ಪರ್ಕಳ: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ವಿದ್ಯುತ್ ಕಂಬ: ಸಹಸವಾರನಿಗೆ ಗಂಭೀರ ಗಾಯ

Update: 2020-09-07 10:47 GMT

ಮಣಿಪಾಲ, ಸೆ.7: ಚಲಿಸುತ್ತಿದ್ದ ಬೈಕ್ ಮೇಲೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬವೊಂದು ಬಿದ್ದು ಬೈಕ್ ಸಹಸವಾರ ತೀವ್ರವಾಗಿ ಗಾಯಗೊಂಡ ಘಟನೆ ಪರ್ಕಳ ಸಮೀಪದ ಕೆಳಪರ್ಕಳದ ಶ್ರೀಕೃಷ್ಣ ಕಲ್ಯಾಣ ಮಂಟಪದ ಎದುರು ರಾಷ್ಟ್ರೀಯ ಹೆದ್ದಾರಿ169ಎಯಲ್ಲಿ  ನಡೆದಿದೆ.

ಗಾಯಗೊಂಡವರನ್ನು ಹಿರಿಯಡ್ಕ ಅಂಜಾರಿನ ಸದಾಶಿವ ಶೇರಿಗಾರ್(58) ಎಂದು ಗುರುತಿಸಲಾಗಿದೆ. ಇವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಕ್ ಸವಾರ ಹರೀಶ್ ಎಂಬವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಕಂಪೌಂಡ್ ಒಳಗಿದ್ದ ತಂಗಿನ ಮರವೊಂದು ಗಾಳಿಯಿಂದಾಗಿ ವಿದ್ಯುತ್ ತಂತಿಯ ಮೇಲೆ ಬಿತ್ತೆನ್ನಲಾಗಿದೆ. ಇದರಿಂದಾಗಿ ಅದೇ ಕಂಪೌಂಡ್ ಒಳಗಿದ್ದ ವಿದ್ಯುತ್ ಕಂಬದ ಜೊತೆ ರಸ್ತೆ ಬದಿ ಇದ್ದ ಈ ವಿದ್ಯುತ್ ಕಂಬಗಳು ಕೂಡ ತಂತಿ ಸಮೇತವಾಗಿ ಬಿದ್ದವು. ಇದೇ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಮೇಲೆ ವಿದ್ಯುತ್ ಕಂಬ ಬಿದ್ದ ಪರಿಣಾಮ ಹಿಂಬದಿ ಸವಾರ ಸದಾಶಿವ ಶೇರಿಗಾರ್ ಗಾಯಗೊಂಡರು ಎಂದು ಮಣಿಪಾಲ ಪೊಲೀಸರು ತಿಳಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಮಣಿಪಾಲ ಪೊಲೀಸರು ಹಾಗೂ ಪರ್ಕಳ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಂಬ ಹಾಗೂ ತಂತಿಗಳನ್ನು ಬೇರ್ಪಡಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News