ಗಾಂಧೀ ಚಿಂತನೆಯನ್ನು ಯುವಜನತೆ ಅಳವಡಿಸಿಕೊಳ್ಳಿ: ಉಡುಪಿ ಡಿಸಿ ಜಿ.ಜಗದೀಶ್
ಉಡುಪಿ, ಅ.2: ಮಹಾತ್ಮ ಗಾಂಧೀಜಿ ಸಮಾಜದ ಒಳಿತಿಗಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟ ಕಾರಣ ಈಗಲೂ ದೇಶದ ಜನರ ಮನೆ-ಮನಗಳಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ. ಅವರು ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ ದೊರಕಿಸಿಕೊಟ್ಟಿದ್ದು, ಅದರ ಸದ್ಬಳಕೆ ಆಗಬೇಕಾಗಿದೆ. ಯುವ ಜನತೆ ಗಾಂಧೀಜಿ ಅವರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಶುಕ್ರವಾರ, ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್ನಲ್ಲಿ ಆಯೋಜಿಸಿದ್ದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳ ಲಾಗಿದೆ. ಆದರೆ ಜನರು ರೋಗ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿ ಕೊಳ್ಳದೇ ಕೊನೆಯ ಹಂತದಲ್ಲಿ ನೇರವಾಗಿ ವೆಂಟಿಲೇಟರ್ ಚಕಿತ್ಸೆಗೆ ಆಗಮಿಸುತ್ತಿದ್ದಾರೆ. ಜಿಲ್ಲಾಡಳಿತ ಮೂಲಕ ಕೊರೋನಾ ಪರೀಕ್ಷೆ ಮತ್ತು ಚಿಕಿತ್ಸೆ ಸಂಪೂರ್ಣ ಉಚಿತ ವಾಗಿದ್ದು, 30,000ರೂ. ಬೆಲೆಯ ಇಂಜೆಕ್ಷನ್ನ್ನು ಸಹ ಉಚಿತವಾಗಿ ನೀಡಲಾ ಗುತ್ತಿದೆ. ಯುವ ಜನತೆ ಕೊರೋನಾ ಕುರಿತು ನಿರ್ಲಕ್ಷ ಮಾಡಿ, ನಿಮ್ಮ ನಿಮ್ಮ ಮನೆಗಳಲ್ಲಿರುವ ಹಿರಿಯರನ್ನು ಸಾವಿನ ಅಂಚಿಗೆ ದೂಡಬೇಡಿ. ಅವರನ್ನು ರಕ್ಷಿಸಿ ಕೊಳ್ಳಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಅಭಿಯಾನಕ್ಕೆ ಸಿದ್ಧತೆ: ಜಿಲ್ಲೆಯ ಹಿರಿಯ ವ್ಯಕ್ತಿಗಳನ್ನು ಕೊರೋನಾದಿಂದ ರಕ್ಷಿಸುವ ಸಲುವಾಗಿ ಜಿಲ್ಲೆಯಾದ್ಯಂತ ‘ನಮ್ಮ ಮನೆ ನಮ್ಮ ಹಿರಿಯರು’ ಎಂಬ ಅಭಿಯಾನಪ್ರಾರಂಭಿಸಲು ನಿರ್ಧರಿಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಗಾಂಧೀಜಿ ಸ್ಚಚ್ಛತೆ ಕುರಿತು ನೀಡಿದ ಸಂದೇಶದ ಅನುಷ್ಠಾನದ ಫಲಶೃತಿ ಎಲ್ಲೆಡೆ ಕಂಡುಬರುತ್ತಿದೆ. ಸಾರ್ವಜನಿಕರಲ್ಲಿ ಸ್ಚಚ್ಛತೆಯ ಬಗ್ಗೆ ಅರಿವು ಮೂಡಿದೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಹಾಗೂ ಇತರರು ಉಪಸ್ಥಿತರಿದ್ದರು.
ಗಣೇಶ್ ಗಂಗೊಳ್ಳಿ ಮತ್ತು ಬಳಗದಿಂದ ಗಾಂಧೀ ಭಜನೆ ಕಾರ್ಯಕ್ರಮ ನಡೆಯಿತು. ತ್ಯಾಜ್ಯ ನಿರ್ವಹಣೆ -ಮರುಬಳಕೆ ಕುರಿತು ಆಯೋಜಿಸಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.