾರಧಾರೆಗಳನ್ನು ಅಳವಡಿಸಿಕೊಂಡು ಸಂಪತ್ಬರಿತ ರಾಷ್ಟ್ರದ ನಿರ್ಮಾಣಕ್ಕೆ ನಾವೆಲ್ಲರೂ ಕಟಿಬದ್ಧರಾಗೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಡಿಯೋ ಪಿಂಟೋ, ಪಂಚಾಯತ್ ಸದಸ್ಯ ಇಕ್ಬಾಲ್ ಸುಜೀರ್, ಮುಖ್ಯ ಶಿಕ್ಷಕಿ ಜ್ಯೋತಿ ಮೇಡಮ್, ಜಯಪ್ರಕಾಶ್, ಅಬೂಬಕ್ಕರ್ ಫರಂಗಿಪೇಟೆ, ಮಜೀದ್ ಫರಂಗಿಪೇಟೆ, ಕಿಶೋರ್ ಸುಜೀರ್, ಕೆ.ಎಮ್.ಅಶ್ರಫ್ ಮಲ್ಲಿ, ಸಿದ್ದೀಕ್ ಸುಜೀರ್ ಗುಡ್ಡೆ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಬಿ.ಎಮ್.ಮುಹಮ್ಮದ್ ಮಾಸ್ಟರ್ ತುಂಬೆ ಕಾರ್ಯಕ್ರಮ ನಿರೂಪಿಸಿದರು. 

ಎಸ್ಕೆಎಸ್ಸೆಸ್ಸೆಫ್ ಶಾಂತಿಅಂಗಡಿ ಶಾಖೆ

ಎಸ್ಕೆಎಸ್ಸೆಸ್ಸೆಫ್ ಶಾಂತಿಅಂಗಡಿ ಶಾಖೆಯ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸ್ವಾತಂತ್ರ್ಯ ಸರ್ವರಿಗೂ ಸಮಾನವಾಗಿರಲಿ ಎಂಬ ವಾಕ್ಯದಡಿಯಲ್ಲಿ ಫ್ರೀಡಂ ಸ್ಕ್ವೇರ್ ಕಾರ್ಯಕ್ರಮ ನಡೆಯಿತು. 

ಇರ್ಷಾದ್ ದಾರಿಮಿ ಮಿತ್ತಬೈಲ್ ದುಅ ಮೂಲಕ ಉದ್ಘಾಟಿಸಿದರು. ಮಿತ್ತಬೈಲ್ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಮಿತ್ತಬೈಲ್ ಮಸೀದಿ ಖತೀಬ್ ಅಶ್ರಫ್ ಫೈಝಿ ಮಾತನಾಡಿ, ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮುಸ್ಲಿಮ್ ವೀರ ಯೋಧರನ್ನು ಸ್ಮರಿಸುತ್ತಾ, ಅವರ ಇತಿಹಾಸ ಪ್ರಚಾರ ಪಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖೆಯ ಅಧ್ಯಕ್ಷ ಅಶ್ರಫ್ ಶಾಂತಿಅಂಗಡಿ ವಹಿಸಿದ್ದರು. ಬಂಟ್ವಾಳ ವಲಯ ಕಾರ್ಯದರ್ಶಿ ಟಿ.ಎಂ.ಹನೀಫ್ ಮುಸ್ಲಿಯಾರ್ ಪ್ರತಿಜ್ಞಾಭೋಧನೆ ಗೈದರು. ಶಿಕ್ಷಣವನ್ನು ಪ್ರೋತ್ಸಾಹಿಸುವ ಸಲುವಾಗಿ ಶಾಖೆಯ ವ್ಯಾಪ್ತಿಯಲ್ಲಿ ಬರುವ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾದ ಜಿ.ಮುಹಮ್ಮದ್ ಫವಾಝ್ ಕೈಕಂಬ, ಅವ್ರಿಲ್ ಲೀನಾ ಲೂವಿಸ್ ಪೊನ್ನೊಡಿ, ಸಂಮ್ರೀನಾ ತಲಪಾಡಿ, ಅಸ್ಮಾ ಕೈಕಂಬ ಅವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಜಮಾತ್ ಕಾರ್ಯದರ್ಶಿ ಸಲಾಂ  ಪರ್ಲಿಯಾ, ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಎಸ್.ಎಚ್. ಶಾಂತಿಅಂಗಡಿ, ಶಾಖೆಯ ಕೋಶಾಧೀಕಾರಿ ಅಬ್ದುಲ್ ಹಮೀದ್ ಶಾಂತಿಅಂಗಡಿ, ಉಪಾಧ್ಯಕ್ಷ ಆದಂ ಪಲ್ಲ, ಎಸ್ಕೆಎಸ್ಸೆಸ್ಸೆಫ್ ಶಾಂತಿಅಂಗಡಿ ಶಾಖೆ ಎಲ್ಲಾ ಸದಸ್ಯರು ಹಾಗೂ ಜಮಾಅತ್ ಕಮಿಟಿ ಪ್ರಮುಖರು, ಹಿರಿಯರು, ಗಣ್ಯರು ಭಾಗವಹಿಸಿದರು.

ಸತ್ತಾರ್ ಫೈಝಿ ಉಸ್ತಾದರು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News