ನ್ಯಾಯಾಂಗ ನಿಂದನೆ ಪ್ರಕರಣ ವಿಜಯ ಮಲ್ಯರ ಮರು ಪರಿಶೀಲನೆ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
Update: 2020-08-31 15:25 GMT
ಹೊಸದಿಲ್ಲಿ, ಆ. 31: ತನ್ನ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಎತ್ತಿ ಹಿಡಿದು 2017ರಲ್ಲಿ ನೀಡಿದ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ಮದ್ಯದ ದೊರೆ ಹಾಗೂ ದೇಶದಿಂದ ಪರಾರಿಯಾಗಿರುವ ವಿಜಯ್ ಮಲ್ಯ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿ ಯು.ಯು ಲಲಿತ್ ಹಾಗೂ ಅಶೋಕ್ ಭೂಷಣ್ ಅವರನ್ನು ಒಳಗೊಂಡ ಪೀಠ, ‘‘ನಮಗೆ ಈ ಮನವಿಯಲ್ಲಿ ಯಾವುದೇ ಅರ್ಥ ಕಂಡು ಬಂದಿಲ್ಲ. ಮರು ಪರಿಶೀಲನಾ ಅರ್ಜಿ ತಿರಸ್ಕರಿಸಲಾಗಿದೆ’’ ಎಂದು ಹೇಳಿದೆ. ಉಭಯ ಕಡೆಯ ವಾದ ವಿವಾದವನ್ನು ಆಲಿಸಿದ ಬಳಿಕ ಆಗಸ್ಟ್ 27ರಂದು ಮರು ಪರಿಶೀಲನಾ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಕಾದಿರಿಸಿತ್ತು.
4 ಕೋಟಿ ಡಾಲರ್ ಅನ್ನು ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಿ ನ್ಯಾಯಾಂಗವನ್ನು ನಿಂದಿಸಿ ಅಪರಾಧ ಎಸಗಿರುವುದನ್ನು ಸುಪ್ರೀಂ ಕೋರ್ಟ್ 2017 ಮೇ 9ರಂದು ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಮಲ್ಯ ಅವರು ಮರು ಪರಿಶೀಲನೆ ಕೋರಿ ಮನವಿ ಸಲ್ಲಿಸಿದ್ದರು.