ಕಾಪು ಲೈಟ್ ಹೌಸ್: ಎನ್ಡಿಆರ್ ಎಫ್ ಬೆಟಾಲಿಯನ್ ಪರಿಶೀಲನೆ
ಕಾಪು : ಮಳೆಯಿಂದ ಹಾನಿಗೊಳಗಾದ ಕಾಪು ಲೈಟ್ ಹೌಸ್ ಪ್ರದೇಶಕ್ಕೆ ಎನ್ಡಿಆರ್ಆಫ್ 10 ಬೆಟಾಲಿಯನ್ ಪಡೆ ಬುಧವಾರ ಸಂಜೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು.
ಎನ್ಡಿಆರ್ಎಫ್ನ ತಂಡದ ಕಮಾಂಡರ್ ಗೋಪಾಲ್ ಲಾಲ್ ಮೀನಾ ಮಾತನಾಡಿ, ಕರಾವಳಿ ಪ್ರದೇಶವನ್ನೇ ಹೊಂದಿರುವ ಉಡುಪಿ ಜಿಲ್ಲೆಯುದ್ದಕ್ಕೂ ಚಾಚಿರುವ ಬೀಚ್ ಪ್ರದೇಶದ ಜನರು ಮುಂದಿನ ದಿನಗಳಲ್ಲಿ ಎಚ್ಚರ ವಹಿಸಬೇಕಾದ ಅಗತ್ಯತೆಯಿದೆ ಎಂದು ಹೇಳಿದರು.
ಉಡುಪಿ ಜಿಲ್ಲೆಯಲ್ಲಿ ಭಾರೀ ಹಾನಿಯಾಗಿದೆ. ಕಾಪು ಲೈಟ್ ಹೌಸ್ ಪರಿಸರದಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ಇಲ್ಲಿಗೆ ಸಂಬಂಧಪಟ್ಟ ಇಲಾಖೆಗಳೇ ಭೇಟಿ ನೀಡಿ, ಹಾನಿ ಪರಿಶೀಲನೆ ನಡೆಸಿ ದುರಸ್ತಿಗೆ ಬೇಕಾದ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.
ಉಡುಪಿ ಜಿಲ್ಲೆಯ ಪೆರಂಪಳ್ಳಿ, ಪಾಸ್ಕುದ್ರು, ಕಲ್ಯಾಣಪುರ, ಬ್ರಹ್ಮಾವರ, ಉಪ್ಪೂರು, ಶಿವಳ್ಳಿ, ಆರೂರು, ಹಿರಿಯಡಕ ಮತ್ತು ಕಾಪು ಸೇರಿದಂತೆ ವಿವಿಧೆಡೆ ಯಶಸ್ವೀ ಕಾರ್ಯಾಚರಣೆ ನಡೆಸಲಾಗಿದ್ದು, 300ಕ್ಕೂ ಅಧಿಕ ಮಂದಿಯನ್ನು ಪ್ರವಾಹ ಕಾಲದಲ್ಲಿ ರಕ್ಷಿಸಲಾಗಿದೆ. ಪಾಸ್ ಕುದ್ರು, ಆರೂರು ಮತ್ತು ಕಲ್ಯಾಣಪುರ ಪರಿಸರದಲ್ಲಿ ಭಾರೀ ಅಪಾಯದ ಸ್ಥಿತಿಯ ನಡುವೆಯೂ 70 ಮಂದಿಯನ್ನು ರಕ್ಷಿಸಲಾಗಿದೆ. ಜನರೊಂದಿಗೆ ಜಾನುವಾರುಗಳನ್ನೂ ರಕ್ಷಿಸಲಾಗಿದ್ದು ನಮ್ಮೊಂದಿಗೆ ಸ್ಥಳೀಯರೂ ಸೇರಿದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಗ್ನಿಶಾಮಕದಳ, ಗೃಹರಕ್ಷಕದಳ ಮತ್ತು ಜನಪ್ರತಿನಿಗಳ ತಂಡ ಸಂಪೂರ್ಣವಾಗಿ ಸಹಕಾರ ನೀಡಿದೆ ಎಂದರು.