ಸ್ಮಾರ್ಟ್ ಸಿಟಿಯ ಮೂಲ ಉದ್ದೇಶವನ್ನು ಗಾಳಿಗೆ ತೂರಿದ ಶಾಸಕ: ಜೆ.ಆರ್.ಲೋಬೋ ಆರೋಪ
ಮಂಗಳೂರು, ಆ.28: ಮಂಗಳೂರು ನಗರವು ದೇಶದ ಸ್ಮಾರ್ಟ್ ಸಿಟಿಗೆ ಸೇರಲು ಇಲ್ಲಿನ ಹಳೆ ಬಂದರು ಮತ್ತು ಮೀನುಗಾರಿಕೆಯೇ ಕಾರಣ. ಈ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಮೂಲಭೂತ ಸೌಕರ್ಯವನ್ನು ಒದಗಿಸಿ ಆರ್ಥಿಕ ಯೋಜನೆಯನ್ನು ಮಂಗಳೂರಿಗೆ ತರಬಹುದಿತ್ತು. ಅಲ್ಲದೆ ಮಂಗಳೂರಿನ ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ಉದ್ದಿಮೆ, ಬಂದರು ಹಾಗೂ ಮೀನುಗಾರಿಕೆ, ಶೈಕ್ಷಣಿಕ ಕೇಂದ್ರಗಳ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಯೋಜನೆಯನ್ನು ಬಳಬಹುದಿತ್ತು. ಆದರೆ ಇಲ್ಲಿನ ಶಾಸಕರು, ಅಧಿಕಾರಿಗಳು ಸ್ಮಾರ್ಟ್ ಸಿಟಿ ಯೋಜನೆಗೆ ಬಂದ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಆರೋಪಿಸಿದ್ದಾರೆ.
ಸ್ಮಾರ್ಟ್ ಸಿಟಿಯ ಮೂಲ ಉದ್ದೇಶವನ್ನು ಶಾಸಕರು, ಅಧಿಕಾರಿಗಳು ಗಾಳಿಗೆ ತೂರಿದ್ದಾರೆ. ತಾನು ಶಾಸಕನಾಗಿದ್ದಾಗ 650 ಕೋ.ರೂ.ವನ್ನು ಕುಡಿಯುವ ನೀರು, ಒಳಚರಂಡಿ ವ್ಯವಸ್ಥಿಗೆ ಕುಡ್ಸೆಂಪ್ ಇಲಾಖೆಗೆ ಸರಕಾರದಿಂದ ಮಂಜೂರು ಮಾಡಿಸಿದ್ದೆ. ಅದು ಈಗ ಕಾರ್ಯಗತವಾಗುತ್ತಿದೆ. ಅದನ್ನು ಸರಿಯಾಗಿ ಮಾಡುವುದನ್ನು ಬಿಟ್ಟು ಇವರು ಸ್ಮಾರ್ಟ್ ಸಿಟಿಯೋಜನೆಯ ದುಡ್ಡನ್ನು ರಸ್ತೆಗೆ ಹಾಗೂ ಒಳಚರಂಡಿ ಕಾರ್ಯಕ್ಕೆ ಬಳಸುತ್ತಿರುವುದು ಸರಿಯಲ್ಲ. ತಾನು ಶಾಸಕನಾಗಿದ್ದಾಗ ಜಪ್ಪಿನಮೊಗರು ನೇತ್ರಾವತಿ ಸೇತುವೆಯ ಬದಿಯಿಂದ ಕಣ್ಣೂರು ರಾಷ್ಟ್ರೀಯ ಹೆದ್ದಾರಿವರೆಗೆ ಬೈಪಾಸ್ ರಸ್ತೆ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡಿಸಿ ಸರಕಾರದಿಂದ ಮಂಜೂರು ಮಾಡಿಸಿದ್ದೆ. ಅದರ ಸರ್ವೆ ಕಾರ್ಯವು ಪ್ರಾರಂಭವಾಗಿತ್ತು. ಅದನ್ನು ಸ್ಮಾರ್ಟ್ ಸಿಟಿಗೆ ಶಾಸಕರು ಸೇರಿಸಬಹುದಿತ್ತು. ಈ ಬೈಪಾಸ್ ರಸ್ತೆ ಆಗುತ್ತಿದ್ದರೆ ಆ ಪ್ರದೇಶ ಅಭಿವೃದ್ಧಿಯಾಗಿ ಅಲ್ಲಿ ವ್ಯವಸ್ಥೆ ಮಾಡಿಸುವ ಮೂಲಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಕೊಡಬಹುದಿತ್ತು. ಅದಲ್ಲದೆ ಸಾಗರ ಮಾಲಾ ಯೋಜನೆಯಡಿ ನದಿದಡದಿಂದ ಹಳೆಬಂದರು, ಸುಲ್ತಾನ್ ಬತ್ತೇರಿ, ಬೆಂಗರೆಯ ಮುಖಾಂತರ ನವಮಂಗಳೂರು ಬಂದರಿಗೆ ಸಂಪರ್ಕ ಹೊಂದುವ ರಸ್ತೆಯನ್ನು ಸ್ಮಾರ್ಟ್ ಸಿಟಿಗೆ ಸೇರಿಸಲು ಸ್ಥಳೀಯ ಶಾಸಕರು ಪ್ರಯತ್ನಿಸಬಹುದಿತ್ತು. ಈ ಎಲ್ಲಾ ಯೋಜನೆಗಳಿಗೆ ಸ್ಮಾರ್ಟಿ ಸಿಟಿಯ ಅನುದಾನದಲ್ಲಿ ಕೊರತೆ ಬಂದರೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಹಣ ಕ್ರೋಢೀಕರಿಸಿ ಈ ಯೋಜನೆಯನ್ನು ಕಾರ್ಯಗತಗೊಳಿಸಬಹುದಿತ್ತು. ಅದನ್ನೆಲ್ಲವನ್ನು ಬಿಟ್ಟು ಕೇವಲ ರಸ್ತೆ ಅಗೆತ, ಒಳಚರಂಡಿ, ನಗರದಲ್ಲಿ ಬಸ್ಸ್ಟಾಂಡ್ಗಳನ್ನು ಕಟ್ಟಿ ಹಣವನ್ನು ಪೋಲು ಮಾಡುವುದರ ಕೆಲಸದಲ್ಲಿ ಶಾಸಕರು, ಅಧಿಕಾರಿಗಳು ನಿರತರಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೇಂದ್ರ ಮಾರುಕಟ್ಟೆಯನ್ನು ಒಳ್ಳೆಯ ರೀತಿಯಲ್ಲಿ ವ್ಯಾಪಾರಸ್ಥರಿಗೆ, ಜನರಿಗೆ ಅನುಕೂಲವಾಗುವಂತೆ ಕಟ್ಟಿಸಿಕೊಡಬಹುದಿತ್ತು. ಅದನ್ನು ಬದಿಗೊತ್ತಿ ಏಕಾಏಕಿ ವ್ಯಾಪಾರಿಗಳನ್ನು ಸ್ಥಳಾಂತರಗೊಳಿಸಲಾಯಿತು. ಕದ್ರಿ ಮಾರುಕಟ್ಟೆ, ಉರ್ವ ಮಾರುಕಟ್ಟೆಯಲ್ಲಿ ಮಾಡಿದ ಹಾಗೆಯೇ, ವ್ಯಾಪಾರಸ್ಥರಿಗೆ ಅದರ ಪಕ್ಕದಲ್ಲಿಯೇ ಬದಲಿ ವ್ಯವಸ್ಥೆ ಮಾಡಿಸಬೇಕಿತ್ತು ಎಂದು ಜೆ.ಆರ್.ಲೋಬೋ ಅಭಿಪ್ರಾಯಪಟ್ಟಿದ್ದಾರೆ.