ಉಡುಪಿ: ಸೆ.14ರಿಂದ 18ರವರೆಗೆ 845 ಕೊರೋನ ಪಾಸಿಟಿವ್, ಐದು ದಿನಗಳಲ್ಲಿ 9 ಮಂದಿ ಮೃತ್ಯು

Update: 2020-09-18 15:12 GMT

ಉಡುಪಿ, ಸೆ.18: ಜಿಲ್ಲೆಯಲ್ಲಿ ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಕರೆಯಂತೆ ನಾಲ್ಕು ದಿನ ನಡೆದ ಮುಷ್ಕರದ ಬಳಿಕ ಐದನೇ ದಿನವಾದ ಇಂದು ಕೋವಿಡ್-19ಕ್ಕೆ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 845 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಇದೇ ಅವಧಿಯಲ್ಲಿ ಒಟ್ಟು 5633 ಮಂದಿಯ ಗಂಟಲುದ್ರವ ಮಾದರಿ ಫಲಿತಾಂಶ ನೆಗೆಟಿವ್ ಕಂಡುಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಐದು ದಿನಗಳ ಬಳಿಕ ಶುಕ್ರವಾರ ಪ್ರಕಟಗೊಂಡ ಜಿಲ್ಲಾ ಆರೋಗ್ಯ ಇಲಾಖೆಯ ಬುಲೆಟಿನ್‌ನಲ್ಲಿ ಬಂದ 845 ಪಾಸಿಟಿವ್ ಪ್ರಕರಣದೊಂದಿಗೆ ಜಿಲ್ಲೆ ಯಲ್ಲಿ ಇದುವರೆಗೆ ಕೊರೋನ ಸೋಂಕಿತರಾದವರ ಸಂಖ್ಯೆ 14,8838 ಕ್ಕೇರಿದೆ. ಅಲ್ಲದೆ ಕಳೆದ ಐದು ದಿನಗಳಲ್ಲಿ ಒಟ್ಟು 865 ಮಂದಿ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ ಎಂದೂ ಡಾ.ಸೂಡ ತಿಳಿಸಿದರು.

ಈ ಐದು ದಿನಗಳ ಅವಧಿಯಲ್ಲಿ ಉಡುಪಿ ತಾಲೂಕಿನ 578 ಮಂದಿ, ಕುಂದಾಪುರ ತಾಲೂಕಿನ 127 ಹಾಗೂ ಕಾರ್ಕಳ ತಾಲೂಕಿನ 114 ಮಂದಿ ಪಾಸಿಟಿವ್ ಬಂದಿದ್ದು, ಹೊರಜಿಲ್ಲೆಯಿಂದ ಉಡುಪಿಗೆ ಚಿಕಿತ್ಸೆಗೆಂದು ಬಂದ 26 ಮಂದಿಯಲ್ಲೂ ಕೊರೋನ ಪಾಸಿಟಿವ್ ಪತ್ತೆಯಾಗಿದೆ ಎಂದು ತಿಳಿಸಿದರು. ಈ 845 ಮಂದಿಯಲ್ಲಿ ಮಕ್ಕಳು ಸೇರಿದಂತೆ 490 ಮಂದಿ ಪುರುಷರು ಹಾಗೂ 355 ಮಂದಿ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 246 ಪುರುಷರು ಹಾಗೂ 226 ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಡಾ.ಸೂಡ ಹೇಳಿದರು.

ಪಾಸಿಟಿವ್ ದೃಢಗೊಂಡ 845 ಮಂದಿಯಲ್ಲಿ 430 ಮಂದಿ ಪಾಸಿಟಿವ್ ಬಂದವರ ಸಂಪರ್ಕದಿಂದ, 215 ಮಂದಿ ಶೀತಜ್ವರದಿಂದ ಹಾಗೂ 23 ಮಂದಿ ಉಸಿರಾಟದ ತೊಂದರೆಯಿಂದ ಬಳಲುತಿದ್ದು ಸೋಂಕು ಕಾಣಿಸಿಕೊಂಡಿದೆ. ದೇಶೀಯ ಪ್ರವಾಸದಿಂದ ಮರಳಿದ 9 ಹಾಗೂ ಅಂತಾರಾಷ್ಟ್ರೀಯ ಪ್ರವಾಸದಿಂದ ಮರಳಿದ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ 165 ಮಂದಿ ಯ ಸೋಂಕಿನ ಸಂಪರ್ಕ ಇನ್ನೂ ಪತ್ತೆಯಾಗಬೇಕಿದೆ ಎಂದರು.

865 ಮಂದಿ ಗುಣಮುಖ: ಜಿಲ್ಲೆಯಲ್ಲಿ ಐದು ದಿನಗಳಲ್ಲಿ ಒಟ್ಟು 865 ಮಂದಿ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ 149 ಮಂದಿ ಕೋವಿಡ್ ಆಸ್ಪತ್ರೆಗಳಿಂದ, 716 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದು ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 13,041ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 1703 ಮಂದಿ ಇನ್ನೂ ಚಿಕಿತ್ಸೆಯಲ್ಲಿದ್ದಾರೆ. ಇವರಲ್ಲಿ 879 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ 824 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ಹೇಳಿದರು.

6382 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಕಳೆದೈದು ದಿನಗಳಲ್ಲಿ ಒಟ್ಟು 6382 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 5018 ಮಂದಿ, ಕೋವಿಡ್ ಸಂಪರ್ಕಿತರು 608 ಮಂದಿ ಇದ್ದರೆ, ಉಸಿರಾಟ ತೊಂದರೆಯ 26, ಶೀತಜ್ವರದಿಂದ ಬಳಲುವ 239 ಮಂದಿಯ ಸ್ಯಾಂಪಲ್‌ಗಳು ಸೇರಿವೆ. ಅಲ್ಲದೇ ಹಾಟ್‌ಸ್ಪಾಟ್‌ಗಳಿಂದ ಬಂದ 491 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗೆ ಪಡೆಯಲಾಗಿದೆ ಎಂದು ಡಾ.ಸೂಡ ತಿಳಿಸಿದರು.

ಇಂದು ಪರೀಕ್ಷೆಗಾಗಿ ಪಡೆದ ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 92,474ಕ್ಕೇರಿದೆ. ಇವುಗಳಲ್ಲಿ ಈವರೆಗೆ 77,382 ನೆಗೆಟಿವ್, 14,883 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 139 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಒಟ್ಟು 209 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೆೀಕಿದೆ ಎಂದು ಡಾ.ಸೂಡ ವಿವರಿಸಿದರು.

ಐದು ದಿನಗಳಲ್ಲಿ ಒಟ್ಟು 9 ಮೃತ್ಯು

ದೈನಂದಿನ ವರದಿ ಪ್ರಕಟಗೊಳ್ಳದ ಕಳೆದ ಐದು ದಿನಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 9 ಮಂದಿ ಕೋವಿಡ್-19ಗೆ ಬಲಿಯಾಗಿದ್ದಾರೆ. ಈ ಮೂಲಕ ಕೊರೋನಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 139ಕ್ಕೇರಿದೆ ಎಂದು ಇಲಾಖೆಯ ಬುಲೆಟಿನ್ ತಿಳಿಸಿದೆ.

ಕಾರ್ಕಳದ 58 ಮತ್ತು 93 ವರ್ಷ ಪ್ರಾಯದ ಪುರುಷರು, 70 ವರ್ಷ ಪ್ರಾಯದ ಮಹಿಳೆ, ಕುಂದಾಪುರ ತಾಲೂಕಿನ 52 ಮತ್ತು 42 ವರ್ಷ ಪ್ರಾಯದ ಪುರುಷರು ಹಾಗೂ ಉಡುಪಿ ತಾಲೂಕಿನ 59 ವರ್ಷ ಪ್ರಾಯದ ಪುರುಷ ಅಲ್ಲದೇ 66, 85 ಮತ್ತು 20 ವರ್ಷ ಪ್ರಾಯದ ಮಹಿಳೆಯರು ಮೃತರಲ್ಲಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News