ಮಂಗಳೂರು: ಸರಣಿ ಅಪಘಾತ; ಮೂವರಿಗೆ ಗಾಯ

Update: 2020-08-20 16:03 GMT

ಮಂಗಳೂರು, ಆ.20: ನಗರದ ಕೆಪಿಟಿ ಸಮೀಪದಲ್ಲಿ ಗುರುವಾರ ಸಂಜೆ ನಡೆದ ಸರಣಿ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದೆ.
ಪಚ್ಚನಾಡಿ ನಿವಾಸಿ ಜೆಸ್ಸಿ ಪಿಂಟೊ (55), ಸುರತ್ಕಲ್ ಕಾಟಿಪಳ್ಳ ನಿವಾಸಿಗಳಾದ ಮುಝೈನ್ ಮನ್ಸೂರ್ (20), ಅಹ್ಮದ್ ಬಿ. (20) ಗಾಯಗೊಂಡವರು.

ಮುಝೈನ್ ಮನ್ಸೂರ್ ಎಂಬವರು ಚಲಾಯಿಸುತ್ತಿದ್ದ ಕಾರು ಕೆಪಿಟಿ ಕಡೆಯಿಂದ ಕುಂಟಿಕಾನ ಮಾರ್ಗವಾಗಿ ಸಂಜೆ 5:30ರ ಸುಮಾರಿಗೆ ತೆರಳುತ್ತಿತ್ತು. ಕಾರಿನಲ್ಲಿ ಅಹ್ಮದ್ ಬಿ. ಸಹಸವಾರರಾಗಿದ್ದರು. ಕಾರು ಕೆಪಿಟಿಯಿಂದ ಕೆಲವೇ ಮೀಟರ್ ದೂರ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಬಲಭಾಗದ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ. ಇದೇ ಸಂದರ್ಭ ವಿರುದ್ಧ ದಿಕ್ಕಿನಿಂದ (ಕುಂಟಿಕಾನ) ಕೆಪಿಟಿ ಮೂಲಕ ಪಚ್ಚನಾಡಿಗೆ ತೆರಳುತ್ತಿದ್ದ ಕಾರೊಂದಕ್ಕೆ ಗುದ್ದಿದೆ. ಮುಂದುವರಿದು ಅದೇ ಮಾರ್ಗವಾಗಿ ಬರುತ್ತಿದ್ದ ಟ್ಯಾಂಕರ್‌ಗೂ ಢಿಕ್ಕಿಯಾಗಿದೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪಚ್ಚನಾಡಿಯ ಜೆಸ್ಸಿ ಪಿಂಟೊ ನೀಡಿದ ದೂರಿನಂತೆ ಕಾರು ಚಾಲಕನ ವಿರುದ್ಧ ಮಂಗಳೂರು ಪೂರ್ವ (ಕದ್ರಿ) ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News