ಪ್ರವಾಸಿ ತಾಣಗಳ ವಿಷನ್ ಡಾಕ್ಯುಮೆಂಟ್ ಶೀಘ್ರವೇ ಸರಕಾರಕ್ಕೆ ಸಲ್ಲಿಕೆ: ಉಡುಪಿ ಡಿಸಿ ಜಗದೀಶ್

Update: 2020-09-27 12:01 GMT

ಉಡುಪಿ, ಸೆ.27: ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ಹಾಗೂ ಅನುದಾನ ಒದಗಿಸುವ ಕುರಿತು ತಯಾರಿಸಲಾಗುತ್ತಿರುವ ವಿಷನ್ ಡಾಕ್ಯುಮೆಂಟ್ ಇದೀಗ ಅಂತಿಮ ಹಂತದಲ್ಲಿದೆ. ಈ ಡಾಕ್ಯುಮೆಂಟ್ ಪೂರ್ಣಗೊಂಡ ಕೂಡಲೇ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮಲ್ಪೆಅಭಿವೃದ್ಧಿ ಸಮಿತಿ, ನೆಹರು ಯುವ ಕೇಂದ್ರ, ಕರಾವಳಿ ಪ್ರವಾಸೋದ್ಯಮ ಸಂಘಟನೆ ಹಾಗೂ ಸೌಟ್ಕ್ ಆ್ಯಂಡ್ ಗೈಡ್ಸ್ ಇವುಗಳ ಸಹಯೋಗದಲ್ಲಿ ರವಿವಾರ ಮಲ್ಪೆ ಬೀಚ್‌ನಲ್ಲಿ ಆಯೋಜಿಸಲಾದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯ ಕ್ರಮಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಉಡುಪಿ, ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಷನ್ ಡಾಕ್ಯು ಮೆಂಟ್ ಮಾಡುತ್ತಿರುವ ಏಕೈಕ ಜಿಲ್ಲೆಯಾಗಿದೆ. ಉಡುಪಿ ಜಿಲ್ಲೆಯನ್ನು ಸರಕಾರ ಪ್ರವಾಸೋದ್ಯಮಕ್ಕೆ ಆದ್ಯತಾ ಕ್ಷೇತ್ರವನ್ನಾಗಿ ಪರಿಗಣಿಸಿದ್ದು, ಈ ಸಂಬಂಧ ವಿಷನ್ ಡಾಕ್ಯುಮೆಂಟ್‌ನ್ನು ಸಲ್ಲಿಸಿದ ಬಳಿಕ, ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನ ಪಡೆದುಕೊಂಡು ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತುಂಗಕ್ಕೇರಿಸಲಾಗು ವುದು ಎಂದು ಅವರು ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶ ಇದ್ದು, ಪ್ರವಾಸೋದ್ಯಮಕ್ಕೆ ಬೇಕಾದ ಅತ್ಯುತ್ತಮ ವಾತಾವರಣವನ್ನು ಇಲ್ಲಿ ಇದೆ. ಆದರೆ ಗೋವಾದಿಂದ ಹೊರಟ ಪ್ರವಾಸಿಗರು ಉಡುಪಿಯನ್ನು ಬಿಟ್ಟು ಮಂಗಳೂರು, ಕೇರಳ, ಕಡೆ ಪ್ರವಾಸ ಹೋಗುತ್ತಿರುವುದು ನಮಗೆ ಇರುವ ಬಹಳ ಮುಖ್ಯ ವಾದ ಕೊರತೆಯಾಗಿದೆ. ಗೋವಾದಿಂದ ಹೊರಡುವ ಪ್ರವಾಸಿಗರು ಉಡುಪಿಗೆ ಬರುವಂತೆ ಮಾಡಿದರೆ ನಾವು ಪ್ರವಾಸೋದ್ಯಮದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತೆ ಎಂದು ಅವರು ಅಭಿಪ್ರಾಯ ಪಟ್ಟರು.

ಸಂಪನ್ಮೂಲ ವ್ಯಕ್ತಿ ಪ್ರೊ.ಈಶ್ವರ್ ಮಾತನಾಡಿದರು. ಅಧ್ಯಕ್ಷತೆಯನ್ನು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ವಹಿಸಿದ್ದರು. ಮಾಸ್ಕ್ ಗಳನ್ನು ತಯಾರಿಸಿ ಯೋಧರಿಗೆ ಕಳಳುಹಿಸಿಕೊಟ್ಟ ಇಶಿತಾ ಆಚಾರ್‌ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಸಿಇಓ ಪ್ರೀತಿ ಗೆಹ್ಲೋತ್, ತಾಪಂ ಅಧ್ಯಕ್ಷೆ ಸಂಧ್ಯಾ ಕಾಮತ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ ಶೆಟ್ಟಿ, ಭಾರತ್ ಸೌಟ್ಕ್ ‌ಗೈಡ್ಸ್‌ನ ಜಿಲ್ಲಾ ಅಧಿಕಾರಿ ಡಾ.ವಿಜಯೇಂದ್ರ, ನಗರಸಭೆ ಸದಸ್ಯರಾದ ಶೇಷ ಕೊಡವೂರು, ಸುಂದರ್ ಕಾಮಾಡಿ, ಕಾರ್ಕಳ ಪುರಸಭೆ ಸದಸ್ಯೆ ಆ್ಯಡ್ಲಿನ್ ಉಪಸ್ಥಿತರಿದ್ದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯ್ಕ ಸ್ವಾಗತಿಸಿದರು. ಮಲ್ಪೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಹಾಗೂ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಡಿಸಿ ಸಹಿತ ಎಲ್ಲ ಗಣ್ಯರು ಬೀಚ್‌ನ ಸುತ್ತಮುತ್ತ ಸ್ವಚ್ಛತಾ ಕಾರ್ಯ ದಲ್ಲಿ ಭಾಗಿಯಾದರು.

ಬ್ಲೂಫ್ಲಾಗ್ ಮಾದರಿಯಲ್ಲಿ ಎಲ್ಲ ಬೀಚ್‌ಗಳ ಅಭಿವೃದ್ಧಿ

ಉಡುಪಿ ಜಿಲ್ಲೆಯ ಎಲ್ಲ ಬೀಚ್‌ಗಳನ್ನು ಬ್ಲೂಫ್ಲಾಗ್ ಮಾದರಿಯಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಮಾಡುವ ಕುರಿತು ಸರ್ವೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಪಡುಬಿದ್ರಿಯ ಎಂಡ್‌ಪಾಯಿಂಟ್ ರಾಷ್ಟ್ರೀಯ ಬ್ಲೂ ಪ್ಲಾಗ್ ಬೀಚ್ ಎಂಬ ಮನ್ನಣೆಯನ್ನು ಪಡೆದಿದ್ದು, ಮುಂದೆ ಅಂತಾರಾಷ್ಟ್ರೀಯ ಜ್ಯೂರಿಗಳು ಆಗಮಿಸಿ ಈ ಬೀಚನ್ನು ಗುರುತಿಸಿದರೆ, ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ದೊರೆಯಲು ಸಾಧ್ಯವಾಗುತ್ತದೆ. ಪ್ರವಾಸಿಗರನ್ನು ಬೀಚ್ ಪ್ರವಾಸೋದ್ಯಮಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕಾಗಿದೆ. ಪ್ರವಾಸಿಗರಿಗೆ ಯಾವುದೇ ಕೆಟ್ಟ ಅನುಭವ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News