ಮಂಗಳೂರು ವಿವಿ ಕನ್ನಡ ವಿಭಾಗದ ಮುಖ್ಯಸ್ಥರಿಗೆ ನೋಟಿಸ್

Update: 2020-09-27 16:35 GMT

ಮಂಗಳೂರು, ಸೆ.27: ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ವಿಭಾಗದ ಸಮಸ್ಯೆಯಿಂದಾಗಿ ವಿವಿ ವ್ಯಾಪ್ತಿಯ ಐದು ಕಾಲೇಜುಗಳ ವಿದ್ಯಾರ್ಥಿಗಳು ಸೆ.29ರಂದು ಮತ್ತೆ ಕನ್ನಡ ಕಂಪ್ಯೂಟರ್ ಪರೀಕ್ಷೆ ಬರೆಯಬೇಕಾಗಿ ಬಂದಿದೆ. ಇದೇ ವೇಳೆ ನಿಗದಿತ ದಿನದಂದು ಪರೀಕ್ಷೆ ನಡೆಸದೆ ಕರ್ತವ್ಯಲೋಪ ನಡೆಸಿದ ವಿಭಾಗ ಮುಖ್ಯಸ್ಥರಿಗೆ ವಿವಿ ಆಡಳಿತ ನೋಟಿಸ್ ಜಾರಿ ಮಾಡಿದೆ.

ಮಂಗಳೂರು ವಿವಿ ವ್ಯಾಪ್ತಿಯ ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗಗಳ ಪರೀಕ್ಷೆ ನಡೆಯುತ್ತಿದ್ದು, ಇದುವರೆಗೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿತ್ತು. ಆದರೆ ಸೆ.25ರಂದು ನಿಗದಿಯಾದ ಕನ್ನಡ ಕಂಪ್ಯೂಟರ್ ಪರೀಕ್ಷೆ ಮಂಗಳೂರು ವಿವಿ ಆವರಣದೊಳಗಿನ ಕನ್ನಡ ವಿಭಾಗ ಹೊರತು ಪಡಿಸಿ ಬೇರೆ ನಾಲ್ಕು ಕಾಲೇಜುಗಳಲ್ಲಿ ನಡೆದಿತ್ತು. ವಿವಿ ಕನ್ನಡ ವಿಭಾಗದಲ್ಲಿ ಪರೀಕ್ಷೆ ನಡೆದಿರಲಿಲ್ಲ. ಇದಕ್ಕೆ ವಿಭಾಗ ಮುಖ್ಯಸ್ಥರು, ಪ್ರಶ್ನೆ ಪತ್ರಿಕೆ ಬಂದಿಲ್ಲ ಎಂದು ಸಬೂಬು ಹೇಳಿದ್ದರು. ಇದೀಗ ಮತ್ತೆ ಸೆ. 29ರಂದು ವಿವಿ ಕನ್ನಡ ವಿಭಾಗ ಸೇರಿದಂತೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ ಕಂಪ್ಯೂಟರ್ ಮರು ಪರೀಕ್ಷೆ ನಡೆಯಲಿದೆ.

ಆದರೆ ವಿಭಾಗ ಮುಖ್ಯಸ್ಥರ ಆರೋಪವನ್ನು ನಿರಾಕರಿಸಿರುವ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್.ಧರ್ಮ, ಕೋವಿಡ್ ಹಿನ್ನೆಲೆಯಲ್ಲಿ ಅಂಚೆ ಬದಲು ಇ ಮೇಲ್ ಮೂಲಕ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಸೂಚನೆ, ತಿಳಿವಳಿಕೆಗಳನ್ನು ನೀಡಲಾಗಿದೆ. ಅದೇ ರೀತಿ ವಿವಿ ಕನ್ನಡ ವಿಭಾಗಕ್ಕೂ ಮಾಹಿತಿ ಕಳುಹಿಸಲಾಗಿತ್ತು. ಅಲ್ಲದೆ ನಿಯಮಾವಳಿಯಂತೆ ಪ್ರಶ್ನೆ ಪತ್ರಿಕೆಯನ್ನೂ ಮುಂಚಿತವಾಗಿಯೇ ತಲುಪಿಸಲಾಗಿತ್ತು. ಆದರೆ ವಿಭಾಗ ಮುಖ್ಯಸ್ಥರು ನಿಗದಿತ ದಿನದಂದು ಪರೀಕ್ಷೆ ನಡೆಸಿಲ್ಲ. ಅವರು ಪ್ರಶ್ನೆ ಪತ್ರಿಕೆ ಸ್ವೀಕರಿಸಿದ್ದಕ್ಕೆ ನಮ್ಮಲ್ಲಿ ದಾಖಲೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ಗಂಭೀರ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ವಿಭಾಗ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿದೆ. ಎರಡು ದಿನದಲ್ಲಿ ಉತ್ತರಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್.ಧರ್ಮ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News