ಬೆಳ್ತಂಗಡಿ : ಕೋಮು ಪ್ರಚೋದನಕಾರಿ ಪೋಸ್ಟ್ ; ಆರೋಪಿ ರಘುರಾಮ್ ಶೆಟ್ಟಿ ಸೆರೆ
Update: 2020-08-24 22:30 IST
ಬೆಳ್ತಂಗಡಿ : ಕೋಮು ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ನಂತರ ತಲೆ ಮರೆಸಿಕೊಂಡಿದ್ದ ಬಾರ್ಯ ಪುತ್ತಿಲ ಗ್ರಾಮದ ರಘುರಾಮ್ ಶೆಟ್ಟಿ ಎಂಬಾತನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಪುತ್ತಿಲದ ಸಂಬಂಧಿಕರ ಮನೆಯಲ್ಲಿ ಆರೋಪಿ ರಘುರಾಮ್ ಶೆಟ್ಟಿ ತಲೆಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್. ಪಿ.ಜಿ ನೇತೃತ್ವದ ಪೊಲೀಸರ ತಂಡ ಇಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಪ್ರಕರಣದ ವಿವರ
ಬಾರ್ಯ ಪುತ್ತಿಲ ಗ್ರಾಮದ ರಘುರಾಮ್ ಶೆಟ್ಟಿ ರಾಮಮಂದಿರ ಭೂಮಿ ಪೂಜೆಯಂದು ನೀತಿ ಸಂಹಿತೆ ಉಲ್ಲಂಘಿಸಿ, ಪಟಾಕಿ ಸಿಡಿಸಿದ ವಿಚಾರಕ್ಕೆ ಪುಂಜಾಲಕಟ್ಟೆ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆ ಬಳಿಕ ಸಾಮಾಜಿಕ ಜಾಲದಲ್ಲಿ ಕೋಮು ಪ್ರಚೋದನಕಾರಿ ಪೋಸ್ಟ್ ಹಾಕಿರುವುದಾಗಿ ಈ ಕುರಿತು ಕರ್ಪಾಡಿ ನಿವಾಸಿ ಜಲೀಲ್ ಎಂಬವರು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.