ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣ ; ಕೃತ್ಯ ಎಸಗಿದ 36ಗಂಟೆಗಳಲ್ಲಿ ಆರೋಪಿಗಳ ಬಂಧನ: ಉಡುಪಿ ಎಸ್ಪಿ

Update: 2020-09-26 14:36 GMT

ಹಿರಿಯಡ್ಕ, ಸೆ.26: ಹಿರಿಯಡ್ಕ ಪೇಟೆಯಲ್ಲಿ ಸೆ.24ರಂದು ಹಾಡಹಗಲೇ ನಡೆದ ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಕೃತ್ಯ ಎಸಗಿದ 36ಗಂಟೆಗಳೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಕಾರ್ಕಳ ತಾಲೂಕಿನ ಮಾಳ ಸಮೀಪದ ಎಸ್.ಕೆ.ಬಾರ್ಡರ್ ಬಳಿ ಸೆ.26ರಂದು ಬೆಳಗಿನ ಜಾವ ಆರು ಗಂಟೆ ಸುಮಾರಿಗೆ ಬೇರೆ ಕಡೆ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಮಂಗಳೂರು ಜೋಕಟ್ಟೆಯ ತೋಕೂರಿನ ಮನೋಜ್ ಕುಲಾಲ್ ಯಾನೆ ಮನೋಜ್ ಕೋಡಿಕೆರೆ(37), ಕಾಟಿಪಳ್ಳ ಕೃಷ್ಣಾಪುರದ ಚಿತ್ತರಂಜನ್ ಪೂಜಾರಿ (27), ಬಂಟ್ವಾಳ ಪೊಳಲಿಯ ಚೇತನ್ ಯಾನೆ ಚೇತು ಪಡೀಲ್(32), ಬಂಟ್ವಾಳ ಸಂಗಬೆಟ್ಟುವಿನ ರಮೇಶ್ ಪೂಜಾರಿ (38), ಕಾಟಿಪಳ್ಳ ಕುತ್ತೆತ್ತೂರಿನ ದೀಕ್ಷಿತ್ ಶೆಟ್ಟಿ ಯಾನೆ ದೇವಿಪ್ರಸಾದ್ (29) ಬಂಧಿತ ಆರೋಪಿಗಳು.

ಹಣಕಾಸಿನ ವ್ಯವಹಾರ ಕೊಲೆಗೆ ಕಾರಣ

ಕಿಶನ್ ಹೆಗ್ಡೆ ಮತ್ತು ಮನೋಜ್ ನಡುವಿನ ಹಣಕಾಸಿನ ವ್ಯವಹಾರ ಮತ್ತು ವೈಯಕ್ತಿಕ ವೈಷಮ್ಯವೇ ಕೊಲೆಗೆ ಕಾರಣ ಆಗಿದೆ. ಮಂಗಳೂರಿನಲ್ಲಿ ವಾಸವಾಗಿರುವ ಕಿಶನ್ ಹೆಗ್ಡೆಯನ್ನು ಆರೋಪಿಗಳು ಸೆ. 24ರಂದು ಮಂಗಳೂರಿನಿಂದ ಎರಡು ಕಾರುಗಳನ್ನು ಬೆನ್ನತ್ತಿ ಬಂದು ಕೊಲೆ ಮಾಡಿ ದ್ದಾರೆ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ಬಳಿಕ ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರುಗಳನ್ನು ಬಿಟ್ಟು ಬೇರೆ ಕಾರಿನಲ್ಲಿ ಚಿಕ್ಕಮಗಳೂರು, ಹಾಸನದಲ್ಲಿ ತಿರುಗಾಡಿದ್ದರು. ನಂತರ ಎಸ್.ಕೆ.ಬಾರ್ಡರ್ ಬಳಿಯಿಂದ ಬೇರೆ ಕಡೆಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಯಂತೆ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸಿದೆ. ಕೃತ್ಯಕ್ಕೆ ಬಳಸಿದ ಮತ್ತು ಪರಾರಿಯಾಗಲು ಬಳಸಿದ ಮೂರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಈ ಕೊಲೆಯನ್ನು ಇನ್ನು ಎಷ್ಟು ಮಂದಿ ಆರೋಪಿಗಳು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಇಂದು ರಾತ್ರಿ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗುವುದು. ಕೊಲೆಯಾಗಿರುವ ಕಿಶನ್ ಹೆಗ್ಡೆ, ಕೊಲೆ ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳ ಆರೋಪಿಯಾಗಿದ್ದಾನೆ ಎಂದು ಅವರು ಹೇಳಿದರು.

ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಮತ್ತು ಬ್ರಹ್ಮಾವರ ಎಸ್ಸೈ ರಾಘ ವೇಂದ್ರ ಅವರ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿದೆ. ಈ ಕಾರ್ಯಾ ಚರಣೆಯಲ್ಲಿ ಎಎಸ್ಸೈ ಕೃಷ್ಣಪ್ಪ, ಸಿಬ್ಬಂದಿಗಳಾದ ವಾಸು ಪೂಜಾರಿ, ಗಣೇಶ್, ಪ್ರದೀಪ್, ರವಿ, ಶೇಖರ್, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ಮಣಿಪಾಲ ನಿರೀಕ್ಷಕ ಮಂಜುನಾಥ್, ಡಿಸಿಐಬಿ ನಿರೀಕ್ಷಕ ಮಂಜಪ್ಪ, ಕಾಪು ನಿರೀಕ್ಷಕ ಮಹೇಶ್ ಪ್ರಸಾದ್, ಬ್ರಹ್ಮಾವರ ಠಾಣೆ ಸಿಬ್ಬಂದಿಗಳಾದ ದಿಲೀಪ್ ಸತೀಶ್, ಅಣ್ಣಪ್ಪ, ಕೋಟ ಎಸ್ಸೈ ಸಂತೋಷ್, ಚಾಲಕ ಮಂಜು, ಹಿರಿಯಡ್ಕ ಎಸ್ಸೈ ಸುಧಾಕರ ತೋನ್ಸೆ, ಎಎಸ್ಸೈಗಳಾದ ಗಂಗಪ್ಪ, ಜಯಂತ್, ಪರಮೇಶ್ವರ್, ಸಿಬ್ಬಂದಿಗಳಾದ ದಿನೇಶ್, ರಘು, ಸಂತೋಷ್, ಉದಯ ಕಾಮತ್, ಶಶಿ ಕುಮಾರ್, ನಿತಿನ್, ಹರೀಶ್, ಇಂದ್ರೇಶ್, ಭೀಮಪ್ಪ, ಆನಂದ ಸಹಕರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಜೈಶಂಕರ್ ಹಾಜರಿದ್ದರು.

ಎಲ್ಲ ಆರೋಪಿಗಳೂ ರೌಡಿಶೀಟ್ 

ಪ್ರಮುಖ ಆರೋಪಿ ಮನೋಜ್ ವಿರುದ್ಧ ಮಂಗಳೂರು, ಸುರತ್ಕಲ್, ಪಣಂಬೂರು, ಕಾವೂರು, ಬರ್ಕೆ, ಮುಲ್ಕಿ, ಬಜ್ಪೆ ಠಾಣೆಗಳಲ್ಲಿ ಕೊಲೆ, ಹಲ್ಲೆ, ಜೀವಬೆದರಿಕೆ ಸಹಿತ ಒಟ್ಟು 17 ಪ್ರಕರಣಗಳು ದಾಖಲಾಗಿವೆ.

ಚಿತ್ತರಂಜನ್ ಪೂಜಾರಿ ವಿರುದ್ಧ ಸುರತ್ಕಲ್, ಮುಲ್ಕಿ, ಕಾರ್ಕಳ ನಗರ ಠಾಣೆ ಗಳಲ್ಲಿ ಹಲ್ಲೆ, ಜೀವಬೆದರಿಕೆ, ಶಸ್ತ್ರಾಸ್ತ್ರ ಕಾಯ್ದೆ ಸಹಿತ ಒಟ್ಟು ಐದು ಪ್ರಕರಣಗಳು, ಚೇತನ್ ವಿರುದ್ಧ ಕದ್ರಿ, ಬಜಪೆ, ಕಾವೂರು ಠಾಣೆಗಳಲ್ಲಿ ಕೊಲೆ, ಹಲ್ಲೆ, ಜೀವ ಬೆದರಿಕೆ, ಶಸ್ತ್ರಾಸ್ತ್ರ ಕಾಯಿದೆ ಸಹಿತ ಐದು ಪ್ರಕರಣ ಗಳು, ರಮೇಶ್ ಪೂಜಾರಿ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಒಂದು ಹಲ್ಲೆ ಪ್ರಕರಣ, ದೀಕ್ಷಿತ್ ಶೆಟ್ಟಿ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಹಲ್ಲೆ ಪ್ರಕರಣಗಳು ದಾಖಲಾಗಿವೆ. ಇವರೆಲ್ಲರು ಕೂಡ ರೌಡಿ ಶೀಟರ್‌ಗಳಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News