ಪುತ್ತೂರು: ಜ್ಯೂಸ್‌ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ನೀಡಿದ ಮಹಿಳೆ, ಬಾಲಕಿ ಮೃತ್ಯು

Update: 2020-09-20 10:32 GMT

ಪುತ್ತೂರು: ಮಹಿಳೆಯೊಬ್ಬರು ಜ್ಯೂಸ್‌ನಲ್ಲಿ ವಿಷ ಬೆರೆಸಿ ತನ್ನ ಮಕ್ಕಳಿಗೆ ಕುಡಿಸಿ ಬಳಿಕ ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾದ ಘಟನೆ ಇಲ್ಲಿನ ನಿಡ್ಪಳ್ಳಿ ಎಂಬಲ್ಲಿ ನಡೆದಿದ್ದು, 8 ವರ್ಷದ ಪುತ್ರಿ ಮೃತಪಟ್ಟ ಬಗ್ಗೆ  ವರದಿಯಾಗಿದೆ.

ಸೆ.16ರಂದು ಘಟನೆ ನಡೆದಿದೆ ಎನ್ನಲಾಗಿದ್ದು, ಪಡುವನ್ನೂರು ಗ್ರಾಮದ ಸಜಂಕಾಡಿ ನಿವಾಸಿ ರಘುನಾಥ ಎಂಬಾತನ ಪತ್ನಿ ದಿವ್ಯಶ್ರೀ (29) ತನ್ನ ಇಬ್ಬರು ಮಕ್ಕಳಾದ ಅಜಯ್ (10) ಮತ್ತು ಅನ್ವಿತಾ (8) ಅವರಿಗೆ ಜ್ಯೂಸ್‌ನಲ್ಲಿ ವಿಷ ಬೆರೆಸಿ ನೀಡಿ ಬಳಿಕ ತಾನೂ ಸೇವಿಸಿದ್ದಾರೆ ಎನ್ನಲಾಗಿದೆ.

ರಘುನಾಥನಿಗೆ ಅನ್ಯ ಸ್ತ್ರೀಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಿದ್ದ ದಿವ್ಯಶ್ರೀ, ಕೊರೋನ ಲಾಕ್‌ಡೌನ್ ಆದ ಮಾರ್ಚ್ ತಿಂಗಳಿನಿಂದ ತನ್ನ ಮಕ್ಕಳಾದ ಅಜಯ್ ಮತ್ತು ಅನ್ವಿತಾ ಅವರೊಂದಿಗೆ ಸಜಂಕಾಡಿ ಮನೆ ತೊರೆದು ಬಂದು ತನ್ನ ಸಂಬಂಧಿ ನಿಡ್ಪಳ್ಳಿ ಗ್ರಾಮದ ನಿವಾಸಿ ತುಂಗ ಎಂಬವರ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು ಎನ್ನಲಾಗಿದೆ. ಈ ನಡುವೆ ಮಾನಸಿಕವಾಗಿ ನೊಂದ ದಿವ್ಯಶ್ರೀ ಸೆ.16ರಂದು ಜ್ಯೂಸ್‌ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ನೀಡಿ ಬಳಿಕ ತಾನೂ ಕುಡಿದು ನಂತರ ಮಂಗಳೂರಿನ ತನ್ನ ಸಂಬಂಧಿ ಮನೆಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಸೆ.18ರಂದು ಬಾಲಕಿ ವಾಂತಿ ಮಾಡಿ ಅಸ್ವಸ್ಥಗೊಂಡ ವೇಳೆ ಮಂಗಳೂರು ಆಸ್ಪತ್ರೆಗೆ ಅವರನ್ನು ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಸೆ. 19ರಂದು ತಡ ರಾತ್ರಿ ವೇಳೆ ಬಾಲಕಿ ಅನ್ವಿತಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ದಿವ್ಯಶ್ರೀ ಹಾಗು ಪತ್ನಿಗೆ ಕಿರುಕುಳ ನೀಡಿದ ಆರೋಪದಲ್ಲಿ ರಘನಾಥ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News