​ಸಂಸದ ನಳಿನ್‌ಗೆ ಸಿಪಿಎಂ ಮನವಿ

Update: 2020-09-18 12:21 GMT

ಮಂಗಳೂರು, ಸೆ.18: ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಶುಕ್ರವಾರ ಭೇಟಿಯಾದ ದ.ಕ.ಜಿಲ್ಲಾ ಸಿಪಿಎಂ ನಿಯೋಗವು ನಾಲ್ಕು ಪ್ರಮುಖ ಅಂಶಗಳ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತಲು ಮನವಿ ಸಲ್ಲಿಸಿದೆ.

ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಹಾಗೂ ಬೆಂಬಲ) ಸುಗ್ರೀವಾಜ್ಞೆ 2020, ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಕುರಿತ ರೈತ (ಸಶಕ್ತೀಕರಣ ಮತ್ತು ರಕ್ಷಣೆ) ಒಪ್ಪಂದ ಸುಗ್ರೀವಾಜ್ಞೆ 2020, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ-2020, ವಿದ್ಯುತ್ ಕಾಯ್ದೆ-2020 ಮತ್ತು ದೇಶದ ಕಾರ್ಮಿಕ ವರ್ಗದ ಯಥೇಚ್ಚ ಲೂಟಿ ನಡೆಸಲು ಕೈಗಾರಿಕೆಗಳ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳ ಅನುಕೂಲ ಮಾಡುವ ಪ್ರಮುಖ ಕಾರ್ಮಿಕ ತಿದ್ದುಪಡಿ ಕಾಯ್ದೆಗಳ ಸಹಿತ ಎಲ್ಲ ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆಯುವಂತೆ ಮತ್ತು ಅವುಗಳನ್ನು ಶಾಸನಗಳ ನ್ನಾಗಿಸುವ ಪ್ರಯತ್ನಗಳನ್ನು ತಡೆಯಲು ಕ್ರಮವಹಿಸಬೇಕು.

ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಬೇಕಾಗಿರುವ ಜಿಎಸ್‌ಟಿ ಬಾಕಿ, ಬಜೆಟ್ ಅನುದಾನದ ಬಾಕಿ, ಬರ ಹಾಗೂ ಅತಿವೃಷ್ಟಿ ಪರಿಹಾರ, ಕೋವಿಡ್ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಬೇಕು.

ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಸಂವಿಧಾನಾತ್ಮಕ ಹಕ್ಕುಗಳ ಉಳಿವಿಗಾಗಿ ಶಾಂತಿಯುತ ರಾಜಕೀಯ ಚಳುವಳಿಗಳನ್ನು ಕ್ರಿಮಿನಲ್ ಅಪರಾಧಗಳೆಂದು ಬಿಂಬಿಸುವ ಸಂವಿಧಾನ ವಿರೋಧಿಯಾದ ದುಷ್ಕೃತ್ಯವನ್ನು ತಡೆಯುವಂತೆ ಒತ್ತಾಯಿಸಬೇಕು. ಇಂತಹ ದುರ್ನಡತೆಯ ಆಧಾರದಲ್ಲಿ ಹೂಡಲಾದ ಮೊಕದ್ದಮೆಗಳನ್ನು ಬೇಷರತ್ತಾಗಿ ವಾಪಸ್ ಪಡೆಯಬೇಕು. ಇದರಂತೆ ಸುಳ್ಳು ಮೊಕದ್ದಮೆಯ ಆಧಾರದಲ್ಲಿ ಜೈಲಿಗೆ ತಳ್ಳಲಾದವರನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಬೇಕು.

ಕಳೆದೊಂದು ದಶಕದಿಂದ ಗಂಭೀರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಳೆದ ಏಳೆಂಟು ತಿಂಗಳಿಂದ ಕೋವಿಡ್-19ರ ವೈರಾಣು ಸಾಂಕ್ರಾಮಿಕ ಧಾಳಿಗೆ ಸಿಲುಕಿದೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇದರ ಹಾವಳಿಯನ್ನು ತಡೆಯಲು ಸಾಧ್ಯವಿರುವಾಗ ಭಾರತದಲ್ಲಿ ಅದು ವೇಗವಾಗಿ ವಿಸ್ತರಿಸಲ್ಪಡುತ್ತಿದೆ. ಕರ್ನಾಟಕ ರಾಜ್ಯವು ಈ 2020ರಲ್ಲಿ ಬರ ಹಾಗೂ 2-3 ಬಾರಿ ಅತೀವೃಷ್ಟಿ ಹಾಗೂ ಪ್ರವಾಹಗಳಿಗೆ ತುತ್ತಾಗಿದೆ. ಈ ಎಲ್ಲಾ ಸಂದರ್ಭಗಳಿಂದಲೂ ದೇಶದ ಹಾಗೂ ರಾಜ್ಯದ ಸಾಮಾನ್ಯ ಜನತೆಯ ಹಿತವನ್ನು ರಕ್ಷಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಬದಲಿಗೆ ದೇಶದ ಹಾಗೂ ದೇಶಗಳ ಬಹುರಾಷ್ಟ್ರೀಯ ಸಂಸ್ಥೆಗಳ ವ್ಯಾಪಕವಾದ ಲೂಟಿಗೆ ದೇಶವನ್ನು ತೆರೆಯುತ್ತಿದೆ.

ಇದೀಗ ಜನತೆ ಕೋವಿಡ್ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವಾಗ ಅವರ ಬದುಕಿನ ಮೇಲೆಯೇ ಮಾರಣಾಂತಿಕ ದಾಳಿಗಳನ್ನು ಈ ಅವಧಿಯಲ್ಲಿ ಸುಮಾರು 11 ಸುಗ್ರೀವಾಜ್ಞೆಗಳನ್ನು ಹೊರಡಿಸುವ ಮೂಲಕ ನಡೆಸಿದೆ. ಈ ಸಂಸತ್ ಅಧಿವೇಶನದಲ್ಲಿ ಅವುಗಳನ್ನು ಶಾಸನಗಳನ್ನಾಗಿ ಅಂಗೀಕ ರಿಸವ ಮೂಲಕ ಅದನ್ನು ಖಾತರಿಪಡಿಸುವ ಕ್ರೌರ್ಯವನ್ನು ಮೆರೆಯುತ್ತಿದೆ. ರಾಜ್ಯಗಳಿಗೆ ಸಂವಿಧಾನ ಕೊಡಮಾಡಿದ ಅಧಿಕಾರಗಳನ್ನು ಕೇಂದ್ರ ಸರಕಾರ ಮೊಟಕು ಮಾಡಿ ದೇಶದ ಒಕ್ಕೂಟವಾದಿ ಸ್ವರೂಪಕ್ಕೆ ಧಕ್ಕೆಯನ್ನುಂಟು ಮಾಡುತ್ತಿದೆ.

ಇಂತಹ ಎಲ್ಲಾ ಜನವಿರೋಧಿ ವಿಚಾರಗಳ ಸಂದರ್ಭ ದೇಶದ ಜನತೆ ಪ್ರತಿಭಟನೆಯಲ್ಲಿ ತೊಡಗಿದಾಗ ದೇಶದ ಜನತೆಯ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗೆ ಕ್ರಮವಹಿಸುವ ಬದಲು ಅಧಿಕಾರ ದುರುಪಯೋಗವಾಗಿ ನಾಗರಿಕರನ್ನು ಬೆದರಿಸುವ, ಮೊಕದ್ದಮೆ ಹೂಡುವ, ಜೈಲಿಗೆ ತಳ್ಳುವ ಕಾರ್ಯ ನಡೆದಿದೆ. ಆದುದರಿಂದ ಸಂಸತ್ ಅಧಿವೇಶನದಲ್ಲಿ ಜನತೆಯ ಪರವಾಗಿ ಧ್ವನಿ ಎತ್ತಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಪಕ್ಷದ ನಿಯೋಗದಲ್ಲಿ ಕಾರ್ಯದರ್ಶಿ ವಸಂತ ಆಚಾರಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕೃಷ್ಣ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ವಾಸುದೇವ ಉಚ್ಚಿಲ್‌ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News