ಖಾಸಗಿ ಆಸ್ಪತ್ರೆಗಳು ಸರಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ದರ ಲೂಟಿ ಮಾಡುತ್ತಿವೆ : ಮುನೀರ್ ಕಾಟಿಪಳ್ಳ ಅರೋಪ

Update: 2020-09-18 16:50 GMT

ಮಂಗಳೂರು : ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸದೆ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸದ ಸರಕಾರಗಳು ಕೊರೋನ ಸಂಕಷ್ಟದ ಸಮಯದಲ್ಲಿ ಬೆತ್ತಲಾಗಿದೆ. ಖಾಸಗಿ ಆಸ್ಪತ್ರೆಗಳು ಬಡವರ ಪಾಲಿಗೆ ಮರಣ ಶಾಸನವಾಗಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕಾವೂರಿನಲ್ಲಿ ಡಿವೈಎಫ್‌ಐ ಕಾವೂರು ವಲಯ ಸಮಿತಿ ವತಿಯಿಂದ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಖಾಸಗಿ ಆಸ್ಪತ್ರೆಗಳು ಸರಕಾರ ನಿಗದಿಪಡಿಸಿದ ದರಕ್ಕಿಂತಲೂ ಹೆಚ್ಚಿನ ದರ ಲೂಟಿ ಮಾಡುತ್ತಿದ್ದಾರೆ. ದರ ಪಟ್ಟಿ ಡಿವೈಎಫ್ಐ ಪ್ರಾರಂಭದಿಂದಲೂ ವಿರೋಧಿಸುತ್ತಾ ಬಂದಿದೆ. ಕಳೆದ ಹತ್ತು ವರ್ಷಗಳಿಂದ ಖಾಸಗಿ ಆಸ್ಪತ್ರೆ ನಿಯಂತ್ರಿಸಿ ಸರಕಾರಿ ಆರೋಗ್ಯ ವ್ಯವಸ್ಥೆ ಬಲಪಡಿಸಿ ಎಂಬ ಹೋರಾಟ ನಡೆಸುತ್ತಾ ಬಂದಿದ್ದರೂ ರಾಜಕಾರಣಿಗಳ ಖಾಸಗಿ ಪರ ನೀತಿಗಳಿಂದಾಗಿ ಖಾಸಗಿ ಆಸ್ಪತ್ರೆಗಳ ಏಕಸ್ವಾಮ್ಯ ನಡೆಯುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ  3 ಲಕ್ಷದಿಂದ 30 ಲಕ್ಷದವರೆಗೆ ಆಸ್ಪತ್ರೆ ಬಿಲ್‌ಗಳು‌ ಹರಿದಾಡುತ್ತಿವೆ. ಇಷ್ಟು ಮೊತ್ತ ಪಾವತಿಸಿದರೂ ಜೀವ ಉಳಿಸಲಾಗದ ಖಾಸಗಿ ಆಸ್ಪತ್ರೆಗಳು ಹಣಕ್ಕಾಗಿ ಹೆಣ ಕೊಡದೆ ಇರುವ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಿದೆ ಎಂದರು.

ಸರಕಾರಿ ಆರೋಗ್ಯ ವ್ಯವಸ್ಥೆ ಬಲಪಡಿಸಬೇಕು ಇದಕ್ಕಾಗಿ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಏಳು ಖಾಸಗಿ ಮೆಡಿಕಲ್ ಕಾಲೇಜುಗಳಿವೆ ಆದರೆ ವೆನ್‌ಲಾಕ್ ಆಸ್ಪತ್ರೆಗೆ ಒಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರಕಾರಕ್ಕೆ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು. ಜಿಲ್ಲೆಯ ಜನಪ್ರತಿನಿಧಿಗಳು ಆಧಾರ್ ತೋರಿಸಿದರೆ ಉಚಿತ ಚಿಕಿತ್ಸೆ ಎಂದು ಹೇಳುತ್ತಿ ದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರ ಈ ಮಾತಿಗೆ ಬೆಲೆ ಇಲ್ಲದಂತಾಗಿದೆ. ಆದರೂ ಖಾಸಗಿ ಆಸ್ಪತ್ರೆಗಳ‌ ಲೂಟಿಯ ವಿರುದ್ಧ ಮಾತನಾಡದೆ ಜಿಲ್ಲೆಯ ಜನಪ್ರತಿನಿದಿಗಳು , ಬಿಜೆಪಿ ಖಾಸಗಿ ಲಾಬಿಗೆ ಮಣಿದಿದೆ ಎಂದು ಆರೋಪಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಪಂಜಿಮೊಗರು ವಾರ್ಡ್ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿ ಕೊರೋನ ಸಂಕಷ್ಟದಲ್ಲಿ ಜನಸಾಮಾನ್ಯರ ಬದುಕು‌ ದುಸ್ಥರವಾಗುತ್ತಿದೆ. ಬಿಜೆಪಿ ಸರಕಾರ ಇದನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಜಾತಿ ಧರ್ಮದ ವಿಚಾರದಲ್ಲಿ ಬೀದಿಗೆ ಇಳಿಯುವವರು ಕನಿಷ್ಟ ಹತ್ತು ನಿಮಿಷ ಖಾಸಗಿ ಆಸ್ಪತ್ರೆಗಳ ವಿರುದ್ಧ ಮಾತನಾಡುತ್ತಿಲ್ಲ.  ಜನಸಾಮಾನ್ಯರ ಗೋಳು ಕೇಳುವವರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯ ನೇತೃತ್ವವನ್ನು ಡಿವೈಎಫ್ಐ ಮುಖಂಡರಾದ ಶ್ರೀನಾಥ್, ಪ್ರವೀಣ್, ಸುನಂದ , ಸೌಮ್ಯ, ಆಶಾ, ಪ್ರಮೀಳಾ, ಬಶೀರ್, ನೌಶಾದ್, ಖಲೀಲ್, ಚರಣ್ ವಹಿಸಿದ್ದರು. ಸಂತೋಷ್ ಸ್ವಾಗತಿಸಿ, ನವೀನ್ ಕೊಂಚಾಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News