ಕೊಂಕಣಿ ಮಾನ್ಯತಾ ದಿನಾಚರಣೆ
ಮಂಗಳೂರು, ಆ.21: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯಿಂದ ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತ ಸವಿ ನೆನಪಿಗಾಗಿ ಕೊಂಕಣಿ ಮಾನ್ಯತಾ ದಿನಾಚರಣೆ ಕಾರ್ಯಕ್ರಮವನ್ನು ನಗರದ ಉರ್ವದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಶಾಂತರಾಮ ಸಿದ್ಧಿ, ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಸುಧಾಕರ ಶೇಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
2019ನೇ ಸಾಲಿನ ಕೊಂಕಣಿ ಅಧ್ಯಯನ ವಿಭಾಗದಲ್ಲಿ ಡಾ.ಪಿಯುಸ್ ಫಿದಲಿಸ್ ಪಿಂಟೊ ಅವರಿಗೆ ಪುಸ್ತಕ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹಾಗೂ ಶಾಂತಾರಾಮ್ ಸಿದ್ಧಿ ಅವರನ್ನು ಸನ್ಮಾನಿಸಲಾಯಿತು. ಅಕಾಡಮಿಯ ಅಧ್ಯಕ್ಷ ಡಾ.ಜಗದೀಶ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಕಾಡಮಿಯ ರಿಜಿಸ್ಟ್ರಾರ್ ಕುಮಾರ್ ಬಾಬು ಬೆಕ್ಕೇರಿ, ಸದಸ್ಯರಾದ ಅರುಣ್ ಜಿ. ಶೇಟ್, ಕೆನ್ಯೂಟ್ ಜೀವನ್ ಪಿಂಟೊ, ನರಸಿಂಹ ಕಾಮತ್, ಗೋಪಾಲ ಕೃಷ್ಣ ಭಟ್ ಉಪಸ್ಥಿತರಿದ್ದರು.
ಅಕಾಡಮಿಯ ಅಧ್ಯಕ್ಷ ಡಾ.ಜಗದೀಶ್ ಪೈ ಸ್ವಾಗತಿಸಿದರು. ಸದಸ್ಯ ನವೀನ್ ನಾಯಕ್ ವಂದಿಸಿದರು. ಸದಸ್ಯೆ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಾಂಸ್ಕೃತಿಕ ವಿನೋದಾವಳಿಗಳನ್ನು ನಡೆಸಲಾಯಿತು.