ವೇತನ ವಂಚಿತ ಶಿಕ್ಷಕರಿಗೆ ಸರಕಾರ ತಲಾ 10 ಸಾವಿರ ರೂ. ನೀಡಲಿ: ಅಭಿಷೇಕ್ ಉಳ್ಳಾಲ್

Update: 2020-09-04 06:49 GMT

ಮಂಗಳೂರು, ಸೆ. 4: ಕರೋನ ಹಿನ್ನೆಲೆಯಲ್ಲಿ ಶಿಕ್ಷಕರು, ಉಪನ್ಯಾಕರು ವೇತನವಿಲ್ಲದೆ ದುಡಿಯುವಂತಾಗಿದ್ದು, ತಮ್ಮ ಕುಟುಂಬ ನಿರ್ವಹಣೆಗಾಗಿ ಸಾಲ ಮಾಡವ ಪರಿಸ್ಥಿತಿ ಬಂದಿದೆ. ಯಾರೆಲ್ಲ ವೇತನದಿಂದ ವಂಚಿತರಾಗಿದ್ದಾರೊ ಅವರಿಗೆ ಸರ್ಕಾರ ತಕ್ಷಣ ತಿಂಗಳಿಗೆ 10 ಸಾವಿರ ರೂ.ನಂತೆ ಆರ್ಥಿಕ ಸಹಾಯ ನೀಡಬೇಕು ಎಂದು ಮಂಗಳೂರು ವಿವಿ ಶೈಕ್ಷಣಿಕ ಪರಿಷತ್ ಮಾಜಿ ಸದಸ್ಯ ಅಭಿಷೇಕ್ ಉಳ್ಳಾಲ್ ಮನವಿ ಮಾಡಿದ್ದಾರೆ.

ಸರ್ಕಾರ ಕಾರ್ಮಿಕರಿಗೂ ಕನಿಷ್ಠ ವೇತನ ನಿಗದಿಪಡಿಸಿದೆ. ಆದರೆ ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ನೀಡುವ ಶಿಕ್ಷಕರಿಗೆ ಕನಿಷ್ಠ ವೇತನ ನಿಗದಿ ಪಡಿಸದೆ ನಿರ್ಲಕ್ಷ ವಹಿಸಿದೆ. ಆದ್ದರಿಂದ ಸರ್ಕಾರ ಶೈಕ್ಷಣಿಕ ತಜ್ಞರ ಸಮಿತಿಯೊಂದನ್ನು ರಚಿಸಿ ಅವರಿಂದ ಶಿಕ್ಷಕರ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಬೇಕು. ಕನಿಷ್ಠ ವೇತನ ನೀಡುವ ನಿಟ್ಟಿನಲ್ಲಿ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಬೇಕು. ಹಲವು ಶಿಕ್ಷಣ ಸಂಸ್ಥೆಗಳು ಶೇ.50, 70ರಷ್ಟು ವೇತನ ಪಾವತಿಸುತ್ತಿದೆ. ಕೋವಿಡ್ ಕಾರಣ ನೀಡಿ ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಕಾಲೇಜು ವಿಭಾಗದ ಎಲ್ಲ ಶಿಕ್ಷಕರನ್ನು ಕೆಲಸದಿಂದ ತೆಗೆದಿದೆ ಎಂದವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿಕ್ಷಕರ ಟ್ರೋಲ್ ಶಿಕ್ಷಾರ್ಹ

ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಎಂಬುದೇ ನಮಗೆ ಹೊಸದು. ಅದರಲ್ಲೂ ಹೆಚ್ಚಿನ ಶಿಕ್ಷಕರು ಈ ವ್ಯವಸ್ಥೆ ಹೊಂದಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಶಿಕ್ಷಕರು ಆನ್‌ಲೈನ್‌ನಲ್ಲಿ ಪಾಠ ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಇದು ಶಿಕ್ಷಾರ್ಹ ಅಪರಾಧ. ಆಡಳಿತ ಮಂಡಳಿ ಅಂತಹ ವಿದ್ಯಾರ್ಥಿಗಳು ತಮ್ಮ ಸಂಸ್ಥೆಯಿಂದ ವಜಾ ಗೊಳಿಸಬೇಕು ಎಂದವರು ಆಗ್ರಹಿಸಿದರು.

ಮಂಗಳೂರು ವಿವಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಉಪಸ್ಥಿತರಿದ್ದರು.

ರಿಸರ್ವ್ ಬ್ಯಾಂಕ್ ಸಾಲದಲ್ಲಿ ಒಂದಂಶ ಶಿಕ್ಷಕರಿಗೆ ಮೀಸಲಿಡಿ

ರಾಜ್ಯ ಸರ್ಕಾರ ರಿಸರ್ವ್ ಬ್ಯಾಂಕ್‌ನಿಂದ ಸಾಲ ಪಡೆಯಲು ಉದ್ದೇಶಿಸಿದ್ದು, ಅದರಲ್ಲಿ ಒಂದಂಶವನ್ನು ಶಿಕ್ಷಕರಿಗಾಗಿಯೇ ಮೀಸಲಿಡಬೇಕು. ಪರಿಸ್ಥಿತಿ ಸುಧಾರಿಸಿದ ಬಳಿಕ ಅವಶ್ಯಕಯಿದ್ದರೆ ಅವರ ವೇತನದಿಂದ ಕಂತಿನಲ್ಲಿ ವಾಪಾಸು ತೆಗೆದುಕೊಳ್ಳಬಹುದು. ಜತೆಗೆ ಆರ್ಥಿಕವಾಗಿ ಸಬಲರಾಗಿರುವ ಹೆತ್ತವರು ತಮ್ಮ ಮಕ್ಕಳ ಶಾಲಾ ಕಾಲೇಜು ಶುಲ್ಕವನ್ನು ಸ್ವಲ್ಪವಾದರೂ ಪಾವತಿಸಿದರೆ, ಆಡಳಿತ ಮಂಡಳಿ ಶಿಕ್ಷಕರ ವೇತನ ನೀಡಲು ಸಾಧ್ಯವಾಗಬಹುದು.

- ಅಭಿಷೇಕ್ ಉಳ್ಳಾಲ್, ಮಾಜಿ ಸದಸ್ಯರು, ವುಂಗಳೂರು ವಿವಿ ಶೈಕ್ಷಣಿಕ ಪರಿಷತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News