ಕೊಲ್ಲೂರು ದೇವಳದಿಂದ ಕೊಡಚಾದ್ರಿಗೆ ರೋಪ್ ವೇ ಸರ್ವೆ ಕಾರ್ಯಕ್ಕೆ ಚಾಲನೆ

Update: 2020-09-15 14:58 GMT

ಕುಂದಾಪುರ, ಸೆ.15: ಕೊಲ್ಲೂರು ಶ್ರೀಮೂಕಾಂಬಿಕೆ ಕ್ಷೇತ್ರದಿಂದ ಪ್ರವಾಸಿ ಗರು ಕೊಡಚಾದ್ರಿ ಬೆಟ್ಟಕ್ಕೆ ತೆರಳಲು ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೋಪ್ ವೇ ಕಾಮಗಾರಿಯ ವಿಸ್ತೃತ ಯೋಜನಾ ವರದಿಯ ಸರ್ವೇ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.

ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಿದ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ಯುರೋಪ್ ಮಾದರಿಯಲ್ಲಿ ನಿರ್ಮಿಸಲಾಗುವ ದೇಶದಲ್ಲಿಯೇ ಅತೀ ಉದ್ದದ ರೋಪ್ ವೇ ಇದಾಗಿದೆ. ಇ.ಪಿ.ಐ.ಎಲ್. ಕಂಪೆನಿ ಈ ಸರ್ವೇ ಕಾರ್ಯ ನಡೆಸಲಿದೆ ಎಂದು ತಿಳಿಸಿದರು.

ಕೊಲ್ಲೂರು- ಕೊಡಚಾದ್ರಿ ರೋಪ್ ವೇ ಬಹುವರ್ಷಗಳ ಕನಸಾಗಿದ್ದು ಇದರಿಂದ ಪ್ರವಾಸೋದ್ಯಮ ಇನ್ನಷ್ಟು ವೃದ್ಧಿಸುತ್ತದೆ. ಯಾವುದೇ ಪರಿಸರ, ಅರಣ್ಯ ಹಾನಿಯಾಗದಂತೆ ವೈಜ್ಞಾನಿಕ ರೀತಿಯ ಕಾಮಗಾರಿ ನಡೆಸಲಾಗುತ್ತದೆ. ರೋಪ್ ವೇ ನಿರ್ಮಾಣದಿಂದ ಕೊಲ್ಲೂರು ಭಾಗದ ಬಾಡಿಗೆ ಜೀಪು ಚಾಲಕರಿಗೆ ಸಮಸ್ಯೆಯಾಗುವುದಿಲ್ಲ. ಬದಲಾಗಿ ರೋಪ್ ವೇ ಆರಂಭವು ನಿರ್ದಿಷ್ಟ ಪ್ರದೇಶ ದಲ್ಲಿ ಆಗುವುದರಿಂದ ಜೀಪುಗಳ ಅವಶ್ಯಕತೆ ಮುಂದೆಯೂ ಇರಲಿದೆ ಎಂದರು.

ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಕ್ಷೇತ್ರ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಪಂ ಸದಸ್ಯ ಶಂಕರ್ ಪೂಜಾರಿ, ಉದ್ಯಮಿ ವೆಂಕಟೇಶ್ ಕಿಣಿ, ಮುಖಂಡರಾದ ಅತುಲ್ ಕುಮಾರ್ ಶೆಟ್ಟಿ, ಪ್ರಕಾಶ್ ಪೂಜಾರಿ ಜಡ್ಡು, ಸಂತೋಷ್ ಭಟ್, ಚಂದ್ರಯ್ಯ ಆಚಾರ್ ಕಳಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News