ಉಡುಪಿ: ಎನ್ಡಿಆರ್ಎಫ್ನ 32 ಮಂದಿಯಿಂದ ಪರಿಹಾರ ಕಾರ್ಯಾಚರಣೆ
ಉಡುಪಿ, ಸೆ.20: ಇಂದು ಬೆಳಗ್ಗೆ ಜಿಲ್ಲೆಗೆ ಮೈಸೂರಿನಿಂದ ಬಂದ 22 ಹಾಗೂ ಮಂಗಳೂರಿನಿಂದ ಬಂದ 30 ಜನರ ಎನ್ಡಿಆರ್ಎಫ್ ತಂಡ ಸ್ಥಳೀಯರೊಂದಿಗೆ ಸೇರಿ ನೆರೆ ಪೀಡಿತ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿತು. ಇವರೊಂದಿಗೆ ಜಿಲ್ಲೆಯ ಅಗ್ನಿಶಾಮಕ ಇಲಾಖೆ, ಜಿಲ್ಲೆಯ ವಿವಿಧ ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈಜೋಡಿಸಿದರು.
ಜಿಲ್ಲಾಡಳಿತ ಸಂಜೆ ಬಿಡುಗಡೆಗೊಳಿಸಿದ ಅಂಕಿಅಂಶಗಳಂತೆ ಜಿಲ್ಲೆಯ ಉಡುಪಿ(25), ಕಾರ್ಕಳ(4), ಬ್ರಹ್ಮಾವರ(18) ಹಾಗೂ ಕಾಪು (30) ತಾಲೂಕುಗಳ ಒಟ್ಟು 77 ಗ್ರಾಮಗಳಲ್ಲಿ ನೆರೆ ಕಾಣಿಸಿಕೊಂಡಿದ್ದು, ಇಲ್ಲಿನ ಒಟ್ಟು 785 ಕುಟುಂಬಗಳು ಪ್ರವಾಹದಿಂದ ಸಂತ್ರಸ್ಥರಾಗಿದ್ದವು. ಇಲ್ಲಿನ ಒಟ್ಟು 2874 ಮಂದಿಯನ್ನು ರಕ್ಷಿಸಲಾಗಿತ್ತು.
ಇವರಿಗಾಗಿ ತೆರೆದ 31 ಶಿಬಿರಗಳಲ್ಲಿ ಒಟ್ಟು 1201ಮಂದಿಗೆ (638 ಪುರುಷರು, 563 ಮಹಿಳೆಯರು) ಆಶ್ರಯ ನೀಡಲಾಗಿತ್ತು. ಇಂದಿನ ಮಳೆ- ಗಾಳಿ- ನೆರೆಯಿಂದ ಜಿಲ್ಲೆಯ ಒಟ್ಟು 1107 ಮನೆಗಳಿಗೆ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.