ಗುಜರಾತ್: ಬ್ರಾಹ್ಮಣವಾದ ಟೀಕಿಸಿದ ಆರೋಪ ; ದಲಿತ ನ್ಯಾಯವಾದಿಯ ಹತ್ಯೆ

Update: 2020-09-27 15:18 GMT

ಗಾಂಧೀನಗರ, ಸೆ.27: ಬ್ರಾಹ್ಮಣವಾದವನ್ನು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಆರೋಪದಲ್ಲಿ ಗುಜರಾತ್‌ನ ಕಛ್ ಜಿಲ್ಲೆಯಲ್ಲಿ ದಲಿತ ನ್ಯಾಯವಾದಿಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್ ’ ವರದಿ ಮಾಡಿದೆ. ಇಂಡಿಯನ್ ಲೀಗಲ್ ಪ್ರೊಫೆಷನಲ್ಸ್ ಅಸೋಸಿಯೇಷನ್‌ನ ಹಿರಿಯ ಸದಸ್ಯ, ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ಉದ್ಯೋಗಿಗಳ ಒಕ್ಕೂಟದ ಸದಸ್ಯ, ಸಾಮಾಜಿಕ ಹೋರಾಟಗಾರ ಹಾಗೂ ನ್ಯಾಯವಾದಿ ದೇವ್‌ಜಿ ಮಹೇಶ್ವರಿಯನ್ನು ಅವರ ಕಚೇರಿಯಲ್ಲೇ ಶುಕ್ರವಾರ ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ. ದುಷ್ಕರ್ಮಿಯೊಬ್ಬ ಮಹೇಶ್ವರಿಯವರನ್ನು ಹಿಂಬಾಲಿಸಿ, ಕಚೇರಿಯೊಳಗೆ ಹೋಗಿರುವುದು ಮತ್ತು ಕೆಲ ಹೊತ್ತಿನ ಬಳಿಕ ಹೊರಗೆ ಓಡಿ ಬರುತ್ತಿರುವುದು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಆಧಾರದಲ್ಲಿ ಮುಂಬೈಯ ಮಲಾಡ್‌ನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾವಲ್ ಹಾಗೂ ಈತನ ಐವರು ಸಹಚರರನ್ನೂ ಬಂಧಿಸಲಾಗಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ ಇತರ ನಾಲ್ವರು ಆರೋಪಿಗಳ ಪತ್ತೆಗೆ ಶೋಧ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಎಸ್‌ಸಿ, ಎಸ್‌ಟಿ ಸಮುದಾಯದವರು ಹಿಂದೂಗಳಲ್ಲ ಎಂದು ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ಉದ್ಯೋಗಿಗಳ ಒಕ್ಕೂಟದ ಅಧ್ಯಕ್ಷ ವಾಮನ್ ಮೆಶ್ರಮ್ ಭಾಷಣದಲ್ಲಿ ಹೇಳಿದ್ದ ಕಾರ್ಯಕ್ರಮದ ವೀಡಿಯೊವನ್ನು ಮಹೇಶ್ವರಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ ಬ್ರಾಹ್ಮಣವಾದವನ್ನು ಟೀಕಿಸಿ ಮಹೇಶ್ವರಿ ಮಾಡಿದ್ದ ಪೋಸ್ಟ್‌ಗೆ ರಾವಲ್ ಆಕ್ಷೇಪ ಎತ್ತಿದ್ದ ಮತ್ತು ಇಂತಹ ಹೇಳಿಕೆ ಪೋಸ್ಟ್ ಮಾಡಿದರೆ ಅಥವಾ ಟೀಕಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದ ಎಂದು ಮುಂಬೈ ಕ್ರೈಂಬ್ರ್ಯಾಂಚ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಮಹೇಶ್ವರಿ ಮತ್ತು ರಾವಲ್ ಇಬ್ಬರೂ ಕಛ್ ಜಿಲ್ಲೆಯ ರಾಪರ್ ನಗರದ ನಿವಾಸಿಗಳಾಗಿದ್ದು ಈ ಹಿಂದೆಯೂ ಹಲವು ಬಾರಿ ಮಹೇಶ್ವರಿಗೆ ರಾವಲ್ ಬೆದರಿಕೆ ಒಡ್ಡಿದ್ದ. ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ನಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನ್ಯಾಯವಾದಿ ಮಹೇಶ್ವರಿಯ ಹತ್ಯೆಯಿಂದ ರಾಪರ್ ನಗರದಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಲಿತ ಸಮುದಾಯದ ಸದಸ್ಯರು ಆಗ್ರಹಿಸಿದ್ದಾರೆ. ಹತ್ಯೆಯಲ್ಲಿ ಭಾಗಿಗಳಾಗಿರುವ ಎಲ್ಲಾ 9 ಆರೋಪಿಗಳನ್ನೂ ಬಂಧಿಸುವವರೆಗೆ ಮಹೇಶ್ವರಿಯ ಮೃತದೇಹವನ್ನು ಸ್ವೀಕರಿಸಲು ಕುಟುಂಬದವರು ನಿರಾಕರಿಸಿದ್ದಾರೆ. ಹತ್ಯೆಯ ಹಿಂದಿನ ಉದ್ದೇಶ ತಿಳಿದುಬಂದಿಲ್ಲ ಎಂದು ಐಜಿಪಿ ಜೆ.ಆರ್ ಮೊಥಾಲಿಯಾ ಹೇಳಿದ್ದಾರೆ. ಆದರೆ ಆಸ್ತಿಯ ವಿವಾದ ಹತ್ಯೆಗೆ ಮೂಲ ಕಾರಣ ಎಂದು ಸ್ಥಳೀಯ ದಲಿತ ಮುಖಂಡರು ಹಾಗೂ ಮೃತರ ಕುಟುಂಬದವರು ಹೇಳಿರುವುದಾಗಿ ವರದಿಯಾಗಿದೆ.

ಧೈರ್ಯವಿದ್ದರೆ ದುಷ್ಕರ್ಮಿಗಳನ್ನು ಬಂಧಿಸಿ: ಸರಕಾರಕ್ಕೆ ಜಿಗ್ನೇಶ್ ಮೆವಾನಿ ಸವಾಲು

ದಲಿತ ಮುಖಂಡ, ಹಿರಿಯ ನ್ಯಾಯವಾದಿ, ಹೋರಾಟಗಾರ ದೇವ್‌ಜಿ ಮಹೇಶ್ವರಿ ಹತ್ಯೆಯನ್ನು ಖಂಡಿಸಿರುವ ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ, ಹತ್ಯೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮಹೇಶ್ವರಿಯ ಪತ್ನಿ ನಡೆಸುತ್ತಿರುವ ಪ್ರತಿಭಟನೆಯ ವೀಡಿಯೊವನ್ನು ಶೇರ್ ಮಾಡಿದ್ದಾರೆ.

ಪತಿಯ ಸಾವಿಗೆ ನ್ಯಾಯ ಒದಗಿಸುವವರೆಗೆ ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ಘೋಷಿಸಿರುವ ಈ ಮಹಿಳೆ ನನ್ನ ಹೀರೋ ಆಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ , ಧೈರ್ಯವಿದ್ದರೆ ದುಷ್ಕರ್ಮಿಗಳನ್ನು ಬಂಧಿಸುವಂತೆ ಸರಕಾರ ಮತ್ತು ಮುಖ್ಯಮಂತ್ರಿ ವಿಜಯ್ ರೂಪಾನಿಗೆ ಸವಾಲೆಸೆದಿದ್ದಾರೆ. ಎಲ್ಲಿದೆ ನಿಮ್ಮ ಪೊಲೀಸರ ಗುಪ್ತಚರ ಪಡೆ? ದಲಿತರನ್ನು ಹಾಡುಹಗಲೇ ಹತ್ಯೆ ಮಾಡಲಾಗುತ್ತಿದೆ, ಗುಜರಾತ್‌ನಲ್ಲಿ ಕಾನೂನು ಸುವ್ಯವಸ್ಥೆಯ ಕುರಿತ ತಮಾಷೆ ಇದು’ ಎಂದು ಮೆವಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News