ಶಿಕ್ಷಣ ಕ್ಷೇತ್ರದ ಲೋಪದಿಂದ ಜನರ ನಡುವೆ ಕಂದಕ: ಪ್ರೊ.ಚಿನ್ನಪ್ಪಗೌಡ

Update: 2020-09-21 15:36 GMT

ಮಂಗಳೂರು, ಸೆ.21: ಮಾನವ ಸಂಪನ್ಮೂಲದ ಸದ್ವಿನಿಯೋಗವಾಗದೇ ವಿಜ್ಞಾನ ನಮ್ಮನ್ನು ಆಳಿದರೆ ಅದು ಒಳ್ಳೆಯ ಲಕ್ಷಣವಲ್ಲ. ಸೇವಾ ಕ್ಷೇತ್ರವಾಗಿರುವ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದಿಂದ ಸಮಾಜದಲ್ಲಿ ಜನರ ನಡುವೆ ಕಂದಕ ನಿರ್ಮಾಣವಾಗಿದೆ ಎಂದು ಹಾವೇರಿಯಲ್ಲಿನ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಚಿನ್ನಪ್ಪಗೌಡ ಅಭಿಪ್ರಾಯಪಟ್ಟಿದ್ದಾರೆ.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ 152ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ ಅವರು, ಅಗತ್ಯ ಮತ್ತು ಆದ್ಯತೆಗೆ ತಕ್ಕಂತೆ ಸಂಪನ್ಮೂಲದ ಬಳಕೆಯಾಗಬೇಕು. ಮಾನವಿಕ ವಿಭಾಗಕ್ಕೂ ಸೂಕ್ತ ಮಾನ್ಯತೆ ಸಿಗಬೇಕು. ನೂತನ ಶಿಕ್ಷಣ ಪದ್ಧತಿ ಜಾರಿಯಾದರೆ ಮುಂದಿನ ದಶಕದಲ್ಲಿ ದೇಶದ ಶಿಕ್ಷಣ ಪದ್ಧತಿಯಲ್ಲಿ ಧನಾತ್ಮಕ ಬದಲಾವಣೆ ಆಗುವ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ನೂತನ ಶಿಕ್ಷಣ ಪದ್ಧತಿ ಜಾರಿಯಾಗುವುದರಲ್ಲಿ ಯಾರಿಗೂ ಸಂದೇಹಬೇಡ ಎಂದರು.

ಇದೇ ವೇಳೆ ಕಾಲೇಜಿನ 150ನೇ ವರ್ಷದ ಅಂಗವಾಗಿ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ನಡಾವಳಿಯ ಗ್ರಂಥರೂಪವನ್ನು ಗಣ್ಯರು ಬಿಡುಗಡೆಗೊಳಿಸಿದರು. ಕಾಲೇಜಿನ ನೂತನ ಪ್ರವೇಶ ದ್ವಾರವನ್ನು ಕುಲಪತಿ ಲೋಕಾರ್ಪಣೆಗೊಳಿಸಿದರು.

ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲೇ ಶೈಕ್ಷಣಿಕ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. 2018-19ನೇ ಸಾಲಿನ ಬಿ.ಎಸ್ಸಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ 10ನೇ ರ್ಯಾಂಕ್ ಗಳಿಸಿದ ಶರಣ್ಯಾ ಡಿ.ಕೆ., ಅರ್ಥಶಾಸ್ತ್ರದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ‘ಡಾ.ಎಂ.ವೀರಪ್ಪ ಮೊಯ್ಲಿ’ ಅವರ ಚಿನ್ನದ ಪದಕಕ್ಕೆ ಭಾಜನರಾಗಿರುವ ಪವನ್ ಕುಮಾರ್ ಆಚಾರ್ಯ, ಹಿಂದಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ವಿವಿ ಮಟ್ಟದಲ್ಲಿ ಮೊದಲ ರ್ಯಾಂಕ್ ಪಡೆದ ರಕ್ಷಿತಾ, ಯೋಗ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ರ್ಯಾಂಕ್ ಪಡೆದ ಡಾ.ವಿನಯ ಪೂರ್ಣಿಮಾ ಎಸ್. ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರ್ನಲ್ ಶರತ್ ಭಂಡಾರಿ, ಮಂಗಳೂರು ವಿವಿಯ ಸಿಂಡಿಕೇಟ್ ಮಂಡಳಿ ಸದಸ್ಯರ ವಿ.ಚಂದ್ರ, ವಿದ್ಯಾರ್ಥಿ ಸಂಘದ ಉಪನಿರ್ದೇಶಕ ಡಾ.ಎ. ಹರೀಶ್, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್, ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ಕುಮಾರ ಸುಬ್ರಹ್ಮಣ್ಯ ಭಟ್ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News