ಉಪ್ಪಿನಂಗಡಿ : ಕಾರು ಢಿಕ್ಕಿ ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Update: 2020-10-01 17:40 GMT

ಉಪ್ಪಿನಂಗಡಿ : ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ  ಇಲ್ಲಿನ ಎಚ್.ಎಂ. ಆಡಿಟೋರಿಯಂ ಬಳಿಯಲ್ಲಿ ಗುರುವಾರ ರಾತ್ರಿ ನಡೆದಿದ್ದು, ಢಿಕ್ಕಿ ಹೊಡೆದ ಕಾರು ನಿಲ್ಲಿಸದೇ ಪರಾರಿಯಾಗಿದೆ.

ಬಾರ್ಯ ಗ್ರಾಮದ ಬೇಂಗಿಲ ತುಂಬೆತ್ತಡ್ಕ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಮಹಮ್ಮದ್ ಆರಿಫ್  (23 ) ಮೃತರು. ಇವರು ಉಪ್ಪಿನಂಗಡಿ ಕಡೆಯಿಂದ ಕರಾಯ ಕಡೆಗೆ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ  ಕಾರು ಈತನ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಈ ಸಂದರ್ಭ ರಸ್ತೆಗೆಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡ ಆರಿಫ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು  ಪೊಲೀಸರು ತಿಳಿಸಿದ್ದಾರೆ.

 ಆರಿಫ್ ಉಪ್ಪಿನಂಗಡಿಯಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಕಳೆದ 2 ವರ್ಷಗಳಿಂದ ಸೇಲ್ಸ್ ಮ್ಯಾನ್ ಆಗಿ ಕೆಲಸದಲ್ಲಿ ಇದ್ದು, ಬುಧವಾರ ಮತ್ತು ಗುರುವಾರ ತನ್ನ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದ ಕಾರಣ ಕೆಲಸಕ್ಕೆ ರಜೆ ಹಾಕಿದ್ದರು. ಸಂಜೆ ಪೇಟೆಗೆ ಬಂದಿದ್ದ ಅವರು ಬೇಕರಿ ವಸ್ತುಗಳನ್ನು ಮತ್ತು ಫ್ರೂಟ್‍ಗಳನ್ನು ಖರೀದಿಸಿ ಮನೆಗೆ ಹೋಗುವಾಗ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News