ಎಸ್ಟಿಪಿ ಪ್ಲಾಂಟ್ ಮುಂದೆ ಅಪಾಯಕಾರಿ ನಾಮಫಲಕ ಕಡ್ಡಾಯ
ಉಡುಪಿ, ಆ.19: ಪೌರಾಡಳಿತ ನಿರ್ದೇಶನಾಲಯದ ಸೂಚನೆಯಂತೆ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಮ್ಯಾನ್ಹೋಲ್/ಚರಂಡಿ/ಸೆಪ್ಟಿಕ್ ಟ್ಯಾಂಕ್ಗಳು ಹಾಗೂ ಎಸ್ಟಿಪಿ ಪ್ಲಾಂಟ್ಗಳನ್ನು ಸ್ವಚ್ಛಗೊಳಿಸಲು ಹೋಗುವ ಸಫಾಯಿ ಕರ್ಮಚಾರಿಗಳು/ಸ್ವಚ್ಛತಾ ಕಾರ್ಮಿಕರು/ ಪೌರಕಾರ್ಮಿಕರು ಸಾವನ್ನಪ್ಪುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ಬೆಳಕಿಗೆ ಬಂದಿದೆ.
ಇದಕ್ಕೆ ಕಾರಣ ಅನೈರ್ಮಲ್ಯ ತ್ಯಾಜ್ಯದಿಂದ ಬಿಡುಗಡೆಯಾಗುವ ವಿಷಕಾರಿ ಮಿಥೇನ್ ಅನಿಲ. ಈ ಅನಿಲ ಉಸಿರಾಡುವ ವ್ಯಕ್ತಿ ಕ್ಷಣ ಮಾತ್ರದಲ್ಲಿ ಉಸಿರು ಗಟ್ಟಿ ಸಾವನ್ನಪ್ಪುತ್ತಾರೆ. ಇಂತಹ ಪ್ರಕರಣಗಳು ಇನ್ನು ಮುಂದೆ ಸಂಭವಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಪಾರ್ಟ್ಮೆಂಟ್ಗಳು, ಖಾಸಗಿ ಕಂಪೆನಿಗಳು, ಬಹುಮಹಡಿ ಕಟ್ಟಡಗಳು, ಆಸ್ಪತ್ರೆಗಳು, ಮಾಲುಗಳು, ಮಹಲುಗಳು ಹಾಗೂ ಇನ್ನಿತರೆ ಸ್ಥಳಗಳಲ್ಲಿ ರ್ನಿುಸಲಾಗಿರುವ ಮ್ಯಾನ್ಹೋಲ್/ಚರಂಡಿ/ಸೆಪ್ಟಿಕ್ ಟ್ಯಾಂಕ್ಗಳು ಹಾಗೂ ಎಸ್ಟಿಪಿ ಪ್ಲಾಂಟ್ಗಳ ಮುಂದೆ ಅಪಾಯಕಾರಿ ಎಂಬ ನಾಮಫಲಕ ವನ್ನು ಅಳವಡಿಸುವುದು ಅತೀ ಅಗತ್ಯವಾಗಿದೆ.
ಆದುದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಪಾರ್ಟ್ ಮೆಂಟ್ಗಳು, ಖಾಸಗಿ ಕಂಪೆನಿಗಳು, ಬಹುಮಹಡಿ ಕಟ್ಟಡಗಳು, ಆಸ್ಪತ್ರೆಗಳು, ಮಾಲುಗಳು, ಮಹಲುಗಳು ಹಾಗೂ ಇನ್ನಿತರೆ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಮ್ಯಾನ್ಹೋಲ್/ಚರಂಡಿ/ಸೆಪ್ಟಿಕ್ ಟ್ಯಾಂಕ್ಗಳು ಹಾಗೂ ಎಸ್ಟಿಪಿ ಪ್ಲಾಂಟ್ ಗಳ ಮುಂದೆ ಅಪಾಯಕಾರಿ ಎಂಬ ನಾಮಫಲಕವನ್ನು ಅಳವಡಿಸುವಂತೆ ಉಡುಪಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.