ತಿಂಗಳಾಡಿ : ಅಂಗಡಿಯಿಂದ 1 ಲಕ್ಷ ರೂ. ಕಳವು

Update: 2020-09-15 11:54 GMT

ಪುತ್ತೂರು: ಅಂಗಡಿಯೊಂದರಿಂದ ಹಗಲು ವೇಳೆಯಲ್ಲಿಯೇ 1 ಲಕ್ಷ ರೂ.  ಕಳವು ನಡೆಸಿದ ಘಟನೆ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿ ಸೋಮವಾರ ನಡೆದಿದ್ದು, ಈ ಬಗ್ಗೆ ಸಂಪ್ಯ ಠಾಣೆಗೆ ದೂರು ದಾಖಲಿಸಲಾಗಿದೆ.

ತಿಂಗಳಾಡಿಯ ಮಾತೃಶ್ರೀ ಕಾಂಪ್ಲೆಕ್ಸ್ ನಲ್ಲಿರುವ ಅಬ್ದುಲ್ಲ ಎಂಬವರ ಪುತ್ರ ಸಿಯಾಬುದ್ದೀನ್ ಎಂಬವರ ಅಂಗಡಿಯಿಂದ ಡ್ರಾವರ್‍ನಲ್ಲಿರಿಸಿದ್ದ ಹಣವನ್ನು ಕಳವು ನಡೆಸಲಾಗಿದೆ.

ರಬ್ಬರ್, ತೆಂಗಿನಕಾಯಿ ಮತ್ತು ಬಾಳೆಗೊನೆ ವ್ಯಾಪಾರ ನಡೆಸುತ್ತಿದ್ದ ಸಿಯಾಬುದ್ದೀನ್ ಅವರು 1.40 ಲಕ್ಷ ರೂ. ನಗದಿನೊಂದಿಗೆ ಅಂಗಡಿಗೆ ಆಗಮಿಸಿ ವ್ಯಾಪಾರ ನಡೆಸಿದ್ದರು. ಈ ಪೈಕಿ ಒಂದು ಲಕ್ಷ ರೂ. ಪ್ರತ್ಯೇಕವಾಗಿ ಸಣ್ಣ ಬ್ಯಾಗ್‍ನಲ್ಲಿರಿಸಿ ಡ್ರಾವರ್ ಒಳಗಡೆ ಇರಿಸಿದ್ದರು. ಅಪರಾಹ್ನದ ವೇಳೆ ಈ ಹಣವನ್ನು ಕಳವು ನಡೆಸಿ ಪರಾರಿಯಾಗಿದ್ದರು. ಬೈಕ್‍ನಲ್ಲಿ ಆಗಮಿಸಿದ ವ್ಯಕ್ತಿಯೊಬ್ಬ ಕಳವು ನಡೆಸಿರುವುದಾಗಿ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಸಿಯಾಬುದ್ದೀನ್ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News