ಶರತ್ ಮಡಿವಾಳ ಕೊಲೆ ಆರೋಪಿಯ ಕೊಲೆ ಯತ್ನ ಪ್ರಕರಣ : ಮೂವರು ಸೆರೆ
ಬಂಟ್ವಾಳ, ಸೆ. 4: ಶರತ್ ಮಡಿವಾಳ ಹತ್ಯೆ ಪ್ರಕರಣದ ಆರೋಪಿಯ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿರುವ ಬಂಟ್ವಾಳ ನಗರ ಠಾಣೆ ಪೊಲೀಸರು ಕಾರು, ಬೈಕ್, ಮಾರಕ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ.
ಯತಿನ್ ಕಲ್ಲಡ್ಕ, ರಾಜು ಕುಂಪನಮಜಲು ಮತ್ತು ಮನೀಶ್ ಕೋಡಿಕೆರೆ ಬಂಧಿತ ಆರೋಪಿಗಳು. ಉಳಿದಂತೆ ಕಲ್ಲಡ್ಕ, ಸಜೀಪ ಮತ್ತು ಕೋಡಿಕೆರೆಯ ಆರು ಮಂದಿ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳು ಆರೆಸ್ಸೆಸ್ ಕಾರ್ಯಕರ್ತ, ಬಿ.ಸಿ.ರೋಡ್ ಉದಯ ಲಾಂಡ್ರಿ ಮಾಲಕ ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿ ಸಜೀಪ ಮುನ್ನೂರು ಗ್ರಾಮದ ಆಲಾಡಿ ನಿವಾಸಿ ಶರೀಫ್ ಎಂಬಾತನನ್ನು ಆ. 7ರಂದು ಅಪಘಾತ ನಡೆಸಿ ಕೊಲೆಗೆ ಯತ್ನಿಸಿದ್ದರು ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳ ಬಗ್ಗೆ ಮಾಹಿತಿ ಕಳೆ ಹಾಕಿ ಮೂವರನ್ನು ಬಂಧಿಸಿದ್ದಾರೆ. ಎರಡು ಬೈಕ್, ಒಂದು ಕಾರಿನಲ್ಲಿ ಬಂದ ಆರೋಪಿಗಳು ಶರೀಫ್ ಮನೆಯಿಂದ ಮಧ್ಯಾಹ್ನ ಮಸೀದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಗೆ ಕಾರಿನಲ್ಲಿ ಢಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ್ದರು. ಅಪಾಯದ ಅರಿವಾದ ಶರೀಫ್ ಓಡಿ ಆರೋಪಿಗಳಿಂದ ತಪ್ಪಿಸಿಕೊಂಡಿದ್ದ ಎಂದು ವರದಿಯಾಗಿತ್ತು.
ಶರೀಫ್ ಕೊಲೆ ಯತ್ನ ವಿಫಲಗೊಂಡ ಹಿನ್ನೆಲೆಯಲ್ಲಿ ಇದೇ ಆರೋಪಿಗಳ ತಂಡ ಸಂಜೆಯ ವೇಳೆ ಸುರತ್ಕಲ್ ನ ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿಯೋರ್ವನನ್ನು ಕಿನ್ನಿಗೋಳಿಯ ಉಳ್ಳಂಜೆ ಬಳಿ ಕೊಲೆಗೆ ಯತ್ನ ನಡೆಸಿದ್ದರು ಎಂಬ ಮಾಹಿತಿ ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.
ಬಂಧಿತ ಆರೋಪಿಗಳು ಸಂಘ ಪರಿವಾರದ ಕಾರ್ಯಕರ್ತರಾಗಿದ್ದು, ಮನೀಶ್ ಮತ್ತು ರಾಜು 2017ರಲ್ಲಿ ಕಂಕನಾಡಿಯಲ್ಲಿ ನಡೆದ ಪ್ರತಾಪ್ ಪೂಜಾರಿ ಕೊಲೆ, ಕೋಮು ಗಲಭೆಗೆ ಪ್ರಚೋಧನೆ ಸಹಿತ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳ ಆರೋಪಿಗಳಾಗಿದ್ಧಾರೆ. ಬಂಧಿತ ಆರೋಪಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜ ಮತ್ತು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಎಸ್ಸೈ ಅವಿನಾಶ್ ಅವರ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.