ಶ್ರೀಕೃಷ್ಣ ಜನ್ಮಾಷ್ಟಮಿಗಾಗಿ ರವಿ ಕಟಪಾಡಿಯಿಂದ ಕೊರೋನಾ ಜಾಗೃತಿ ವೇಷ
ಉಡುಪಿ, ಸೆ.10: ಪ್ರತಿವರ್ಷದಂತೆ ಈ ಬಾರಿಯು ರವಿ ಕಟಪಾಡಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ವಿಶಿಷ್ಟ ರೀತಿಯ ವೇಷ ಧರಿಸಿದ್ದಾರೆ. ಆದರೆ ಕೋವಿಡ್-19 ಭೀತಿಯ ಹಿನ್ನೆಲೆಯಲ್ಲಿ ಇವರು ವೇಷದ ಮೂಲಕ ಜನರಿಗೆ ಕೊರೋನಾ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಕಳೆದ 10ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿಗೆ ವಿಶಿಷ್ಟ ರೀತಿಯ ವೇಷಗಳನ್ನು ಧರಿಸುವ ರವಿ ಕಟಪಾಡಿ, ಕಳೆದ ಆರು ವರ್ಷಗಳಿಂದ ವೇಷದ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೀಡುತ್ತಿದ್ದಾರೆ. ಆದರೆ ಈ ವರ್ಷ ಅಷ್ಟಮಿ ವೇಷಕ್ಕೆ ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಇವರು ಹಣ ಸಂಗ್ರಹವನ್ನು ಕೈಬಿಟ್ಟು ಕೇವಲ ಕೊರೋನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
‘ಈ ಬಾರಿ ಹಾಲಿವುಡ್ ಸಿನೆಮಾದ ಪಾತ್ರವೊಂದರ ವೇಷವನ್ನು ಧರಿಸಿದ್ದು, ಕಟಪಾಡಿ, ಮಟ್ಟು, ಪಡುಕೆರೆ, ಉದ್ಯಾವರ, ಉಡುಪಿ, ಮಲ್ಪೆ ಪ್ರದೇಶಗಳಿಗೆ ತೆರಳಿ ಜನರಲ್ಲಿ ಕೊರೋನ ವೈರಸ್ ಬಗ್ಗೆ ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದೇನೆ. ನಾಳೆ ವಿಟ್ಲ ಪಿಂಡಿಯಂದು ಮಧ್ಯಾಹ್ನ ರಥಬೀದಿಯಲ್ಲಿ ಪ್ರದರ್ಶನ ಮಾಡು ತ್ತಿದ್ದೇನೆ’ ಎಂದು ರವಿ ಕಟಪಾಡಿ ತಿಳಿಸಿದ್ದಾರೆ.
ಕೊರೋನದಿಂದಾಗಿ ಈ ವರ್ಷ ಮಕ್ಕಳಿಗೆ ಯಾವುದರಲ್ಲೂ ಮನರಂಜನೆ ದೊರೆಯುತ್ತಿಲ್ಲ. ಹೀಗೆ ಸಾರ್ಜನಿಕರಿಗೆ ಜಾಗೃತಿ ಹಾಗೂ ಮಕ್ಕಳಿಗೆ ಮನರಂಜನೆ ನೀಡುವ ಉದ್ದೇಶದೊಂದಿಗೆ ಈ ಬಾರಿ ವೇಷ ಧರಿಸಿದ್ದೇನೆ. ಕಲಾವಿದ ಅಜಯ್ ಪಿತ್ರೋಡಿ ನೇತೃತ್ವದಲ್ಲಿ ಧನರಾಜ್, ಧರೇಶ್, ಅಕ್ಷಯ್ ವೇಷವನ್ನು ತಯಾರಿ ಸಿದ್ದಾರೆ. ಇದಕ್ಕೆ ಸುಮಾರು 40ಸಾವಿರ ರೂ. ಖರ್ಚು ತಗಲಿದೆ. ಇದಕ್ಕೆ ಕೆಲವರು ಪ್ರಾಯೋಜಕತ್ವ ನೀಡಲಿ ದ್ದಾರೆ’ ಎಂದು ಅವರು ತಿಳಿಸಿದ್ದಾರೆ.