ಕೋವಿಡ್: ಆಕ್ಸಿಜನ್ ಬೆಡ್, ವೆಂಟಿಲೇಟರ್ ಭರ್ತಿಯಾದರೂ ತೊಂದರೆಯಿಲ್ಲ: ಡಿಎಚ್ಒ
ಮಂಗಳೂರು, ಸೆ. 6: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಹಾಗೂ ಹೊರಜಿಲ್ಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿರುವುದರಿಂದ ಆಕ್ಸಿಜನ್, ಐಸಿಯು ಬೆಡ್, ವೆಂಟಿಲೇಟರ್ಗಳು ಭರ್ತಿಯಾಗಿವೆ. ಆದಾಗ್ಯೂ, ದೊಡ್ಡ ಮಟ್ಟದ ತೊಂದರೆಯೇನೂ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯಾರಿ ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆಯ ಜನರಲ್ ಬೆಡ್ಗಳು ಖಾಲಿಯೇ ಇವೆ. ಎಲ್ಲ ಸೋಂಕಿತರಿಗೂ ಆಕ್ಸಿಜನ್, ಐಸಿಯು ಬೆಡ್, ವೆಂಟಿಲೇಟರ್ಗಳಲ್ಲೇ ಚಿಕಿತ್ಸೆ ನೀಡಬೇಕು ಎನ್ನುವುದು ಇಲ್ಲ. ಅತಿ ಗಂಭೀರ ಪರಿಸ್ಥಿತಿಯಲ್ಲಿ ಇರುವವರಿಗೆ ಮಾತ್ರ ವೆಂಟಿಲೇಟರ್ಗಳಲ್ಲಿ ಬೆಡ್ ಸಮಸ್ಯೆ ತಲೆದೋರಲಿದೆ. ಗಂಭೀರ ಪ್ರಕರಣದ ರೋಗಿಗಳು ಗುಣಮುಖರಾಗುತ್ತಿರುವುದು ಹೆಚ್ಚುತ್ತಿದೆ. ಗುಣಮುಖರಾದವರ ಬೆಡ್ ಖಾಲಿಯಾಗುತ್ತಿವೆ. ಆ ಬೆಡ್ಗಳಲ್ಲಿ ಗಂಭೀರ ಪ್ರಕರಣದ ಹೊರ ರೋಗಿಗಳನ್ನು ದಾಖಲಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿನ ಸೋಂಕಿತರಿಗೆ ಸಾಕಷ್ಟು ಬೆಡ್ಗಳಿವೆಯಾದರೂ ಹೊರಜಿಲ್ಲೆಯ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಉಡುಪಿ, ಶಿವಮೊಗ್ಗ, ಉತ್ತರಕನ್ನಡ, ದಾವಣಗೆರೆ, ಕೊಡಗು ಸಹಿತ 10ಕ್ಕೂ ಹೆಚ್ಚು ಜಿಲ್ಲೆಗಳಿಂದ ರೋಗಿಗಳು ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗುತ್ತಿ ದ್ದಾರೆ. ಚಿಕಿತ್ಸೆ ನೀಡದೆಯೇ ಅವರನ್ನು ವಾಪಸ್ ಕಳುಹಿಸಲು ಮನಸ್ಸಿಲ್ಲ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.