ದೇರಳಕಟ್ಟೆ: ಮನೆಗೆ ಉರುಳಿದ ಬಂಡೆ, ಅಪಾಯದಿಂದ ಮಗು ಪಾರು
Update: 2020-09-11 17:12 GMT
ಕೊಣಾಜೆ: ಭಾರೀ ಮಳೆಗೆ ಜಿಲ್ಲೆಯ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿದ್ದು, ದೇರಳಕಟ್ಟೆ ಸಮೀಪ ನಿತ್ಯಾನಂದನಗರ ಕರುಣಾಕರ ಶೆಟ್ಟಿ ಎಂಬವರ ಮನೆಗೆ ಬೃಹತ್ ಬಂಡೆಕಲ್ಲು ಉರುಳಿ ಬಿದ್ದು ಮನೆಗೆ ಹಾನಿಯಾಗಿದೆ.
ಮನೆ ಒಳಗಡೆ ಮಗು ಆಟವಾಡುತ್ತಿದ್ದು, ಘಟನೆ ವೇಳೆ ಪವಾಡ ಸದೃಶವಾಗಿ ಪಾರಾಗಿದೆ. ಬಂಡೆ ಮನೆ ಮೇಲೆ ಉರುಳಿದ ಘಟನೆಯಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಇನ್ನಷ್ಟು ಗುಡ್ಡೆಯಲ್ಲಿ ಜರಿತ ಉಂಟಾಗಿದ್ದು, ಯಾವ ಸಂದರ್ಭದಲ್ಲೂ ಉರುಳಿ ಮನೆಗೆ ಬೀಳುವ ಸಾಧ್ಯತೆ ಹೆಚ್ಚಿರುವುದರಿಂದ ಮನೆ ಮಂದಿ ಆತಂಕದಲ್ಲಿದ್ದಾರೆ.
ರಸ್ತೆ ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ಮಣ್ಣು ಅಗೆದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎಂದು ಮನೆಮಂದಿ ಆರೋಪಿಸಿದ್ದಾರೆ.