ಮಣಿಪಾಲ, ಉಡುಪಿ ನಾಲ್ಕು ಕಡೆ ಸುಲಿಗೆ ಪ್ರಕರಣ : ಆರೋಪಿ ಸೆರೆ, ಸೊತ್ತು ವಶ
ಉಡುಪಿ, ಸೆ. 27: ಉಡುಪಿ ಮತ್ತು ಮಣಿಪಾಲ ಠಾಣಾ ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಸೆ.19ರ ಬೆಳಗಿನ ಜಾವ ಕೇವಲ ಎರಡು ಗಂಟೆ ಅವಧಿಯಲ್ಲಿ ಬೈಕ್ ಸವಾರರನ್ನು ಗುರಿಯಾಗಿರಿಸಿಕೊಂಡು ನಡೆಸಿದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಪೊಲೀಸರು ಓರ್ವನನ್ನು ಸೆ.26ರಂದು ಮಣಿಪಾಲದಲ್ಲಿ ಬಂಧಿಸಿದ್ದಾರೆ.
ಉಡುಪಿ ಎಸ್ಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಈ ಕುರಿತು ಮಾಹಿತಿ ನೀಡಿದರು. ಮಲ್ಲಾರು ಕೊಂಬಗುಡ್ಡೆಯ ಮೊಹಮ್ಮದ್ ಆಶಿಕ್(19) ಬಂಧಿತ ಆರೋಪಿ ಯಾಗಿದ್ದು, ಇನ್ನೋರ್ವ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಲು ಕಾರ್ಯ ತಂತ್ರ ರೂಪಿಸಲಾಗಿದೆ ಎಂದರು.
ಬೈಕಿನಲ್ಲಿ ಬಂದ ಆರೋಪಿಗಳು ಮಣಿಪಾಲ ಠಾಣೆಯ ವ್ಯಾಪ್ತಿಯ ಮೂರು ಮತ್ತು ಉಡುಪಿ ಠಾಣೆಯ ವ್ಯಾಪ್ತಿಯ ಒಂದು ಕಡೆ ಸುಲಿಗೆ ನಡೆಸಿದ್ದರು. ಈ ಘಟನೆಗಳು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಮತ್ತು ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್ ಗೌಡ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು.
ಸೆ.26ರಂದು ಮತ್ತೆ ಸುಲಿಗೆ ನಡೆಸಲು ಯೋಜನೆ ಹಾಕಿಕೊಂಡು ಉಡುಪಿ -ಮಣಿಪಾಲ ಪರಿಸರದಲ್ಲಿ ಸುತ್ತಾಡುತ್ತಿದ್ದ ಆಶಿಕ್ನನ್ನು ಪೊಲೀಸರು ಬಂಧಿಸಿ ದ್ದಾರೆ. ಬಂಧಿತನಿಂದ ಯಮಹಾ ಬೈಕ್, ಸ್ಕ್ರೂಡ್ರೈವರ್, ಒಂದು ಚೂರಿ, ಸುಲಿಗೆ ಮಾಡಿದ ಮೊಬೈಲ್ನ್ನು ವಶಪಡಿಸಿಕೊಳ್ಳಲಾಗಿದೆ. ಈತನಿಂದ ಬೆಂಗಳೂರಿನಲ್ಲಿ ಕಳ್ಳತನ ಮಾಡಿಕೊಂಡು ಬಂದಿದ್ದ ಎರಡು ಲಕ್ಷ ರೂ. ವೌಲ್ಯದ ಬುಲೆಟ್ ಬೈಕನು್ನ ಕೂಡ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ಇಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸೆ.14ರವರೆಗೆ ನ್ಯಾಯಾಂಗ ಬಂಧನ ವಿಧಿಸ ಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಪೊಲೀಸ್ ನಿರೀಕ್ಷಕರಾದ ಮಂಜುನಾಥ್, ಮಂಜುನಾಥ್ ಗೌಡ, ಮಣಪಾಲ ಎಸ್ಸೈ ರಾಜಶೇಖರ್ ಉಪಸ್ಥಿತರಿದ್ದರು.
ಕೊಲೆಯತ್ನ ಪ್ರಕರಣದ ಆರೋಪಿಗಳ ಬಂಧನ
ಸುಲಿಗೆ ಪ್ರಕರಣದ ಬಂಧಿತ ಆಶಿಕ್ ಭಾಗಿಯಾಗಿದ್ದ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಾರು ಗ್ರಾಮದ ಗುಡ್ಡೇಕೇರಿ ಎಂಬಲ್ಲಿ ಸೆ.22ರಂದು ನಡೆದ ಹಸನಬ್ಬ ಎಂಬವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಆಶಿಕ್ ಸಹಿತ ಐವರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಉಳಿದ ಆರೋಪಿಗಳನ್ನು ನಾವುಂದ ಬಡಾಕೆರೆಯ ಮುಹಮ್ಮದ್ ಆಸೀಫ್ ಯಾನೆ ರಮೀಝ್(30), ನಾವುಂದ ಎಂಜಿ ರೋಡ್ನ ಮಿಸ್ವಾ(22), ಇಜಾಝ್ ಅಹ್ಮದ್(19), ಮಲ್ಪೆ ಜೋಕಟ್ಟೆಯ ದಾವೂದ್ ಇಬ್ರಾಹಿಂ ಯಾನೆ ಇಬ್ಬಾ (26) ಎಂದು ಗುರುತಿಸಲಾಗಿದೆ.
ಈ ಪ್ರಕರಣದಲ್ಲಿ ಆಶಿಕ್ ಹೊರತು ಪಡಿಸಿ ಉಳಿದ ಆರೋಪಿಗಳನ್ನು ಸೆ.26 ರಂದು ಉದ್ಯಾವರದ ಜೈಹಿಂದ್ ಜಂಕ್ಷನ್ ಬಳಿ ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ ಎರಡು ಕಾರು, ಚೂರಿ, ಕತ್ತಿ, ಮೂರು ಮೊಬೈಲ್ ವಶಪಡಿಸಿ ಕೊಂಡಿದ್ದಾರೆ. ಈ ಎಲ್ಲ ಆರೋಪಿಗಳನ್ನು 15ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರಲ್ಲಿ ಮೂವರು ಗಾಂಜಾ ಸೇವನೆ ಆರೋಪಿ ಗಳಾಗಿದ್ದಾರೆ.